ತುಮಕೂರು: ‘ಸರ್ಕಾರಕ್ಕೆ ಎಷ್ಟೇ ಆರ್ಥಿಕ ಹೊರೆಯಾದರೂ ಯಶಸ್ವಿನಿ ಆರೋಗ್ಯ ಸೇವಾ ಯೋಜನೆಯನ್ನು ಪುನಃ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಆಯೋಜಿಸಿರುವ ‘66ನೇ ಅಖಿಲ ಭಾರತ ಸಹಕಾರ ಸಪ್ತಾಹ’ ಉದ್ಘಾಟಿಸಿ ಅವರು ಮಾತನಾಡಿದರು.
‘ಯೋಜನೆ ಜಾರಿಗೆ ಬಹಳ ಒತ್ತಾಯ ಕೇಳಿ ಬರುತ್ತಿದೆ. ಯೋಜನೆಯಿಂದ 20 ರಿಂದ 25 ಲಕ್ಷ ರೈತರಿಗೆ ಅನುಕೂಲ ಆಗಲಿದೆ’ ಎಂದರು.
‘ತುಮಕೂರಿನಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಮತ್ತು ತಿಪಟೂರಿನ 100 ಎಕರೆ ಜಾಗದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪಿಸುವ ನಿರ್ಧಾರಗಳಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು' ಎಂದು ತಿಳಿಸಿದರು.