ಕಠ್ಮಂಡು: ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿರುವ ನೇಪಾಳಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ನೆರೆಯ ಭಾರತ ಮತ್ತು ಚೀನಾದೊಂದಿಗೆ ಒಳ್ಳೆಯ ಸಂಬಂಧ ಹೊಂದಿರಲಿದೆಎಂದು ಆಡಳಿತಾರೂಢ ಪಕ್ಷದ ಪ್ರಮುಖ ನಾಯಕ ಪ್ರಕಾಶ್ ಮಾನ್ ಸಿಂಗ್ ತಿಳಿಸಿದ್ದಾರೆ.
‘ವಿದೇಶಾಂಗ ನೀತಿಯಲ್ಲಿ ನೇಪಾಳ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ. ನೆರೆಯ ರಾಷ್ಟ್ರಗಳೊಂದಿಗೆ ಯಾವುದೇ ರೀತಿಯ ಸಂಘರ್ಷ ಉಂಟಾದಲ್ಲಿ ಅದನ್ನು ಮಾತುಕತೆ ಮೂಲಕ, ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಪರಿಹರಿಸಿಕೊಳ್ಳಲು ನೇಪಾಳ ಯತ್ನಿಸುತ್ತದೆ’ ಎಂದು ತಿಳಿಸಿದ್ದಾರೆ.
‘ನಾವು ಅಲಿಪ್ತ ವಿದೇಶಾಂಗ ನೀತಿ ಅನುಸರಿಸುತ್ತೇವೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ನೆರೆಯ ರಾಷ್ಟ್ರಗಳೂ ಸೇರಿದಂತೆ ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಇಚ್ಛಿಸುತ್ತೇವೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.