ಪ್ರತಿ ವರ್ಷದಂತೆ ಈ ಸಲವೂ ವೇದಿಕೆಯ ಸದಸ್ಯೆಯರು ಕ್ಯಾಲೆಂಡರ್ ಅನ್ನು ಹೊರತಂದಿದ್ದಾರೆ. ಇದು ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರ ಜನ್ಮದಿನ ಮತ್ತು ಅವರ ಕುರಿತ ಒಂದು ಸಾಲಿನ ಸಂಕ್ಷಿಪ್ತ ಪರಿಚಯ ಹೊಂದಿದೆ.
ಪಶ್ಚಿಮ ಬಂಗಾಳದ ಜ್ಞಾನಪೀಠ ಪುರಸ್ಕೃತ ಸಾಹಿತಿ ಮಹಾಶ್ವೇತಾ ದೇವಿಯವರ ಜನ್ಮದಿನ ಯಾವಾಗ? ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಸ್ಮರಣೆಯಲ್ಲಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆದರೆ, ಅವರ ಹುಟ್ಟಿದ ದಿನ ನೆನಪಾಗುತ್ತಿಲ್ಲವೇ? 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಉತ್ತರ ಪ್ರದೇಶದ ಬೇಗಂ ಹಜರತ್ ಮಹಲ್ ಅವರ ಜನ್ಮದಿನ ತಿಳಿದುಕೊಳ್ಳಬೇಕೆ...?
ಹೊಸ ವರ್ಷ 2020ರ ಸಂಭ್ರಮದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಅಥವಾ ಸಾಧಕ ಮಹಿಳೆಯರ ನೆನಪಿನಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳುವ ಇರಾದೆ ನಿಮ್ಮದಾಗಿದ್ದರೆ, ನೀವು ಮಾಡಬೇಕಾದದ್ದು ಇಷ್ಟೇ. ‘ಬದುಕು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‘ನಡಿ ‘ಅಭಯ ಮಹಿಳಾ ವೇದಿಕೆ’ಯು ಹೊರತಂದಿರುವ ಕ್ಯಾಲೆಂಡರ್ (ದಿನದರ್ಶಿಕೆ) ಪಡೆದುಕೊಳ್ಳಬೇಕು. ಅದರಲ್ಲಿ ಸಾಧಕ ಮಹಿಳೆಯರ ಜನ್ಮದಿನ ಮತ್ತು ಸಂಕ್ಷಿಪ್ತ ಮಾಹಿತಿ ಸಿಗುತ್ತದೆ.
ಪ್ರತಿ ವರ್ಷದಂತೆ ಈ ಸಲವೂ ವೇದಿಕೆಯ ಸದಸ್ಯೆಯರು ಕ್ಯಾಲೆಂಡರ್ ಅನ್ನು ಹೊರತಂದಿದ್ದಾರೆ. ಇದು ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರ ಜನ್ಮದಿನ ಮತ್ತು ಅವರ ಕುರಿತ ಒಂದು ಸಾಲಿನ ಸಂಕ್ಷಿಪ್ತ ಪರಿಚಯ ಹೊಂದಿದೆ.
2005ರಿಂದ ನಿರಂತರವಾಗಿ ವಿಶಿಷ್ಟ ರೀತಿಯಲ್ಲಿ ವಿವಿಧ ವಿಷಯಗಳು, ಸಾಧಕರ ಕುರಿತು ಕ್ಯಾಲೆಂಡರ್ ಹೊರ ತರುತ್ತಿರುವ ವೇದಿಕೆಯ ಸದಸ್ಯೆಯರು ಒಂದೇ ಊರಿನವರು ಅಥವಾ ಒಂದೇ ಕ್ಷೇತ್ರದವರಲ್ಲ. ದೈನಂದಿನ ಮನೆಗೆಲಸ, ಕಚೇರಿ ಕೆಲಸದ ಜೊತೆಗೆ ಸಮಯ ಬಿಡುವು ಮಾಡಿಕೊಂಡು ಪ್ರತಿ ವರ್ಷ ಕ್ಯಾಲೆಂಡರ್ ಸಿದ್ಧತೆಯಲ್ಲಿ ತೊಡಗುತ್ತಾರೆ. ಅವರಿಗೆ ವಿದ್ಯಾರ್ಥಿನಿಯರು ‘ಸಾಥ್’ ನೀಡುತ್ತಾರೆ. ಸಾಕಷ್ಟು ಪೂರ್ವಸಿದ್ಧತೆ, ಸಂಶೋಧನೆ ಮತ್ತು ಮಾಹಿತಿ ಸಂಗ್ರಹಿಸಿಕೊಂಡೇ ಅವರು ಮುಂದಿನ ಹೆಜ್ಜೆ ಇಡುತ್ತಾರೆ.
‘18ನೇ ಶತಮಾನದಿಂದ ಈವರೆಗಿನ ಸಾಧಕ ಮಹಿಳೆಯರ ಬಗ್ಗೆ ಕ್ಯಾಲೆಂಡರ್ನಲ್ಲಿ ಪರಿಚಯವಿದೆ. ಕೆಲವರ ಭಾವಚಿತ್ರಗಳು ಸಿಗದ ಕಾರಣ ರೇಖಾಚಿತ್ರ ಬಳಸಿಕೊಂಡೆವು. ಅವರ ನಿಖರ ಜನ್ಮದಿನಾಂಕ ಪತ್ತೆ ಮಾಡಲು ಪುಸ್ತಕ, ಪತ್ರಿಕೆ, ಅಂತರ್ಜಾಲದ ಮೊರೆ ಹೋದೆವು. ಒಂದೇ ದಿನಾಂಕದಂದು ಇಬ್ಬರು ಸಾಧಕರ ಜನ್ಮದಿನ ಬಂದ ಕಾರಣ ಆದ್ಯತೆ ಮೇರೆಗೆ ಒಬ್ಬರನ್ನೇ ಆಯ್ಕೆ ಮಾಡಿಕೊಂಡೆವು. ಬೆಂಗಳೂರಿನಲ್ಲಿ ಕ್ಯಾಲೆಂಡರ್ನಲ್ಲಿ ಮುದ್ರಿಸಿದೆವು’ ಎಂದು ಹೇಳುತ್ತಾರೆ ವೇದಿಕೆಯ ಸಂಚಾಲಕಿ ಡಾ. ಜಿ.ಸುಧಾ.
‘ಕ್ಯಾಲೆಂಡರ್ನಲ್ಲಿರುವ ದಿನಾಂಕಗಳ ಬಗ್ಗೆ ಸಣ್ಣಪುಟ್ಟ ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಬಹುದು. ಶಾಲಾ– ಕಾಲೇಜುಗಳಿಗೆ ಉಡುಗೊರೆ ರೂಪದಲ್ಲಿ ಮತ್ತು ವಿಶೇಷ ಸಂದರ್ಭದಲ್ಲಿ ಆಪ್ತರಿಗೆ ಕಾಣಿಕೆಯಾಗಿ ಕ್ಯಾಲೆಂಡರ್ ನೀಡಬಹುದು’ ಎಂದು ಶಿಕ್ಷಕಿ ಉಷಾ ತಿಳಿಸಿದರು.
ಸಾಧಕ ಮಹಿಳೆಯರ ಮಾಹಿತಿ ಮತ್ತು ಚಿತ್ರ ಒಂದೆರಡು ದಿನ ಅಥವಾ ತಿಂಗಳಲ್ಲಿ ಸಂಗ್ರಹಿಸಿದ್ದಲ್ಲ. ಇದಕ್ಕಾಗಿ ಆರು ತಿಂಗಳಿನಿಂದ ಒಂದು ವರ್ಷದವರೆಗೆ ವೇದಿಕೆ ಸದಸ್ಯೆಯರು ಶ್ರಮಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಕೆನಡಾದಿಂದ ಮಾಹಿತಿ ಒದಗಿಸಿದರೆ, ಉಳಿದವರು ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಳ್ಳೇಗಾಲ, ಹೊಸಕೋಟೆಯಲ್ಲಿ ಇದ್ದುಕೊಂಡು ಮಾಹಿತಿ ಸಂಗ್ರಹಿಸಿದರು. ಅಚ್ಚುಕಟ್ಟಾಗಿ, ಅಂದವಾಗಿ ಕ್ಯಾಲೆಂಡರ್ ಹೊರಬಂದಾಗ ಅವರ ಪರಿಶ್ರಮ ಸಾರ್ಥಕವಾದಂತೆ.
ಕ್ಯಾಲೆಂಡರ್ ಸಿದ್ಧಪಡಿಸಿದವರು...
*ಡಾ. ಜಿ.ಸುಧಾ, ರಾಜ್ಯಶಾಸ್ತ್ರ ಪ್ರಾಧ್ಯಾಪಕಿ, ಕೊಳ್ಳೇಗಾಲ, ಚಾಮರಾಜನಗರ
*ವಿ.ಅಶ್ವಿನಿ, ವ್ಯವಸ್ಥಾಪಕಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಹೊಸಕೋಟೆ, ಬೆಂಗಳೂರು
*ನಿಲೀನಾ ಥಾಮಸ್, ವಿದ್ಯಾರ್ಥಿನಿ, ಟೊರೆಂಟೊ ವಿಶ್ವವಿದ್ಯಾಲಯ, ಕೆನಡಾ
*ಹಾರಿಕಾ ಗಗ್ಗರ, ವಿದ್ಯಾರ್ಥಿನಿ, ಟೊರೆಂಟೊ ವಿಶ್ವವಿದ್ಯಾಲಯ, ಕೆನಡಾ
*ವಿ.ಉಷಾ, ಶಿಕ್ಷಕಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ
*ಚೈತ್ರಾ, ಗೃಹಿಣಿ, ಶಿವಮೊಗ್ಗ
*ವಿಜಯಲಕ್ಷ್ಮಿ ಎಂ.ಎಸ್, ಗೃಹಿಣಿ, ಕೊಳ್ಳೇಗಾಲ
*ಚನ್ನಕೇಶವ, ರಾಜ್ಯಶಾಸ್ತ್ರ ಅಧ್ಯಾಪಕ, ಚಿಕ್ಕಬಳ್ಳಾಪುರ
ಪ್ರತಿ ವರ್ಷದ ವಿಶೇಷ...
*2005: ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ತೋರಿದವರು
*2006: ಭೌತಶಾಸ್ತ್ರಜ್ಞರ ಭಾವಚಿತ್ರ, ಸಂಕ್ಷಿಪ್ತ ಮಾಹಿತಿ, ಸೂಕ್ತಿ
*2007–ಅಂಗವೈಕಲ್ಯದ ಮಧ್ಯೆ ಉತ್ತಮ ಸಾಧನೆ ತೋರಿದವರು
*2008–ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಮಾಡಿದವರು
*2009–ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಹಿಳೆಯರು
*2010–ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರು
*2011–ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಕ್ಕಳು
*2012–ಶಿಕ್ಷಣ ಪಡೆಯದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು
*2013–ಮನುಕುಲಕ್ಕೆ ವಿಶೇಷ ಕೊಡುಗೆ ನೀಡಿದ ವಿಜ್ಞಾನಿಗಳು
*2014–ವಯಸ್ಸು 35 ದಾಟಿದ ನಂತರವೂ ವಿಶೇಷ ಸಾಧನೆ ಮಾಡಿದವರು
*2015–ಭಾರತ ದೇಶದ ಮಹಾನ್ ವ್ಯಕ್ತಿಗಳು
*2016–ಮಾನವ ಹಕ್ಕುಗಳ ಹೋರಾಟಗಾರರು
*2017–ಭಾರತ ದೇಶದ ಮಹಾನ್ ವ್ಯಕ್ತಿಗಳು
*2018–ವಿಶ್ವದ ಅತ್ಯುನ್ನತ ಸಾಧನೆ ಮಾಡಿದ ಮಹಿಳೆಯರು
(ಸಂಪರ್ಕ ದೂರವಾಣಿ ಸಂಖ್ಯೆ: 94481 60213, ಇ–ಮೇಲ್ ವಿಳಾಸ: badukutrust@rediffmai*.com, abhayamahi*avedike@rediffmai*.com)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.