ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆ ಹಲಸಿನ ‘ಫನಸ್ ಬಾಜಿ’

Last Updated 13 ಮೇ 2019, 19:30 IST
ಅಕ್ಷರ ಗಾತ್ರ

ಎಳೆ ಹಲಸು (ಗುಜ್ಜೆ) ತರಕಾರಿಯಾಗಿ ಬಹು ಮಂದಿಗೆ ಇಷ್ಟ. ಉತ್ತರ ಭಾರತೀಯರಿಗಂತೂ ಹಲಸು ಎಂದರೆ ತರಕಾರಿ – ಎಳೆ ಹಲಸು ಮಾತ್ರ.

ಹಲಸಿಗೆ ಈಗಿನ ಜನಪ್ರಿಯತೆ, ವಿಶ್ವಮಾನ್ಯತೆ ಬರುವುದಕ್ಕೆ ಮೊದಲೇ ಎಳೆ ಹಲಸನ್ನು ಸಂಸ್ಕರಿಸಿ ಮಾರುತ್ತಿದ್ದರು ಎಂದರೆ ನಂಬುತ್ತೀರಾ?

ಮಹಾರಾಷ್ಟ್ರದ ಕೊಂಕಣ್ ಮಾವಿಗೆ ಹೇಗೆ ಪ್ರಸಿದ್ಧವೋ, ಹಲಸಿನ ಬೆಳೆಗೂ ಹಾಗೆಯೇ. ಅಲ್ಲಿನ ಸಿಂಧುದುರ್ಗ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಎಳೆ ಹಲಸಿನ ಪ್ರಿಸರ್ವ್ - ಫನಸ್ ಬಾಜಿ ಮಾಡಿ ಡಬ್ಬದಲ್ಲಿ ತುಂಬಿ ಮಾರುವ ಕನಿಷ್ಠ ಅರ್ಧ ಡಜನ್ ಉದ್ದಿಮೆಗಳಿವೆ.

ಎಳೆ ಹಲಸನ್ನು ಚಿಕ್ಕದಾಗಿ ಹೆಚ್ಚಿ ಸಂಸ್ಕರಿಸಿದ ಫನಸ್ (ಹಲಸು) ಬಾಜಿಯನ್ನು ನೇರವಾಗಿ ಮಹಾರಾಷ್ಟ್ರ ಶೈಲಿಯ ಪಲ್ಯ ಮಾಡಲು ಬಳಸಬಹುದು. ಹಾಗೆಯೇ ಬಿರಿಯಾನಿಗೂ ಸೈ. ಇದಕ್ಕೆ ಒಂದು ವರ್ಷ ಬಾಳಿಕೆ ಇರುತ್ತದೆ. ಹೀಗೊಂದು ಉತ್ಪನ್ನವನ್ನು ಹಲಸಿನ ಬಗ್ಗೆ ಅಂತಹ ಒಲವೇ ಇಲ್ಲದ ಕಾಲದಲ್ಲೇ ಮೊತ್ತಮೊದಲು ಹೊರತಂದ ಖ್ಯಾತಿ ರತ್ನಗಿರಿಯ ಪಾವಸ್ ಕ್ಯಾನಿಂಗ್ ಕಂಪನಿಗೆ ಸಲ್ಲಬೇಕು. ಇದರ ಮಾಲಿಕರು ಹೇಮಂತ್ ದೇಸಾಯಿ. ಆಲ್ಫಾನ್ಸೋ ಮಾವಿನ ಹಣ್ಣಿನ ಪಲ್ಪ್ ಇವರ ಮುಖ್ಯ ಉತ್ಪನ್ನ.

ಹೇಮಂತ್ ದೇಸಾಯಿ ಅವರು ಫನಸ್ ಬಾಜಿ ಆರಂಭಿಸಿದ್ದು 1978ರಲ್ಲಿ. ಅಂದರೆ, 40 ವರ್ಷಗಳ ಹಿಂದೆ. ಅಂದಿನಿಂದ ಇಂದಿನವರೆಗೂ ಅವರು ಚಿಕ್ಕ ಪ್ರಮಾಣದಲ್ಲಿ ಈ ಮೌಲ್ಯವರ್ಧಿತ ಉತ್ಪನ್ನ ಮಾಡುತ್ತಲೇ ಇದ್ದಾರೆ. ಇವರ ಫನಸ್ ಬಾಜಿಯ ವ್ಯಾಪಾರನಾಮ ‘ವಿಜಯ್’.
ಕಾಲಕ್ರಮದಲ್ಲಿ ಇನ್ನೂ ನಾಲ್ಕೈದು ಮಂದಿ ಈ ಉತ್ಪನ್ನ ತಯಾರಿಸಿ ಮಾರತೊಡಗಿದರು – ಇದರಲ್ಲಿ ಕೆಲವರದು ದೊಡ್ಡ ಕಂಪನಿ ಇನ್ನು ಕೆಲವರದು ಚಿಕ್ಕ ಗೃಹ ಘಟಕ. ಅಮೃತ್ ಗೋಗಟೆ, ಕಿಶೋರ್ ಪಟವರ್ಧನ್, ಸುಹಾಸ್ ಬಾಲ್, ಅಮರ್ ದೇಸಾಯ್ ಟಿನ್ನಿನಲ್ಲಿ ಫನಸ್ ಭಾಜಿ ಮಾಡಿ ಮಾರುಕಟ್ಟೆ ಮಾಡುತ್ತಿರುವ ಇತರರಲ್ಲಿ ಕೆಲವರು.

ಕೊಂಕಣದ ಮಂದಿಯ ಅದೃಷ್ಟ, ಅವರಿಗೆ ಅರ್ಧ ಡಜನ್ ಹಣ್ಣುಗಳನ್ನು ಪ್ರಕೃತಿ ಕೊಡುತ್ತದೆ. ಮಾವು, ಪುನರ್ಪುಳಿ (ಕೋಕಮ್), ಕರಂಡೆ, ನೇರಳೆ, ನೆಲ್ಲಿ ಮತ್ತು ಹಲಸು. ಇದರಲ್ಲಿ ಮಾವು ಬಿಟ್ಟರೆ ಉಳಿದೆಲ್ಲವೂ ಉಚಿತವಾದ ಕೊಡುಗೆಗಳು. ಆದರೆ ಅದೇ ಪ್ರಕೃತಿ ಇವರಿಗದನ್ನು ಅನುಭವಿಸಬಿಡುವುದಿಲ್ಲ. ಎಲ್ಲಾ ಹಣ್ಣುಗಳೂ ಒಂದೇ ಕಾಲಕ್ಕೆ ಕೊಯ್ಲಿಗೆ ಬರುವುದರಿಂದ ಸಂಸ್ಕರಣೆಯೇ ದೊಡ್ಡ ಸವಾಲು. ಗರಿಷ್ಠ ಆದಾಯ ತರುವ ಮಾವಿಗೆ ಮುಂಡಾಸು. ಉಳಿದವುಗಳ ಕೆಲಸ ಸಮಯ, ಲೇಬರ್ ಸಿಕ್ಕಷ್ಟು ಮಾತ್ರ. ಹೀಗಾಗಿ ಫನಸ್ ಬಾಜಿಗೆ ತುಂಬ ಬೇಡಿಕೆ ಇದ್ದರೂ ಅದರ ಉತ್ಪಾದನೆ ಏರಿಸಲು ಅವರಿಗೆ ಆಗಿಲ್ಲ.

ಟಿನ್‌ನಲ್ಲಿ ಪ್ಯಾಕ್ ಮಾಡುವುದೂ ಇನ್ನೊಂದು ಸಮಸ್ಯೆ. ಇದನ್ನು ಪ್ಯಾಕ್ ಮಾಡುವ ಮಷಿನ್‌ಗೆ ಹೆಚ್ಚು ಬೆಲೆಯಿದೆ. ಇದನ್ನೆಲ್ಲಾ ಗಮನಿಸಿ ದೇವಗಡದ ಮಾವು ಕೃಷಿಕ ಶ್ರೀಧರ ಓಗಲೆ ರಿಟಾರ್ಟ್ ಪೌಚ್‌ನಲ್ಲಿ ಫನಸ್ ಭಾಜಿ ಪ್ಯಾಕ್ ಮಾಡಲು ತೊಡಗಿದರು. ಇದು ಏಳೆಂಟು ವರ್ಷಗಳ ಹಿಂದಿನ ಬೆಳವಣಿಗೆ. ಕೊಂಕಣದಲ್ಲಿ ರಿಟಾರ್ಟ್ ಪ್ಯಾಕಿಂಗ್ ಆರಂಭಿಸಿದ ಮೊದಲ ಉದ್ಯಮಿ ಇವರು. ಇದರಲ್ಲೇ ಮಾವಿನಹಣ್ಣಿನ ಪಲ್ಪ್, ಹಲಸಿನ ಹಣ್ಣಿನ ಪಲ್ಪನ್ನೂ ಅವರು ರಫ್ತು ಮಾಡಿದ್ದಾರೆ. ರಿಟಾರ್ಟ್ ಪೌಚ್ ಸಾಗಣೆಗೂ ಕೊನೆ ಗ್ರಾಹಕರಿಗೆ ಹ್ಯಾಂಡ್ಲಿಂಗಿಗೂ ಸುಲಭ.

ಕೊಂಕಣದಲ್ಲಿ ಮೌಲ್ಯವರ್ಧಕರು ಒಂದೆರಡಲ್ಲ, ಹತ್ತಿಪ್ಪತ್ತು ಉತ್ಪನ್ನ ಮಾಡುತ್ತಾರೆ. ಕಳೆದ ದಶಕಾರ್ಧದಲ್ಲಿ ಹಲವರು ದೇವಗಡಕ್ಕೆ ಹೋಗಿ ಶ್ರೀಧರ ಓಗಲೆಯವರ ಬಳಿ ಫನಸ್ ಬಾಜಿ ಮಾಡಲು ಕಲಿತಿದ್ದಾರೆ.

ಈಗ ನೋಡಿ, ಶ್ರೀಧರ ಓಗಲೆ ಅವರ ಕನಿಷ್ಠ ಐವರು ಶಿಷ್ಯ - ಶಿಷ್ಯೆಯರು ಒಂದೆರಡು ವರ್ಷದಿಂದ ಎಳೆ ಹಲಸು ಸಂಸ್ಕರಿಸತೊಡ ಗಿದ್ದಾರೆ. ಇನ್ನೂ ಇಬ್ಬರು ಈ ವರ್ಷ ಆರಂಭಿಸಲು ಸಜ್ಜಾಗಿದ್ದಾರೆ. ಐದು ಮಂದಿಯ ಈ ವರ್ಷದ ಉತ್ಪಾದನೆ ಹತ್ತು ಟನ್‌ ತಲುಪಬಹುದು. ಇದರ ಅಂದಾಜು ಮೌಲ್ಯ ₹16 ಲಕ್ಷ. ಈ ಉದ್ದಿಮೆಗಳ ಯತ್ನ ಇಲ್ಲದೆ ಹೋದರೆ ಇವೆಲ್ಲವೂ ಹಾಳಾಗಿಹೋಗುತ್ತಿದ್ದ ಕಚ್ಚಾವಸ್ತುವೇ. ಒಂದು ರೀತಿಯಲ್ಲಿ, ಯಾವ ಸರ್ಕಾರಿ ತರಬೇತಿ ಸಂಸ್ಥೆಯೂ ಸಾಧಿಸಲಾಗದಂತಹ ಸಕಾರಾತ್ಮಕ ಬೆಳವಣಿಗೆ ಓಗಲೆಯವರ ಅನೌಪಚಾರಿಕ ಶಿಕ್ಷಣದ್ದು.

ಈ ಪೈಕಿ ದೇವಗಡದವರೇ ಆದ ಅಶ್ವಿನಿ ಮಿಲಿಂದ್ ದಾಂಡೇಕರ್ ಮತ್ತು ಮಧುರಾ ಮಿಲಿಂದ್ ಗೋವಂದೆ ದಂಪತಿಯೂ ಸೇರಿದ್ದಾರೆ. ಇಬ್ಬರೂ ಫನಸ್ ಬಾಜಿ ಮಾಡಲು ತೊಡಗಿದ್ದು ಕಳೆದ ವರ್ಷ. ಓಗಲೆಯವರಿಂದ ವಿದ್ಯೆ ಕಲಿತ ನಂತರ ಮೈಸೂರಿನ ಸಿಎಫ್‌ಟಿಆರ್ಐ ಭೇಟಿಯೂ ಅಶ್ವಿನಿಯವರಿಗೆ ಉಪಯೋಗಕ್ಕೆ ಬಂತಂತೆ.

ಅಶ್ವಿನಿ, ತಮ್ಮದೇ ಎಳೆ ಹಲಸು ಅಲ್ಲದೆ ಸುತ್ತಲಿನವರಿಂದಲೂ ಖರೀದಿಸುತ್ತಾರೆ. ಒಂದು ಕೆ.ಜಿಗೆ ₹8 ರಿಂದ ₹9. ಅಶ್ವಿನಿ, ಅವರ ಮೈದುನರ ಪತ್ನಿ ಆರ್ಯ ಮತ್ತು ಆರು ಹೆಣ್ಮಕ್ಕಳು ಉತ್ಪಾದನೆಯ ಕೆಲಸ ಮಾಡುತ್ತಾರೆ. ‘ರಿಟಾರ್ಟ್ ಪೌಚಿನಲ್ಲಿ ಪ್ಯಾಕಿಂಗ್ ಮಾಡುವ ಕಾರಣ ನಮ್ಮಂತಹ ಹಲವರು ಈ ಉದ್ದಿಮೆಗೆ ಕಾಲಿಡಲು ಸಾಧ್ಯವಾಗಿದೆ. ಎಳೆ ಹಲಸು ಕೊಚ್ಚಲು ಶ್ರೆಡ್ಡರ್, ರಿಟಾರ್ಟ್ ಪೌಚ್ ಸೀಲ್ ಮಾಡಲು ಬ್ಯಾಂಡ್ ಸೀಲರ್ ಇತ್ಯಾದಿ ಉಪಕರಣಗಳಿಗೆ ಸುಮಾರು ₹60 ಸಾವಿರ ಸಾಕಾಗುತ್ತದೆ. ಟಿನ್ ಪ್ಯಾಕಿಂಗ್ ಯಂತ್ರಕ್ಕೆ ಲಕ್ಷಕ್ಕಿಂತ ಹೆಚ್ಚು ತೆರಬೇಕು’ ಎನ್ನುತ್ತಾರೆ.

ಅರ್ಧ ಕೆ.ಜಿ ಇವರ ‘ಯಶ್’ ಬ್ರಾಂಡ್ ಫನಸ್ ಬಾಜಿಯ ಬೆಲೆ ₹ 85. ಕಳೆದ ವರ್ಷ 1,200 ಕೆ.ಜಿ ಉತ್ಪಾದಿಸಿದ್ದರು. ಈ ವರ್ಷದ ಲಕ್ಷ್ಯ ಇದರ ದುಪ್ಪಟ್ಟು. ಪುಣೆ, ಮುಂಬೈಗಳಲ್ಲಿ ಡೀಲರ್‌ಗಳು ಸಿಕ್ಕಿದ್ದಾರೆ. ಅಲ್ಲೇ ಮಾರಾಟ ಹೆಚ್ಚು. ‘ನಾವು ದೂರದ ದೇವಗಡದಲ್ಲಿರುವ ಕಾರಣ ಸಾಗಾಟ ವೆಚ್ಚವೇ ಅತ್ಯಧಿಕ ಆಗುತ್ತದೆ. ಅರ್ಧ ಕೆ.ಜಿ ಖಾಲಿ ರಿಟಾರ್ಟ್ ಪೌಚಿಗೆ ₹ 11.20 ತಗಲುತ್ತದೆ’ ಎನ್ನುತ್ತಾರೆ.

ಹಾಗೆ ನೋಡಿದರೆ ಫನಸ್ ಬಾಜಿ ರೀತಿಯ ಉತ್ಪನ್ನಕ್ಕೆ ಕೇರಳ-ಕರ್ನಾಟಕಗಳಲ್ಲೂ ಒಳ್ಳೆ ಬೇಡಿಕೆ ಬರಬಹುದು. ನಿಜವಾಗಿ ನೋಡಿದರೆ ನಾಲ್ಕು ದಶಕಗಳಿಂದ ತಯಾರಾಗುತ್ತಿದ್ದರೂ ಫನ ಬಾಜಿ ಎಂಬ ಉತ್ಪನ್ನ ಇನ್ನೂ ಮಹಾರಾಷ್ಟ್ರದ ಹಲಸುಪ್ರಿಯರೆಲ್ಲರಿಗೂ ಗೊತ್ತೇ ಇಲ್ಲ. ಉತ್ಪನ್ನದ ಪ್ರೊಮೋಶನ್ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಈ ಮಹಾರಾಷ್ಟ್ರದ ಈ ಕೃಷಿಕ ಉದ್ದಿಮೆದಾರರು ಭಾರೀ ಹಿಂದೆ ಉಳಿದಿರುವುದೂ ಇದಕ್ಕೆ ಭಾಗಶಃ ಕಾರಣ.

‘ಶ್ರೀಧರ ಓಗಲೆಯವರು ತಮ್ಮ ‘ಓಗಲೆ’ ಬ್ರಾಂಡ್‌ನ ಅಡಿ ಈ ವರ್ಷ 12 ಟನ್‌ನಿಂದ 14 ಟನ್ ಫನಸ್ ಬಾಜಿ ಮಾಡುವ ಗುರಿ ಹೊಂದಿದ್ದಾರೆ. ಇವರ ನೇತೃತ್ವದಲ್ಲಿ ತಲೆ ಎತ್ತಿರುವ ₹5 ಕೋಟಿ ಬಂಡವಾಳದ ಕೇಂದ್ರ ಸರ್ಕಾರದ ಅನುದಾನದ ‘ದೇವಗಡ್ ಮ್ಯಾಂಗೊ ಆಂಡ್ ಮಲ್ಟಿಪಲ್ ಫ್ರುಟ್ಸ್ ಅಸೋಸಿಯೇಶ್‌ನಿನ’ ಪ್ರಾಸೆಸಿಂಗ್ ಕ್ಲಸ್ಟರ್ ಸ್ಥಳೀಯ ಹಣ್ಣುಗಳ ಬೇರೆಬೇರೆ ರೀತಿಯ ಸಂಸ್ಕರಣೆಗೆ ಬೇಕಾದ ಸೌಕರ್ಯ ಹೊಂದಿದೆ.
‘ಎರಡೂ ಜಿಲ್ಲೆಯ ನಾವು ಎಲ್ಲಾ ಉದ್ದಿಮೆದಾರರ ಒಟ್ಟು ಎಳೆ ಹಲಸಿನ ಪ್ರಿಸರ್ವ್ ಲೆಕ್ಕ ಹಾಕಿದರೆ ಅಬ್ಬಬ್ಬಾ ಎಂದರೂ 20 ಟನ್ನಿನಿಂದ 30 ಟನ್ನಿಗಿಂತ ಮೇಲೇರದು. ಇದು ಮುಂಬೈ ಒಂದು ಭಾಗಕ್ಕಷ್ಟೇ ಸಾಕು. ನೂರು ಟನ್ನಾದರೂ ಉತ್ಪನ್ನ ಇದ್ದರೆ ನಾವು ಹೊಸ ಜಾಗಗಳಲ್ಲಿ ಇದರ ಪ್ರೊಮೋಷನ್ ಮಾಡಲು ಹೊರಡಬಹುದು’ ಎನ್ನುವುದು ಶ್ರೀಧರ್ ಅವರ ಅನಿಸಿಕೆ.

ಮಹಾರಾಷ್ಟ್ರಕ್ಕೆ ಫನಸ್ ಬಾಜಿ ಮತ್ತು ಇತರ ಹಲಸಿನ ಉತ್ಪನ್ನಗಳನ್ನು ಮೌಲ್ಯವರ್ಧಿಸುವಲ್ಲಿ ಅವರದೇ ಆದ ಆಡಚಣೆಗಳಿವೆ. ಆದರೆ ಈ ಪಾಠ ಕಲಿತುಕೊಂಡು ಕರ್ನಾಟಕ ಮತ್ತು ಕೇರಳ ತುಂಬ ಪ್ರಗತಿ ಸಾಧಿಸಬಹುದು. ಉದಾಹರಣೆಗೆ ಕೊಡಗು, ವಯನಾಡುಗಳಂತಹ ಪ್ರದೇಶಗಳಲ್ಲಿ ಹಲಸಿಗೆ ಆನೆ ಕಾಟ ಇದೆ. ಇದನ್ನು ತಪ್ಪಿಸಲು ಕಾಫಿ ಎಸ್ಟೇಟ್ ಒಡೆಯರು ಎಳೆ ಹಲಸನ್ನು ಸಾರಾಸಗಟಾಗಿ ಕೊಯ್ದು ಬಿಸಾಕುತ್ತಾರೆ. ಅಂಥಲ್ಲಿ ಈ ಹಲಸನ್ನು ಬಳಸಿ ಅಡುಗೆಗೆ ಸಿದ್ಧ (ರೆಡಿ ಟು ಕುಕ್) ಉತ್ಪನ್ನ ತಯಾರಿಸಬಹುದು.

ಕೇರಳ, ಕರ್ನಾಟಕದಲ್ಲಿ ಎಳೆ ಹಲಸು ತರಕಾರಿಯ ರುಚಿ ಬಲ್ಲ ಲಕ್ಷಾಂತರ ಗ್ರಾಹಕರಿದ್ದಾರೆ. ಇಂಥವರಿಗಾಗಿ ಯಾವ ಉದ್ದಿಮೆದಾರರೂ ಈ ಥರದ ‘ಅಡುಗೆಗೆ ಸಿದ್ಧ’ ಉತ್ಪನ್ನ ತಯಾರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT