ಹುಳು ಸುಡುವ ಮಣ್ಣು
ಸೊಪ್ಪು ತರಕಾರಿಗಳ ಗಿಡಗಳು ಚಿಗುರೊಡೆಯುತ್ತಿದ್ದಂತೇ ಕೀಟ, ಹುಳುಗಳ ಬಾಧೆ ಹೆಚ್ಚು. ಈ ಬಾಧೆಯಿಂದ ರಕ್ಷಣೆಗೆ ಬಹುತೇಕ ಮಂದಿ ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಾರೆ. ಅದರ ಬದಲು ಸೊಪ್ಪು ತರಕಾರಿ ಗಿಡಗಳಿಗೆ ಮಣ್ಣಿನ ಅಥವಾ ಸುಡುಮಣ್ಣಿನ ದೂಳನ್ನು ಸಂಜೆಯ ವೇಳೆ ಎರಚಬೇಕು.
ಇದರಿಂದ ರಾತ್ರಿ ವೇಳೆ ಎಲೆಗಳ ಮೇಲೆ ಕುಳಿತು ಮೊಟ್ಟೆ ಇಡಲು ಬರುವ ಕೀಟಗಳು ಹತ್ತಿರ ಸುಳಿಯಲಾರದು. ಬೆಳಗಿನ ಜಾವ ಗಿಡಗಳಿಗೆ ನೀರು ಹಾಕುವುದರಿಂದ ಸೊಪ್ಪು ಸ್ವಚ್ಛವಾಗುತ್ತದೆ. ಇದರಿಂದ ರಾಸಾಯನಿಕ ಮುಕ್ತವಾದ ಶುಚಿಯಾದ ಸೊಪ್ಪು ಸಿಗುವುದು ಮಾತ್ರವಲ್ಲದೇ ಕ್ರಿಮಿಕೀಟಗಳ ಬಾಧೆಯಿಂದಯೂ ಸುಲಭದಲ್ಲಿ ಮುಕ್ತರಾಗಬಹುದು.
ನೆಲಗುಂಡಿ ಬಲೆ
ಬೆಳೆಗಳಿಗೆ ಇಲಿ ಬಾಧೆ ಹೆಚ್ಚಿದ್ದರೆ ಹೀಗೆ ಮಾಡಿ: ಎರಡು ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡಬ್ಬಿಯ ಮೇಲ್ಭಾಗವನ್ನು ಎರಡು ಇಂಚು ಕತ್ತರಿಸಿ. ಭೂಮಿಯ ಮೇಲಿನ ಭಾಗಕ್ಕೆ ಹೊಂದಿರುವಂತೆ ಡಬ್ಬಿಯನ್ನು ಆಳಕ್ಕೆ ಹುಗಿಯಿರಿ. (ನೆಲದ ಮಟ್ಟಕ್ಕೆ ಡಬ್ಬಿಯ ಮೇಲ್ಭಾಗ ಸರಿಯಾಗಿ ಇರಬೇಕು) ಇದರಲ್ಲಿ 3/4 ಭಾಗದಷ್ಟು ಸೋಪಿನ ಪುಡಿ ಮಿಶ್ರಿತ ನೀರು ತುಂಬಿ.
ಹೀಗೆ ಇಲಿಗಳ ಬಿಲ ಹಾಗೂ ಓಡಾಡುವ ಮಾರ್ಗದಲ್ಲಿ 5 ರಿಂದ 6 ಡಬ್ಬಿಗಳನ್ನು ನೆಲದಲ್ಲಿ ಹುಗಿಯಿರಿ. ರಾತ್ರಿ ನೆಲವೆಂದು ತಿಳಿದು ಓಡುವಾಗ ಡಬ್ಬಿಯಲ್ಲಿ ಬಿದ್ದು ಮೇಲೆ ಬರಲಾರದೆ ಸಾವನ್ನಪ್ಪುತ್ತವೆ. ಬೆಳೆಯನ್ನು ಬಾಧಿಸುವ ಎಲ್ಲ ರೀತಿಯ ನಿಶಾಚರಿಗಳ ಉಪದ್ರವಕ್ಕೂ ಈ ಪ್ರಯೋಗ ಉತ್ತಮ ಮಾರ್ಗ.