ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕುರಿತಂತೆ ವಿಡಂಬನಾತ್ಮಕ ಪೋಸ್ಟ್ ಹಾಕಿದ್ದಕ್ಕಾಗಿ ಹೆಸರಾಂತ ಕವಿ ಕೆ.ಸಚ್ಚಿದಾನಂದನ್ ಅವರ ಫೇಸ್ಬುಕ್ ಖಾತೆಯನ್ನು ಅಮಾನತ್ತಿನಲ್ಲಿ ಇಡಲಾಗಿದೆ.
‘24 ಗಂಟೆ ನಾನು ಯಾವುದೇ ಪೋಸ್ಟ್ ಕುರಿತು ಲೈಕ್ ಮಾಡುವಂತಿಲ್ಲ, ಅಭಿಪ್ರಾಯ ಹಾಕುವಂತಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ನೇರ ಚರ್ಚೆಯಲ್ಲಿ ಭಾಗವಹಿಸದಂತೆ 30 ದಿನಗಳ ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ತಿಳಿಸಿದರು.
ಸಚ್ಚಿದಾನಂದನ್ ಅವರು ಕೇರಳ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ. ‘ನಾನು ಬಿಜೆಪಿ ಪರಾಭವ ಕುರಿತು ವಿಡಂಬನಾತ್ಮಕ ವಿಡಿಯೊ ಹಂಚಿಕೊಳ್ಳಲು ಬಯಸಿದಾಗ, ನಿಯಮ ಉಲ್ಲಂಘನೆ ಆಗಿದೆ ಎಂಬಂತೆ ಫೇಸ್ಬುಕ್ನಿಂದ ಒಂದು ಸಂದೇಶ ಬಂದಿತು. ಸಾಕಷ್ಟು ಹಂಚಿಕೆಯಾಗಿರುವ ಆ ವಿಡಿಯೋ ನಿಂದನಾತ್ಮಕವಾಗಿರಲಿಲ್ಲ’ ಎಂದು ತಿಳಿಸಿದರು.
ಜಾಲತಾಣಗಳಲ್ಲಿ ಬಲಪಂಥೀಯ ಚಿಂತಕರ ನಡೆಗಳನ್ನು ಗಮನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಫೇಸ್ಬುಕ್ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿ, ‘ಎಲ್ಲದಕ್ಕೂ ಮಿತಿ ಇರುತ್ತದೆ. ಸಾಮಾಜಿಕ ಜಾಲತಾಣಗಳ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ಇರುವುದಿಲ್ಲ’ ಎಂದು ಹೇಳಿದೆ.
ಫೇಸ್ಬುಕ್ ಕ್ರಮವನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ ಮತ್ತು ಸಿಪಿಎಂ ನಾಯಕ ಟಿ.ಎಂ.ಥಾಮಸ್ ಐಸಾಕ್ ಅವರು ಟೀಕಿಸಿದ್ದಾರೆ. ‘ನಮ್ಮ ರಾಜಕಾರಣದಲ್ಲಿ ಸೆನ್ಸಾರ್ಷಿಪ್ಗೆ ಅವಕಾಶ ನೀಡಬಾರದು’ ಎಂದು ಐಸಾಕ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.