ಒಂದು ದಿನ ಚಿತ್ರಕೂಟದ ಪರ್ಣಶಾಲೆಯಲ್ಲಿ ರಾಮ ಸೀತೆ ಲಕ್ಷ್ಮಣರು ಕಗ್ಗತ್ತಲಿನಲ್ಲಿ ಕಿಟಕಿಯಾಚೆ ಕಾಣುವ ಕಾಡುಗಿಚ್ಚನ್ನು ಎಳೆಮಕ್ಕಳಂತೆ ಬಾಯ್ದೆರೆದು ಅಚ್ಚರಿಯಿಂದ ನೋಡಿದರು ಎಂದು ಕವಿ ವರ್ಣಿಸಿದ್ದಾರೆ. ಹಾಗೆ ಚಿತ್ರಿಸುವಾಗ ಅವರು ದಿಗ್ಭ್ರಮೆಯನ್ನು ತರುವ ಆಶ್ಚರ್ಯವನ್ನು ನವೀನ ಪದ ‘ಬೆಳ್ಳಚ್ಚರಿ’ಯಿಂದ ಸೂಚಿಸಿದ್ದಾರೆ.
ರಾತ್ರಿ ಆಕಾಶದ ಆ ತಾರಾಸಹಸ್ರಾಕ್ಷ ಇಂದ್ರನ ಓಲಗದಲ್ಲಿ ನರ್ತಿಸುವ ಉರಿಯ ಊರ್ವಶಿ ಎನ್ನುವಂತೆ ಕಾಡುಗಿಚ್ಚು ಹೊಳೆಯುತ್ತಿತ್ತು. ಆ ಚೆಲುವನ್ನು ಎಳೆಯ ಮಕ್ಕಳಂತೆ ಬಾಯಿತೆರೆದು, ದಿಗ್ಭ್ರಮೆಯನ್ನುಂಟು ಮಾಡುವ ಆಶ್ಚರ್ಯಕ್ಕೆ ಮಾರುಹೋದಂತೆ ದಿಟ್ಟಿಸಿದರು!