ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ: ಕೇಂದ್ರ

ನವದೆಹಲಿ: ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಕಂಪನಿಯು ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ಇದು ಈ ನೆಲದ ಕಾನೂನು ಮತ್ತು ಕಡ್ಡಾಯವಾಗಿ ಅದನ್ನು ಪಾಲಿಸಲೇಬೇಕಿದೆ ಎಂದು ಸರ್ಕಾರ ಹೇಳಿದೆ.
ಐಟಿ ನಿಯಮಗಳ ನಿಬಂಧನೆಗಳ ಉಲ್ಲಂಘನೆಯಿಂದಾಗಿ ಟ್ವಿಟರ್ ಕಂಪನಿಯು ಐಟಿ ಕಾಯ್ದೆಯಡಿ ನೀಡಲಾಗುವ ವಿನಾಯಿತಿ ಕಳೆದುಕೊಳ್ಳಲಿದೆ ಎಂದು ಕೇಂದ್ರವು ಹೈಕೋರ್ಟ್ನಲ್ಲಿ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.
ಟ್ವಿಟರ್ ಸಂಸ್ಥೆಯು ಐಟಿ ನಿಯಮಗಳನ್ನು ಪಾಲಿಸದಿರುವ ಬಗ್ಗೆ ವಕೀಲ ಅಮಿತ್ ಆಚಾರ್ಯ ಎಂಬವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ. ಎರಡು ‘ಆಕ್ರಮಣಕಾರಿ ಮತ್ತು ಆಕ್ಷೇಪಾರ್ಹ ಟ್ವೀಟ್’ಗಳ ವಿರುದ್ಧ ಟ್ವಿಟರ್ ಕಂಪನಿಯ ಕುಂದುಕೊರತೆ ಅಧಿಕಾರಿಗೆ ದೂರು ನೀಡಲು ಬಯಸಿದ್ದೇನೆ. ಆದರೆ, ಟ್ವಿಟರ್ ವೆಬ್ಸೈಟ್ನಲ್ಲಿ ಕುಂದುಕೊರತೆ ಅಧಿಕಾರಿಯ ಸಂಪರ್ಕ ವಿವರಗಳು ಸಿಗುತ್ತಿಲ್ಲ ಎಂದು ಅವರು ವಾದಿಸಿದ್ದರು.
ಟ್ವಿಟರ್ನ ಮಧ್ಯಂತರ ಕುಂದುಕೊರತೆ ಅಧಿಕಾರಿ ಮತ್ತು ಭಾರತದ ನೋಡಲ್ ಸಂಪರ್ಕ ವ್ಯಕ್ತಿ ಜೂನ್ನಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದಾಗಿ ಕಳೆದ ವಾರ ಟ್ವಿಟರ್ ಕಂಪನಿ, ಹೈಕೋರ್ಟ್ಗೆ ತಿಳಿಸಿತ್ತು. ಅವರ ಸ್ಥಾನಕ್ಕೆ ಬದಲಿ ನೇಮಕ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.