ಮನೆ ಮಾಲೀಕನ ಮೇಲೆ ಆನೆ ದಾಳಿ

ಆಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿ ಬುಧವಾರವಷ್ಟೇ ಮನೆಯೊಂದಕ್ಕೆ ನುಗ್ಗಿ ಭತ್ತವನ್ನು ತಿಂದು ಹೋಗಿದ್ದ ಕಾಡಾನೆ, ಗುರುವಾರ ಅದೇ ಮನೆಯ ಮಾಲೀಕನ ಮೇಲೆ ದಾಳಿ ಮಾಡಿದೆ.
ಮನೆ ಮಾಲೀಕ ಶಿವಕುಮಾರ್ ಗಾಯಗೊಂಡಿದ್ದು ಆಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳೆಗೆ ನೀರು ಹಾಯಿಸಲೆಂದು ಗುರುವಾರ ಬೆಳಿಗ್ಗೆ ಜಮೀನಿನಲ್ಲಿ ಪಂಪ್ಸೆಟ್ ಚಾಲೂ ಮಾಡುತ್ತಿದ್ದಾಗ ಆನೆ ದಾಳಿ ಮಾಡಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಇದರಿಂದ ಅವರ ಕಾಲು, ಬೆನ್ನು, ಸೊಂಟ ಹಾಗೂ ಕೈಗೆ ತೀವ್ರತರನಾದ ಪೆಟ್ಟು ಬಿದ್ದಿದೆ. ಅಲ್ಲದೇ, ಪಂಪ್ಸೆಟ್ ಇಟ್ಟಿದ್ದ ಶೆಡ್ ಅನ್ನೂ ಹಾಳುಗೆಡವಿದೆ.
ಶಿವಕುಮಾರ್ ಕೂಗಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಜಮೀನಿನವರು ಓಡಿ ಬಂದು ಶಬ್ದ ಮಾಡಿ ಆನೆಯನ್ನು ಓಡಿಸಿ, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಕ್ರೋಶ: ಮಲೆನಾಡು ಭಾಗಗಳಲ್ಲಿ ಪ್ರತಿದಿನ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಜನರು ಜಮೀನಿಗೆ ತೆರಳಲು ಹಾಗೂ ಮಕ್ಕಳು ಶಾಲೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ಜೀವ ಭಯದಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.