ಪಂಚವಟಿಯಲ್ಲಿ ಪರ್ಣಕುಟಿಯ ಮುಂದೆ ಸೀತಾರಾಮರು ಕುಳಿತಿದ್ದಾಗ, ಮುಗಿಲತೇರಿನಿಂದ ಮಂಜುಮಯ ಸ್ತ್ರೀ ಮೂರ್ತಿ ಮೂಡಿ ಬರುತ್ತದೆ. ಅದನ್ನು ಕುತೂಹಲದಿಂದ ನೋಡುತ್ತಾರೆ. ವಿನಯ ವಯ್ಯಾರದಿಂದ ಬಂದ ಆ ಸ್ತ್ರೀ ರಾಮನಿಗೆ ‘ಕೋಸಲೇಶ್ವರ, ನಿನಗೆ ಸ್ವಾಗತ. ನಮ್ಮ ದಕ್ಷಿಣಾವನಿಗೆ ನೀನು ಅತಿಥಿ. ನಾನು ಲಂಕೇಶ್ವರನ ಸಹೋದರಿ ಚಂದ್ರನಖಿ’ ಎಂದು ಪರಿಚಯಿಸಿಕೊಳ್ಳುತ್ತಾಳೆ. ಪರಸ್ಪರ ಪರಿಚಯಾತ್ಮಕ ಮಾತುಕತೆಯಲ್ಲಿ ರಾಮಚಂದ್ರನು ‘ವ್ರತದ ಮುಡಿಗೆ ಮೈತ್ರಿ ಪರಿಮಳದ ಹೂ. ಅದಕ್ಕಾಗಿ ನಾನು ಹಗೆತನವನ್ನು ಅಳಿಸುತ್ತ, ಅಕ್ಕರೆಯನ್ನು ವರ್ಧಿಸಲು ದೊರೆ ಗದ್ದುಗೆಯನ್ನು ತೊರೆದು ಇಲ್ಲಿಗೆ ಬಂದಿರುವೆ’ ಎಂದು ತನ್ನ ಸಹಜ ನೇಹಭಾವವನ್ನು ವ್ಯಕ್ತಪಡಿಸುವನು.