ಇಸ್ಲಾಮಾಬಾದ್: ನ್ಯಾಯಾಧೀಶೆಯೊಬ್ಬರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಲ್ಲಿನ ಹೈಕೋರ್ಟ್ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ, ವಿಚಾರಣೆಗಾಗಿ ಆಗಸ್ಟ್ 31ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ, ನ್ಯಾಯಮೂರ್ತಿಗಳಾದ ಮೊಹ್ಸಿನ್ ಅಖ್ತರ್ ಕಯಾನಿ, ಬಾಬರ್ ಸತ್ತಾರ್ ಹಾಗೂ ಮಿಯಾಂಗುಲ್ ಹಸನ್ ಔರಂಗಜೇಬ್ ಅವರಿರುವ ನ್ಯಾಯಪೀಠವು ಇಮ್ರಾನ್ ಖಾನ್ಗೆ ಸೂಚಿಸಿದೆ.
‘ಪಿಟಿಐ ಮುಖ್ಯಸ್ಥ ಇಮ್ರಾನ್ಖಾನ್ ಅವರ ಹೇಳಿಕೆ ಅನುಚಿತ. ದೇಶದ ನ್ಯಾಯಾಂಗ ಹಾಗೂ ಚುನಾವಣಾ ಆಯೋಗದ ವಿರುದ್ಧ ಅವರು ನಿರಂತರವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದು ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಕಯಾನಿ ಹೇಳಿದರು.
ಇಸ್ಲಾಮಾಬಾದ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ (ಪಾಕಿಸ್ತಾನ ತೆಹ್ರೀಕ್–ಎ–ಇನ್ಸಾಫ್) ರ್ಯಾಲಿಯಲ್ಲಿ ಮಾತನಾಡಿದ ಇಮ್ರಾನ್ಖಾನ್, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಝೀಬಾ ಚೌಧರಿ ಅವರಿಗೆ ಬೆದರಿಕೆವೊಡ್ಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುವ ಸಂಬಂಧ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವನ್ನು ಹೈಕೋರ್ಟ್ ರಚಿಸಿದೆ.