ವಿಶ್ವಸಂಸ್ಥೆ: ಅಫ್ಗಾನಿಸ್ತಾನ ಸರ್ಕಾರ ಹಾಗೂ ತಾಲಿಬಾನ್ ನಡುವೆ ಈ ವಾರ ದೋಹಾದಲ್ಲಿ ನಡೆಯಲಿರುವ ಮಾತುಕತೆ ಆ ದೇಶದಲ್ಲಿನ ಸಂಘರ್ಷವನ್ನು ಶಮನ ಮಾಡಲಿದೆ ಎಂಬ ವಿಶ್ವಾಸವನ್ನು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಗುಟೆರಸ್ ಅವರ ವಕ್ತಾರ ಸ್ಟೀಫನ್ ದುಜಾರಿಕ್, ‘ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನಕ್ಕೆ ಜಾಗತಿಕ ನಾಯಕರು ಕೈಜೋಡಿಸಬೇಕು’ ಎಂದರು.
‘ಹೇರತ್ ಹಾಗೂ ಕಂದಹಾರ್ಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಇದರೊಂದಿಗೆ ಸಣ್ಣ ನಗರಗಳು ಹಾಗೂ ಪಟ್ಟಣ ಪ್ರದೇಶಗಳಿಗೂ ಸಂಘರ್ಷ ವ್ಯಾಪಿಸುತ್ತಿರುವುದು ಕಳವಳಕಾರಿ. ಈ ಬೆಳವಣಿಗೆಯಿಂದಾಗಿ ನಾಗರಿಕರು ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.
‘ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಸಂಘರ್ಷ ತೀವ್ರವಾಗುವ ಆತಂಕವಿದೆ’ ಎಂದೂ ಹೇಳಿದರು.