<p>ಅವರನ್ನು ಬರಮಾಡಿಕೊಳ್ಳಲು ಒಂದು ದಿನವೇ? ಒಂದು ವಿಶೇಷ ಸಂದರ್ಭದ ಆಸರೆಯಾದರೂ ಇರಬೇಕೆ? ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಮುಟ್ಟಿ ಮರೆಗೆ ನಿಂತವರಿಗೆ ಏನನ್ನಾದರೂ ತೊಡಿಸಬಹುದೇ? ಆಭರಣವನ್ನೂ ಕರಗಿಸಿಕೊಳ್ಳಬೇಕು ಎಂದಿದ್ದರಲ್ಲವೇ ಅವರು?<br /> <br /> ಇಂಥವರನ್ನು ಈ ದಿನ, ಇಂತಿಷ್ಟು ವೇಳೆಯಲ್ಲಿ ಇಂತಹ ವರುಷದಲ್ಲಿ ತೀರಿಹೋದರು ಎನ್ನುವರಲ್ಲ, ನಿಜವೇ? ಕಣ್ಣಿಗೆ ಕಾಣಿಸದಿರುವುದು ನಮ್ಮನ್ನು ಸೇರುವುದಿಲ್ಲ ಎಂದೆನ್ನಬಹುದೆ? ಬಹುಳವನ್ನು ತೋರಲು ಕಿರುಬೆರಳಿಗೂ ಕಿರಿದಾದ ಎರಡು ಗುಡ್ಡೆಗಳು ಪ್ರಮಾಣವೇ? <br /> <br /> ಇಷ್ಟಕ್ಕೂ ನಾವು ಬರಮಾಡಿಕೊಳ್ಳಬೇಕು ಎಂದಿದ್ದು ಬರಹಗಳಲ್ಲಿ ಮೂಡಿರುವ ಅವರನ್ನು ತಾನೇ? ಅವರು- ಸುಬ್ಬ, ತಿರುಕ, ಜಲಗಾರ, ಗೋಪಾಲ, ಏಕಲವ್ಯ, ಹೂವಯ್ಯ, ಮೂರ್ತಿ, ಗುಬ್ಬಕ್ಕ, ನಿಂಗ, ಮೀನಾಕ್ಷಿ, ಯಶೋಧರೆ, ತಿಂಗಳ ಮಾವ, ಟುವ್ವಿ ಹಕ್ಕಿ, ತೇನೆಹಕ್ಕಿ, ಐತ, ಪೀಂಚಲು, ಗಿರಿಯಣ್ಣ, ಮೋಡಣ್ಣ, ಮಲ್ಲಿಗೆಯಣ್ಣ, ಧನ್ವಂತರಿ... ಎಲ್ಲವೂ ಹೌದಲ್ಲವೇ? <br /> <br /> ಕನ್ನಡದ ಲೇಖಕ ತನ್ನ ಮುಖವ ತೋರುವುದು ಬರಹಗಳ ಭರಣಿ ಒಳಗಿಂದಲೇ ಅಲ್ಲವೇ? ತುಂಡಾದ ಎರಡು ಎಳೆಯಂತಹ ದಡಗಳ ನಡುವೆ ಸೇತುವೆಯಾಗುವುದು ಬರಹವೇ. <br /> <br /> ಅಂತಹ ಸೇತುವೆ ಕಂಡಾಗ ಕಂಠ ತುಂಬಿ ಬರುತ್ತದೆ; ಮಾತು ಚಿಗಿಯುತ್ತದೆ. ಆಡಲು ಇರುವ ಮೈದಾನದಂತೆ ಅವರ ಬರಹಗಳಿವೆ. ಈ ಮೂಳೆ-ಮಾಂಸದ ತಡಿಕೆ ಅರಳುವುದಕ್ಕೆ ನೆಲೆ ಅಲ್ಲಿದೆ; ಎದೆಬಡಿತದ ಸದ್ದಿಗೂ ಲಯವೊಂದು ದಕ್ಕುವುದು ಅಲ್ಲಿ ನಡೆದಾಗಲೇ. <br /> <br /> ಹಾಗೆ ನೋಡಿದರೆ, ಕನ್ನಡದ ವರ್ತಮಾನ ಎಡವಟ್ಟಾಗಿದೆ. ಎಂದೆನಿಸಿದಾಗೆಲ್ಲ, ಕನ್ನಡವನ್ನು ಬಲ್ಲ ನಮ್ಮಂಥವರು ಖಾಯಂ ಆಗಿಯೇ ಕೆಲವರ ಬರಹಗಳ ಬಳಿಗೆ ಹೋಗಿ ಬರುವುದುಂಟು; ಅಲ್ಲಿ ತೋಡಿಕೊಳ್ಳುವವರಿಗೆ ತಾವು ತೆರೆದುಕೊಂಡಿರುವುದು. ತುಂಬಾ ಸಲ ಆ ಬರಹಗಳು ನಮ್ಮನ್ನು ಹತ್ತಿರಕ್ಕೆ ಕರೆದು ಮಾತನಾಡಿಸುವ ಔದಾರ್ಯವನ್ನೂ ತೋರುವುವು. ಆಗಲೂ ನಾಚಿಕೊಂಡರೆ ನಷ್ಟ ನಮಗೆ ಮಾತ್ರವೇ ಇರುವುದು. ಈ ಬಗೆಯ ನಷ್ಟಕ್ಕೆ ಕನ್ನಡದ ತನ್ನವರು ಒಳಗಾಗಬಾರದೆಂದೇ ಕೆ.ವಿ.ಕುವೆಂಪುನವರು ತಮ್ಮ ಬರಹಗಳನ್ನು ಇಲ್ಲಿರಿಸಿದ್ದಾರೆ.<br /> <br /> ಏನು ಬಂದು ಏನು ಹೋದರೂ ನಮ್ಮ ಕನ್ನಡದ ಜನಸಮುದಾಯ ಸಂಜೆಗಾಳಿಯ ಹಾಗೆ ಬಂದು ನೆರವಾದವರನ್ನು ಮನದೊಳಗೆ ನೆನೆಸುವುದಿದೆ. ಇವತ್ತಿಗೂ ಕುವೆಂಪು ಅವರ ಬರಹಗಳನ್ನು ಮೇಲಿಂದ ಮೇಲೆ ಓದಬೇಕೆನ್ನಿಸುವುದು ಯಾಕೆಂದರೆ- ಈ ಮನುಷ್ಯ ಜನಕ್ಕಾಗುವ ಕಷ್ಟ-ಸುಖದ ಬಗ್ಗೆ ಎಷ್ಟೆಲ್ಲ ಒದ್ದಾಡಿದ್ದಾರೆ ಎಂದೇ; ಏನೆಲ್ಲವನ್ನು ತನ್ನ ಎದೆಯ ಮೇಲೆ ಹಾಕಿಕೊಂಡಿದ್ದಾರೆ ಎನ್ನಿಸಿಯೇ; ಅಲ್ಲಾಡದೆ ಏಕ ಉರಿಯುವ ನಮ್ಮ ನಡುಮನೆಯ ದೀಪದ ಬತ್ತಿಯನ್ನು ಎತ್ತರಿಸಿದ್ದಾರೆ ಎನ್ನುವ ಸಲುವಾಗಿಯೇ. <br /> <br /> ಒಂದು ಮನೆಯ ಹಾಗೆ...<br /> ವಿವಾಹವು ನಡೆಯುವ ಹಾದಿಯೇ ಹೊರತು ಸೇರುವ ಸೆರೆಮನೆಯಲ್ಲ ಎಂದು ಹೇಳಿದವರು ಕುವೆಂಪು. ಈ ಮಾತು ಅವರು ಕಂಡ ಬಾಳನೋಟವನ್ನು ತೋರಿಸುವಂಥದು; ಮುಖತಃ ಇವತ್ತಿಗೂ ಸಂಸಾರದಲ್ಲಿ ಕಂಗೆಟ್ಟವರಿಗೆ, ಬಾಯಾರಿದವರಿಗೆ ಬೇಕಾಗಿರುವುದು. ಹೀಗೆ ಹೇಳುತ್ತಿರುವಾಗ `ಕವಿಮನೆ~ ನೆನಪಾಗುವುದು. ಎಲ್ಲರೂ ಬಲ್ಲಂತೆ ಕುಪ್ಪಳ್ಳಿಯ ಸಮೀಪ `ಕವಿಮನೆ~ ಇದೆ. ಅಪರೂಪವೆನಿಸುವ ಈ ಸ್ಥಳಕ್ಕೆ ಹೋಗಿಬರುವವರ ಕೊರತೆ ಏನಿಲ್ಲ. <br /> <br /> ಕವಿಶೈಲವನ್ನು ನೋಡ ಬಯಸುವವರು ಅಲ್ಲಿ ಪ್ರವೇಶ ಪತ್ರ ಪಡೆದು ಹೋಗಬೇಕು. ಆ ಪ್ರವೇಶ ಪತ್ರ ಬಳುಕುತ್ತಿರುವುದಿಲ್ಲ; ಮಡಚಿಡಬೇಕು ಎನ್ನಿಸುವಂತೆಯೂ ಇರುವುದಿಲ್ಲ; ಒಂದು ಸಲ ನೋಡಬೇಕು ಎಂಬಷ್ಟು ನಯವಾಗಿರುತ್ತದೆ, ಎಲೆಯಂತೆ. ಆ ಪತ್ರದ ನಡುಮಧ್ಯೆ ಕುವೆಂಪು, ಹೇಮಾವತಿ ದಂಪತಿಗಳು ಕುಳಿತಿರುವ ಭಾವಚಿತ್ರವಿದೆ. ಅಷ್ಟು ಹತ್ತಿರವೂ ಅಲ್ಲದ, ದೂರವೂ ಅಲ್ಲದ ಹಾಗೆ ಇಬ್ಬರೂ ನಿರುಮ್ಮಳವಾಗಿದ್ದಾರೆ.<br /> <br /> ಮೊದಲು ಹೇಮಾವತಿಯವರು ಹೇಳಬೇಕಾದ್ದನ್ನು ಮಿಗದಂತೆ ಹೇಳಿ, ಈಗ ಕೇಳಿಸಿಕೊಳ್ಳುವ ಸರದಿಗೆ ಹೊಂದುಕೊಳ್ಳುತ್ತಿದ್ದು ಕುವೆಂಪು ಅವರು ಮತ್ತೇನನ್ನೋ ಹೇಳುತ್ತಿರುವಂತೆ ಆ ಚಿತ್ರವಿದೆ. ಮನೆಯ ಆಚೆಗೆ ಬಂದು ಒಂದು ಮುಷ್ಠಿಯಷ್ಟು ಜಾಗಬಿಟ್ಟು ಕುಳಿತಿರುವ ಈ ಇಬ್ಬರು ಒಂದು ಮನೆಯ ಹಾಗೆ ಕಾಣಿಸಿಕೊಳ್ಳುತ್ತಾರೆ. ಇದು ಕೇವಲ ಭಾವಚಿತ್ರವಾಗದೆ, ಈ ಕಾಲದ ಭಾವದ ಅಭಾವವನ್ನು ಕಡಿಮೆಗೊಳಿಸುವ ಚೈತನ್ಯದ ಧಾರೆಯನ್ನೇ ಕಳುಹಿಸುತ್ತದೆ. <br /> <br /> ಸಂಸಾರ ನಡೆಯುವುದು ಒಬ್ಬರಿಂದಲ್ಲ; ಯಾವುದೇ ಹೆಮ್ಮೆಗಳಿಂದಲ್ಲ ಎಂಬುದನ್ನು ಬಲ್ಲ ಕುವೆಂಪು ಸರಳತೆಗೆ ತೆತ್ತುಕೊಳ್ಳುತ್ತಾರೆ. ತಪ್ಪು ಮಾಡಿದೆ ಎನ್ನಿಸಿದಾಗ ಅಷ್ಟೇ ಹಗುರವಾಗಿ ಒಪ್ಪಿಕೊಳ್ಳುತ್ತಾರೆ; ಕ್ಷಮೆ ಕೋರುತ್ತಾರೆ:<br /> <br /> ತಾಯ ಚರಣಕಿರಣವೊಂದು <br /> ಕೃಪೆಯೊಳೆನ್ನ ಪೊರೆಯಲೆಂದು<br /> ನಿನ್ನ ರೂಪದಿಂದ ಬಂದು<br /> ಸಲಹುತಿರುವುದೆನ್ನನಿಂದು!<br /> ಮರೆಯುತದನು ಒಮ್ಮೆಯೊಮ್ಮೆ<br /> ಗಂಡನೆಂಬ ಗಂಡುಹೆಮ್ಮೆ<br /> ಮನವ ಮಥಿಸಿ ತಡೆಯಲಮ್ಮೆ:<br /> ಮರ್ತ್ಯನೊಂದು ಮನಃಸ್ಥಿತಿ<br /> ಮತ್ತೆ ಮತ್ತೆ ಈ ವಿಸ್ಮೃತಿ :<br /> ಹೇ ಮಾಸತಿ, ಪ್ರೇಮಾವತಿ,<br /> ಮೃಣ್ಮಯದಲಿ ಚಿನ್ಮಯ ರತಿ,<br /> ಮನ್ನಿಸೆನ್ನ ಭಗವತಿ!<br /> <br /> ಈ ಕ್ಷಮಾ ಕವಿತೆಯ ಒಳದನಿಯು, ಒಡೆದ ಮನಸ್ಸುಗಳಿಗೆ, ಎರಡು ಒಲೆ ಉರಿಯುತ್ತಿರುವ ಒಂದೇ ಮನೆಗೆ, ಇದಕ್ಕಿದ್ದಂತೆ ಹೊರಟುನಿಂತವರ ಬಳಿಗೆ ಸೇರಲೆಂದೇ ಇದೆ. <br /> <br /> ಸಾಮಾನ್ಯವಾಗಿ ಕಂಡಲ್ಲಿ ಕ್ಷೇಮ ಸಮಾಚಾರವನ್ನೂ ವಿಚಾರಿಸುವವರು ಈಚೆಗೆ ಇನ್ನೊಂದು ಪ್ರಶ್ನೆಯನ್ನು ಹೆಚ್ಚು ಕೇಳುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಯಾರ ಮಾತು ನಡೆಯುತ್ತದೆ? ಎಂಬುದೇ ಆ ಪ್ರಶ್ನೆ. ಇಂಥದ್ದೇ ಪ್ರಶ್ನೆ ಈ ಹಿಂದೆಯೂ ಕೇಳಿಬರುತ್ತಿದ್ದರೂ, ಈಗಿನ ಹಕ್ಕುದಾರಿಕೆ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿರಲಿಲ್ಲ; ಈಗದು ಬಳಕೆಯಲ್ಲಿದೆ. <br /> <br /> ಇದು ಕುಟುಂಬದಲ್ಲಿ ಪ್ರತಿಷ್ಠೆಯ, ಚರ್ಚೆಯ ವಿಷಯವೂ ಆಗುತ್ತಿದೆ. ಈ ಪ್ರತಿಷ್ಠೆಯ ಚಕ್ರಕ್ಕೆ ಸಿಲುಕಿ ಹಲವಾರು ಮನೆಗಳು ಆಘಾತಕ್ಕೆ ಒಳಗಾಗುತ್ತಲೇ ಇವೆ. ಇಂಥ ಪ್ರತಿಷ್ಠೆಗಿಂತಲೂ ಬದುಕು ದೊಡ್ಡದು ಎಂಬುದನ್ನು ಕುವೆಂಪು ಮನವರಿಕೆ ಮಾಡುತ್ತಾರೆ. ಅವರಿಗೆ ಸಂಸಾರದೊಳಗೆ ಯಾರು ಹಿಡಿತ ಸಾಧಿಸಬೇಕೆಂಬುದು ಗೌಣ; ಸಮಯದೊಂದಿಗೆ ಸವಿಯನ್ನು ಹೆಚ್ಚಿಸಿದ ಸತಿಯ ಬಗೆಗೆ ಪ್ರೀತಿ ಸಮೇತವಾಗಿರುವ ವಿನಯ:<br /> <br /> ಹಕ್ಕಿರದುಸಿರಿಗೆ ಹಕ್ಕಾದೆ;<br /> ದಿಕ್ಕಿರದುಸಿರಿಗೆ ದಿಕ್ಕಾದೆ.<br /> ಮನೆಬಿಟ್ಟವನಿಗೆ ಮನೆಯಾದೆ;<br /> ಕಣ್ಗೆಟ್ಟವನಿಗೆ ಕಣ್ಣಾದೆ;<br /> ಒಲುವೆಯ ಹೆಣ್ಣಾದೆ!<br /> ಸಾವಿನ ಸರಸಕೆ ಬಲಿವೊದರಸೆಗೆ<br /> ಅಮೃತದ ಹಣ್ಣಾದೆ. <br /> ಇಂಥ ಕುವೆಂಪು ಅವರಿಗೆ ಕನ್ನಡದ ಮನೆಯಷ್ಟೇ ಅಲ್ಲ, ತನ್ನ ಕನ್ನಡದ ನುಡಿಯು ಚೆನ್ನಾಗಿರಬೇಕೆಂಬ ಆಸೆ ಇದೆ.<br /> <br /> ಕನ್ನಡ ಸಿದ್ಧವಾದುದಲ್ಲ; ಆಗಬೇಕಾದದ್ದು ಸದ್ಯದ ಕನ್ನಡದ ಸಂದರ್ಭವನ್ನು ನೋಡಿ: ಕನ್ನಡವನ್ನು ಹೇಗಾದರೂ ಸರಿಯೇ ಉಳಿಸಬೇಕೆಂದು ಹೇಳುವವರು ದಿನೇದಿನೇ ಹೆಚ್ಚುತ್ತಿದ್ದಾರೆ. ಹಾಗೆ ಹೇಳುತ್ತಿರುವವರಲ್ಲಿ ಕನ್ನಡಕ್ಕೆ ಎರಗಿರುವ ಅನೇಕ ಸಮಸ್ಯೆಗಳ ಕರಡಿಗೆಗಳಿವೆ. <br /> <br /> ಈ ಸಮಸ್ಯೆಗಳ ಎದುರಿಗೆ, ಕನ್ನಡಕ್ಕೆ ಕನ್ನಡದ್ದೇಯಾದ ವಿವೇಚನಾಕ್ರಮವನ್ನು, ಸಾಮಗ್ರಿಯನ್ನು ಕಟ್ಟಿಕೊಳ್ಳುವ ತುರ್ತು ಮುಂಚೂಣಿಯಲ್ಲಿದೆ. ಈ ಪ್ರಕ್ರಿಯೆ ವ್ಯಾಕರಣ, ರಚನೆಗೆ ಸಂಬಂಧಿಸಿದ ಹಾಗೆ ಆಂಶಿಕವಾಗಿಯಾದರೂ ನಡೆಯುತ್ತಿದೆ; ನಡೆಯಲಿ. ಆದರೆ ಈ ಬಗೆಯ ಪಂಡಿತ ವಲಯದ ಕಟ್ಟೋಣದ ಆಚೆಗೂ ಕನ್ನಡಕ್ಕಿರುವ ಧಾರಣಾಶಕ್ತಿಯನ್ನು ಕನ್ನಡ ಜನಸಮುದಾಯದ ಭಾಗವಾಗಿರುವ ಕುವೆಂಪು ಅವರ ಕೃತಿಗಳು ನಿರೂಪಿಸುತ್ತವೆ.<br /> <br /> ಹೀಗೆ ಹೇಳುವಾಗ, ಮೊದಲಿಗೆ ಕರ್ನಾಟಕದ ವಿಕಾಸವನ್ನು ಕುರಿತು ಚಿಂತಿಸಿರುವ ನೆನ್ನೆಗಳನ್ನು ನೋಡಬೇಕಿದೆ. ಕನ್ನಡವನ್ನು ಕಟ್ಟಿದವರು ಎರಡು ದಾರಿಗಳನ್ನು ತುಳಿದಿದ್ದಾರೆ.<br /> <br /> ಒಂದು ಕನ್ನಡ ನಾಡಿನ ಆಚಾರ್ಯ ಕಾರ್ಯಕರ್ತ ಆಲೂರು ವೆಂಕಟರಾಯರ ಮಾದರಿ; ಇದನ್ನು `ನಾಡುನೋಡು~ ಮಾದರಿ ಎನ್ನಬೇಕಿದೆ. ಇನ್ನೊಂದು ಕುವೆಂಪು ಮೊದಲಾಗಿ ಇತರ ಕವಿಗಳು ತುಳಿದಿರುವ ಮಾದರಿ; ಇದನ್ನು `ನುಡಿಕೇಳು~ ಮಾದರಿ ಎನ್ನಬೇಕಿದೆ. ಈ ಎರಡು ದಾರಿಗಳು ಕನ್ನಡದವರು ಆರಿಸಿಕೊಂಡಿರುವ ಹಾಗೆ, ಕನ್ನಡಿಗರಿಗೆ ತೋರಿರುವ ದಾರಿಯೂ ಆಗಿದೆ. <br /> <br /> ಮೇಲೆ ಸೂಚಿಸಿರುವ ಎರಡು ಮಾದರಿಗಳಲ್ಲಿ ಮೊದಲನೆಯದು, ನಾನು - ನನ್ನದು - ನನ್ನ ಮನೆ ಎನ್ನುವ ಭಾವನೆಯಲ್ಲಿ ಹುಟ್ಟಿಕೊಂಡಿರುವುದು; ಇದು ತನ್ನದು ಎಲ್ಲಿಂದ ಎಲ್ಲಿಯವರೆಗೆ? ಯಾವುದು? ಎಷ್ಟು? ಎಂಬುದನ್ನು ಗೊತ್ತು ಮಾಡಿಕೊಳ್ಳಲು ಯತ್ನಿಸುತ್ತದೆ; ಹಾಗಾಗಿ ಚದರಗಳನ್ನು ಲೆಕ್ಕ ಹಾಕುತ್ತದೆ; ಲೆಕ್ಕ ಹಾಕಿದ ಮೇಲೆಯೇ ಅಲ್ಲಿ ತಂಗಿರುವ ಜನರ ಭಾಷೆ ಸಮೃದ್ಧಿಗೊಳ್ಳಲು ಏನು ಬೇಕು? ಏನು ಮಾಡಬೇಕು? ಎಂದು ಮುಂದಾಗುತ್ತದೆ. ಈ ದಾರಿಗೆ ತನ್ನ ಭಾಷೆಯನ್ನು ಇನ್ಯಾವುದೋ ನುಂಗಿಬಿಡುವುದು ಎಂಬ ಆತಂಕವೂ ಇದೆ. <br /> <br /> ಎರಡನೆಯದು, ನಾನು-ನನ್ನದು ನನ್ನ ಮನೆ ಎನ್ನುವ ಭಾವ ಸಂಬಂಧದಲ್ಲಿಯೇ ಇರುತ್ತದೆಯಾದರೂ, ಅಳತೆ ಮಾಡುವುದನ್ನು ಉಲ್ಲಂಘಿಸುತ್ತದೆ. ಈ ದಾರಿಗೆ ಯಾವುದೇ ಆತಂಕವಿರುವುದಿಲ್ಲ. ಇದು ಕನ್ನಡವಿರುವುದೇ ಮೇರೆ ಮೀರುವುದಕ್ಕೆ ಎನ್ನುತ್ತದೆ. ಈ ನಿಲುವು ಮೊದಲನೆಯದಕ್ಕೆ ವಿರೋಧವಲ್ಲ; ಒತ್ತಾಸೆಯೇ ಆಗಿದೆ. ಆದರೆ ಆ ಒತ್ತಾಸೆಯು ಮೂರ್ತ ರೂಪಗಳಲ್ಲಿ ಇರುವುದಿಲ್ಲವಷ್ಟೇ ಎನ್ನುವುದನ್ನು ಕುವೆಂಪು ಅವರ `ಕನ್ನಡ~ ಕವಿತೆ ಕಾಣಿಸುತ್ತದೆ. ಈ ಕವಿತೆ ಕನ್ನಡವನ್ನು ಕೊಂಡಾಡುತ್ತಲೇ ಈ ಒಂದು ಪ್ರಶ್ನೆಯನ್ನು 1946ರಲ್ಲಿ ಕೇಳಿಕೊಂಡಿದೆ.<br /> <br /> ಬಾಳುವುದೇತಕೆ? ನುಡಿ ಎಲೆ ಜೀವ:<br /> ಸಿರಿಗನ್ನಡದಲಿ ಕವಿತೆಯ ಹಾಡೆ!<br /> ಸಿರಿಗನ್ನಡದೇಳಿಗೆಯನು ನೋಡೆ:<br /> ಕನ್ನಡ ತಾಯಿಯ ಸೇವೆಯ ಮಾಡೆ!<br /> ಈ ಸಾಲುಗಳು ಮುಖ್ಯವೆನಿಸುವುದು ಯಾಕೆಂದರೆ, ಕನ್ನಡದ ಮೂಲಕ ಅಥವಾ ಕನ್ನಡದಿಂದ ಏನೂ ಸಿಗುವುದಿಲ್ಲ; ಯಾವುದೇ ಬಹುಮಾನವೂ ಪ್ರಾಪ್ತಿಯಾಗುವುದಿಲ್ಲ ಎನ್ನುವುದನ್ನೇ ಕುವೆಂಪು ಅವರು ಹೇಳುತ್ತಾರೆ; ನಾಡು ಕಟ್ಟುವ ಕಟ್ಟಾಳುಗಳಿಗಿಂತ ಕನ್ನಡವನ್ನು ಹಿಂಜರಿಕೆಯಿಲ್ಲದೆ ನುಡಿಯುವವರು ಅವರಿಗೆ ಸಾಕು ಎನ್ನಿಸುತ್ತದೆ. <br /> <br /> ಕನ್ನಡವನ್ನು ನೋಡುವುದಕ್ಕೆ (ವ್ಯಾಕರಣ, ರಚನೆಗೆ) ಸರಿ ಕಾಣಿಸುವ ಹಾಗೆ ಮುರಿದು ಕಟ್ಟುತ್ತಿರುವ ಈ ಸಂದರ್ಭದಲ್ಲಿ, ಕನ್ನಡವನ್ನು ಕೇಳ್ವೆಯ ದೆಸೆಯಿಂದ ಹೆಚ್ಚಿಸಬೇಕೆಂದು ಕುವೆಂಪು ಕನಸು ಕಂಡಿದ್ದಾರೆ. ಇಲ್ಲೊಂದು ಪ್ರಶ್ನೆ ಏಳುತ್ತದೆ. ಕುವೆಂಪು ಅವರು ಕನ್ನಡ, ಕರ್ನಾಟಕ, ಪ್ರಾಂತ್ಯದ ಬಗೆಗೂ ಮಾತನಾಡಿದ್ದಾರಲ್ಲ; ಆ ಕುರಿತು ಬರೆದಿದ್ದಾರಲ್ಲ ಎಂಬುದು ಪ್ರಶ್ನೆಯಾಗಿ ಕಾಡುವುದು ಸಹಜವೇ.<br /> <br /> ಈ ಬಗೆಯ ಉದ್ದೇಶಿತ ಬರಹಗಳು ಮತ್ತು ಭಾಷಣಗಳ ನೆಲೆಯಿಂದ ಲೇಖಕನ ಅಭಿಪ್ರಾಯವನ್ನು ಪಡೆಯುವ ರೂಢಿಯಾದ ಒಂದು ಓದಿನ ಕ್ರಮ ಇದೆ. ಈ ಕ್ರಮವನ್ನು ಬಿಟ್ಟು ಒಟ್ಟು ಕುವೆಂಪು ಅವರ ಬರವಣಿಗೆಯಲ್ಲೇ ಕಾಲಕಾಲಕ್ಕೆ ಆಗಿರುವ ಪಲ್ಲಟವನ್ನು ನೋಡಿದರೆ `ಕನ್ನಡ~ದಂತಹ ಕವಿತೆಯೆಂಬ ಜನಸಮುದಾಯದ ಆಂತರ್ಯ ಅರ್ಥವಾಗುತ್ತದೆ. ಈ ನೋಟದಲ್ಲಿ ಕನ್ನಡ ಭಾಷೆ ಮೊದಲಾಗುತ್ತದೆ; ಆನಂತರ ಕರ್ನಾಟಕದ ಮಾತು ಬರುತ್ತದೆ.<br /> <br /> ಕುವೆಂಪು ಅವರ ಬಳಕೆ<br /> ಈ ಹೊತ್ತಿಗೆ ಅಕ್ಷರ ಬಲ್ಲಂತಹ ಎರಡು ವರ್ಗದ ಜನ ಎರಡು ರೀತಿಯಲ್ಲಿ ಕುವೆಂಪು ಅವರನ್ನು ಬಳಸುತ್ತಿದ್ದಾರೆ. ಮೊದಲನೇ ವರ್ಗವು, ಅವರ ಬರಹಗಳೊಂದಿಗೆ ನೇರವಾದ ಒಡನಾಟವನ್ನು ಇರಿಸಿಕೊಂಡಿದೆ. ಈ ಒಡನಾಟದ ಸಲುಗೆಗೆ ಕುವೆಂಪು ಅವರನ್ನು ಉತ್ಸವಮೂರ್ತಿಯಾಗಿ ಮೆರೆಸುವುಕ್ಕಿಂತ, ಅವರ ಬರಹಗಳಲ್ಲಿ ಕಾಣಸಿಗುವ ಬೆಳಕನ್ನು ಹೀರಿಕೊಳ್ಳಲು ಹಂಬಲಿಸುತ್ತದೆ; <br /> <br /> ಇಲ್ಲಿ ಕುವೆಂಪು ಅವರ ಬರಹಗಳೊಂದಿಗೆ ಜಗಳವೂ ಸಾಧ್ಯವಾಗುತ್ತದೆ. ಈ ನಿಟ್ಟು ಯಾವುದೇ ಲೇಖಕನನ್ನು ಅನುಸಂಧಾನ ಮಾಡುವುದಕ್ಕೆ ಸರಿಯಾದದ್ದು. ಇಂಥವರಿಂದ ಕನ್ನಡಕ್ಕೆ ಅಪಾಯವಿಲ್ಲ; ಎರಡನೇ ವರ್ಗದಿಂದ ಆ ಅಪಾಯವಿದೆ. ಈ ವರ್ಗ ಹಿಂದೆಯಿಂದಲೂ ಕುವೆಂಪು ಅವರ ಬರಹಗಳಿಂದ ಕಲಿಯಲು ಪ್ರಯತ್ನಿಸಿದ್ದು ಕಡಿಮೆಯೇ; <br /> <br /> ಹೆಚ್ಚೆಂದರೆ ಇಲ್ಲಿ ಅವರ ಬರಹಗಳನ್ನು ತೋರಿಸುವುದಕ್ಕೆ ಆಸಕ್ತಿ ಇದೆ. ಹಾಗಾಗಿಯೇ ತಮ್ಮ ಮನೆಯ ಗೋಡೆಯ ಮೇಲೆ, ಕಾರಿನ ಮುಂಬದಿಗೆ, ದ್ವಿಚಕ್ರ ವಾಹನದ ಹಿಂಬದಿಗೆ ಕುವೆಂಪು ಅವರ ಬರಹಗಳನ್ನು ಕತ್ತರಿಸಿ ಹಾಕಿಕೊಳ್ಳುವುದಿದೆ.<br /> <br /> ಈ ತೋರುಗಾಣಿಕೆ ಇಲ್ಲಿಗೆ ಮುಗಿಯುವುದಿಲ್ಲ. ಕುವೆಂಪು ಅವರನ್ನು ಇಡುಗಂಟಾಗಿಯೇ ನೋಡುತ್ತಾ ಬಂದಿರುವ ಈ ವರ್ಗ, ಅವರ ಕೃತಿಗಳಲ್ಲಿ ಬಳಕೆಯಾಗಿರುವ ಪರಿಕರಗಳನ್ನು ನಿರ್ದಿಷ್ಟ ಕೋಮಿನ ಚೌಕಟ್ಟಿಗೆ ಒಳಪಡಿಸುವ ಉಮೇದಿನಲ್ಲಿದೆ. ಹಾಗಾಗಿಯೇ ಯಾವತ್ತೂ ಇಲ್ಲದ ಸಂಘ, ಸೇವಾ ಸಂಸ್ಥೆಗಳು ಕುವೆಂಪು ಅವರ ಹೆಸರಿನಲ್ಲಿ ಈಗ ಹೆಚ್ಚು ಹುಟ್ಟಿಕೊಳ್ಳುತ್ತಿವೆ.<br /> <br /> ಇವು ಹಮ್ಮಿಕೊಳ್ಳುವ ವಿಚಾರ ಸಂಕಿರಣ, ಸನ್ಮಾನ ಸಮಾರಂಭ, ಪುಸ್ತಕ ಚರ್ಚೆ, ಮಕ್ಕಳ ಸ್ಪರ್ಧೆ, ರಾಜ್ಯೋತ್ಸವ ಕಾರ್ಯಕ್ರಮ ಯಥಾಪ್ರಕಾರ ಕುವೆಂಪು ಅವರ ಜಾತಿ ಹಿನ್ನೆಲೆಗೆ ಸರಿಹೊಂದುವ ಇಲ್ಲವೇ ಗುಣವಾಚಕದ ಕೊಳದಲ್ಲಿ ಮುಳುಗಿಸಿ ಏಳಿಸುವವರಿಂದ ನೆರವೇರುತ್ತದೆ. <br /> <br /> ಈ ರೂಪದಲ್ಲಿ ಜಾತಿಯನ್ನು ಬಲಿಷ್ಠವಾಗಿಸಲು ಮುಂದಾಗುತ್ತಿರುವವರ ಯಾತ್ರೆ ರಾಜ್ಯದ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಖಾಸಗಿ ಕಂಪನಿಗಳ ಒಡೆತನದಲ್ಲಿರುವ ಸಂಸ್ಥೆಗಳ ಕಡೆಗೆ ಹೋಗುತ್ತಿದೆ. ವಿಪರ್ಯಾಸವೆಂದರೆ ಕುವೆಂಪು ಅವರ ಕೃತಿಗಳಲ್ಲಿ ಕಂಡುಬರುವ ಉಕ್ತಿಗಳೇ ಈ ಸಂಘಟನೆಗಳ ಹೆಸರುಗಳಾಗಿರುತ್ತವೆ ಎಂಬುದು.<br /> <br /> ಇಂಥವು ಹೆಚ್ಚಾಗಿ ಮೈಸೂರು, ಮಂಡ್ಯ, ನಂಜನಗೂಡು, ಹಾಸನ, ಚಾಮರಾಜನಗರದಂತಹ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. <br /> <br /> ಪರಿಣಾಮ; ಈಗೀಗ `ಕುವೆಂಪು~ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಕ್ರಿಕೆಟ್ ಆಡುವವರು ಕೂಡ ತಮಗೆ `ಬೇಕಾದ~ವರ ಹುಡುಕಾಟದಲ್ಲಿದ್ದಾರೆ. `ಕುವೆಂಪು~ ಹೆಸರಿನಲ್ಲಿ ತಲೆಯೆತ್ತಿರುವ ಶಿಕ್ಷಣ ಸಂಸ್ಥೆಗಳು ಪ್ರವೇಶ ಪಡೆಯುವವರಿಂದ ಜಾತಿಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿವೆ. ಇದಕ್ಕೆ ಅಧ್ಯಾಪಕರು, ವಿಶ್ವಾವಿದ್ಯಾನಿಲಯದ ಪ್ರಾಧ್ಯಾಪಕರು ಎಲ್ಲೆಡೆ ಚದುರಿಹೋಗಿರುವ ಕುವೆಂಪು ಅವರ ಆಪ್ತ ಶಿಷ್ಯರು, ವಿದ್ಯಾರ್ಥಿಗಳ ಬೆಂಬಲವೂ ವ್ಯಾಪಕವಾಗಿದೆ. ಹೀಗೆ ದೊಡ್ಡ ಮಂಕರಿಯಲ್ಲಿ ಕುವೆಂಪು ಅವರನ್ನು ಕವುಚಿಹಾಕುವ ಯತ್ನ ನಡೆದಿದೆ.<br /> <br /> ಕನ್ನಡದ ವಿವೇಕ<br /> `ಶೂದ್ರತಪಸ್ವಿ~ ನಾಟಕದ ಮೇಲೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ನೀಡಿದ ಅಭಿಪ್ರಾಯಕ್ಕೆ, ಕುವೆಂಪು ಅವರು ಬರೆದ `ಮಾರ್ನುಡಿ~ ಈಗಲೂ ಮುಖ್ಯವೇ. ಕನ್ನಡದಲ್ಲಿ ಸಂವಾದ ಮಾಡುವವರಿಗೆ ಇವರಿಬ್ಬರ ತೂಕಬದ್ಧ ವರ್ತನೆ ಮಾದರಿಯಾಗಿಯೇ ತೋರುತ್ತದೆ. ಮುಖ್ಯವಾಗಿ ಮಾಸ್ತಿ ಅವರಿಗೆ ಕುವೆಂಪು ಅವರು ಪ್ರತಿಕ್ರಿಯೆ ನೀಡಿರುವ ಬರಹದಲ್ಲಿನ ಅಡಿಟಿಪ್ಪಣಿಯನ್ನು ನಾವು ನೋಡಬೇಕು:<br /> <br /> ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟುಕೊಡುತ್ತದೆ ಎಂಬ ಅಸತ್ಯವೂ ಅಪ್ರಕೃತವೂ ಅವಿವೇಕವೂ ಆದ ಕಾವ್ಯ ವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಅದನ್ನು ಸ್ತುತಿಸಿದರೆಂದು ಕೇಳಿದ್ದೇನೆ (ಪು.28).<br /> <br /> ಮೇಲಿನ ಮಾತುಗಳನ್ನು ಆಲಿಸುವವರಿಗೆ ಈ ಕವಿ ಕನ್ನಡದ ಸೂಕ್ಷ್ಮವಲಯವನ್ನು ಜಾಗೃತ ಮಾಡುತ್ತಿದ್ದಾರೆ ಎನ್ನಿಸುವುದು ನಿಜವೇ. ಈ ವಿವೇಕವನ್ನು ಕನ್ನಡದ ನಮ್ಮ ಲೇಖಕರು ಕಾಲಕ್ಕೆ ತಕ್ಕಂತೆ, ಬೇರೆಬೇರೆ ಸಂದರ್ಭಗಳಲ್ಲಿ, ಭಿನ್ನವಾದ ವಿನ್ಯಾಸಗಳಲ್ಲಿ ಹೇಳುತ್ತಾ ಬಂದಿರುವುದನ್ನೂ ಕಾಣಬಹುದಾಗಿದೆ. ಉದಾಹರಣೆಗೆ: `ಇಂದಿನ ಜೀವನ ಕ್ಲಿಷ್ಟ ಎಂದರೇನು?~ (ಗೋಪಾಲಕೃಷ್ಣ ಅಡಿಗ), `ಕಮೀಟ್ಮೆಂಟ್ ಯಾರಿಗೆ? <br /> <br /> ಯಾವುದಕ್ಕೆ?~ (ನಿರಂಜನ), `ಸಾಹಿತ್ಯ - ತತ್ವಜ್ಞಾನ ತಾತ್ವಿಕ ನಿಲುವುಗಳು ಇತ್ಯಾದಿ~ (ಡಿ.ಆರ್. ನಾಗರಾಜ್), `ಅಲಕ್ಷ್ಯ ಮತ್ತು ಸಂಸ್ಕೃತಿ ಸ್ಥಿತಿ~ (ಕೆ.ಪಿ.ಪೂರ್ಣಚಂದ್ರ ತೇಜಸ್ವಿ), `ಕನ್ನಡ ಸಾಹಿತ್ಯದಲ್ಲಿ ಪ್ರಧಾನ ಮತ್ತು ಅಧೀನ ಸಂಸ್ಕೃತಿ~ (ಕೆ.ವಿ.ನಾರಾಯಣ), `ಜಾತಿಗಳೇ ಜೈಲಾಗದಿರಿ~ (ಬರಗೂರು ರಾಮಚಂದ್ರಪ್ಪ), `ಓದುವುದು ಎಂದರೆ~ (ರಾಜೇಂದ್ರ ಚೆನ್ನಿ) ಇತ್ಯಾದಿ.<br /> <br /> ಇಂತಹ ಬರಹಗಳು ಓದಿನ ಜವಾಬ್ದಾರಿಯನ್ನು ಕುರಿತು ನಿವೇದಿಸುತ್ತವೆ. ಇವುಗಳ ಸಮ್ಮುಖದಲ್ಲಿಯೇ ಕನ್ನಡದ ಸಂವಾದದ ಬಾಗಿಲುಗಳು ಈಗ ಮುಚ್ಚಿಹೋಗಿವೆ. <br /> <br /> ಯಾವುದೋ ಕೃತಿಯ ಬಗೆಗೆ ಚರ್ಚೆ ಆಗುತ್ತಿದೆ ಎಂದು ಅನಿಸುವ ಹೊತ್ತಿಗೆ, ಅಲ್ಲಿ ಲೇಖಕನನ್ನು ನಿಂದಿಸುವ, ಖಾಸಗಿ ವಿವರಗಳನ್ನು ಎತ್ತಾಡುವ ಕೆಟ್ಟ ಚಾಳಿ ಈಗ ಸಂಸ್ಕೃತಿ ಚಿಂತನೆಯ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗೆಯ ಚರ್ಚೆಗಳಲ್ಲಿ ಪಠ್ಯವೇ ನಾಪತ್ತೆ ಆಗಿರುತ್ತದೆ. ಬದಲಾಗಿ ಯಾವುದಾದರೊಂದು ಗುಂಪನ್ನು ಎತ್ತಿಕಟ್ಟುವ ಕೆಲಸ ಸಭೆ ಸೇರುವವರಿಂದ ನಡೆಯುತ್ತದೆ.<br /> <br /> ವಾದಗಳನ್ನು ಆಶಯಗಳನ್ನು ಮುಂದಕ್ಕೆ ಬಿಟ್ಟುಕೊಂಡು ಕೃತಿಗೆ ಅವಮಾನ ಮಾಡಲಾಗುತ್ತಿದೆ. ಲೇಖಕನ ಹಿನ್ನೆಲೆಯೇ ಕೃತಿಯ ಮೌಲ್ಯವನ್ನು ನಿರ್ಧರಿಸುವುದಕ್ಕೆ ಇರುವ ಏಕೈಕ ಮಾನದಂಡ. ಕನ್ನಡಕ್ಕೆ ಪ್ರಶಸ್ತಿ ಬಂದರೆ ವೈದಿಕರಲ್ಲದವರಿಗೆ ಬರಬೇಕು ಎಂದು ಹೇಳುವವರೇ ಸಂಸ್ಕೃತಿ ಚಿಂತಕರಾಗಿದ್ದಾರೆ. <br /> <br /> ಈ ನಡವಳಿಕೆಯಿಂದ ಏನನ್ನಾದರೂ ಕಲಿಯಲು ಸಾಧ್ಯವೇ? ಇವುಗಳನ್ನು ಮಾದರಿ ಎನ್ನಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದು ಹೊಸ ತಲೆಮಾರಿನ ಕೆಲವರಿಗಾದರೂ ಗೊತ್ತಾಗುತ್ತಿದೆ.<br /> <br /> ಈ ಕಷ್ಟ ಕಾಲದಲ್ಲಿ ನಮ್ಮನ್ನು ಕೈಹಿಡಿಯಬಲ್ಲಂತವು ಮತ್ತೆ ಕುವೆಂಪುನವರ ಬರಹಗಳೇ. ಲಂಕೇಶರಿಗೆ ಒಂದು ಕಡೆ ಕುವೆಂಪು ಅವರು ಹೇಳಿದ ಮಾತೊಂದು ಇಲ್ಲಿ ನೆನಪಾಗುತ್ತಿದೆ- `ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ~. ಈ ವಿವೇಕವೇ ನಮ್ಮ ನಾಳೆಗಳ ಕಾಯಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅವರನ್ನು ಬರಮಾಡಿಕೊಳ್ಳಲು ಒಂದು ದಿನವೇ? ಒಂದು ವಿಶೇಷ ಸಂದರ್ಭದ ಆಸರೆಯಾದರೂ ಇರಬೇಕೆ? ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಮುಟ್ಟಿ ಮರೆಗೆ ನಿಂತವರಿಗೆ ಏನನ್ನಾದರೂ ತೊಡಿಸಬಹುದೇ? ಆಭರಣವನ್ನೂ ಕರಗಿಸಿಕೊಳ್ಳಬೇಕು ಎಂದಿದ್ದರಲ್ಲವೇ ಅವರು?<br /> <br /> ಇಂಥವರನ್ನು ಈ ದಿನ, ಇಂತಿಷ್ಟು ವೇಳೆಯಲ್ಲಿ ಇಂತಹ ವರುಷದಲ್ಲಿ ತೀರಿಹೋದರು ಎನ್ನುವರಲ್ಲ, ನಿಜವೇ? ಕಣ್ಣಿಗೆ ಕಾಣಿಸದಿರುವುದು ನಮ್ಮನ್ನು ಸೇರುವುದಿಲ್ಲ ಎಂದೆನ್ನಬಹುದೆ? ಬಹುಳವನ್ನು ತೋರಲು ಕಿರುಬೆರಳಿಗೂ ಕಿರಿದಾದ ಎರಡು ಗುಡ್ಡೆಗಳು ಪ್ರಮಾಣವೇ? <br /> <br /> ಇಷ್ಟಕ್ಕೂ ನಾವು ಬರಮಾಡಿಕೊಳ್ಳಬೇಕು ಎಂದಿದ್ದು ಬರಹಗಳಲ್ಲಿ ಮೂಡಿರುವ ಅವರನ್ನು ತಾನೇ? ಅವರು- ಸುಬ್ಬ, ತಿರುಕ, ಜಲಗಾರ, ಗೋಪಾಲ, ಏಕಲವ್ಯ, ಹೂವಯ್ಯ, ಮೂರ್ತಿ, ಗುಬ್ಬಕ್ಕ, ನಿಂಗ, ಮೀನಾಕ್ಷಿ, ಯಶೋಧರೆ, ತಿಂಗಳ ಮಾವ, ಟುವ್ವಿ ಹಕ್ಕಿ, ತೇನೆಹಕ್ಕಿ, ಐತ, ಪೀಂಚಲು, ಗಿರಿಯಣ್ಣ, ಮೋಡಣ್ಣ, ಮಲ್ಲಿಗೆಯಣ್ಣ, ಧನ್ವಂತರಿ... ಎಲ್ಲವೂ ಹೌದಲ್ಲವೇ? <br /> <br /> ಕನ್ನಡದ ಲೇಖಕ ತನ್ನ ಮುಖವ ತೋರುವುದು ಬರಹಗಳ ಭರಣಿ ಒಳಗಿಂದಲೇ ಅಲ್ಲವೇ? ತುಂಡಾದ ಎರಡು ಎಳೆಯಂತಹ ದಡಗಳ ನಡುವೆ ಸೇತುವೆಯಾಗುವುದು ಬರಹವೇ. <br /> <br /> ಅಂತಹ ಸೇತುವೆ ಕಂಡಾಗ ಕಂಠ ತುಂಬಿ ಬರುತ್ತದೆ; ಮಾತು ಚಿಗಿಯುತ್ತದೆ. ಆಡಲು ಇರುವ ಮೈದಾನದಂತೆ ಅವರ ಬರಹಗಳಿವೆ. ಈ ಮೂಳೆ-ಮಾಂಸದ ತಡಿಕೆ ಅರಳುವುದಕ್ಕೆ ನೆಲೆ ಅಲ್ಲಿದೆ; ಎದೆಬಡಿತದ ಸದ್ದಿಗೂ ಲಯವೊಂದು ದಕ್ಕುವುದು ಅಲ್ಲಿ ನಡೆದಾಗಲೇ. <br /> <br /> ಹಾಗೆ ನೋಡಿದರೆ, ಕನ್ನಡದ ವರ್ತಮಾನ ಎಡವಟ್ಟಾಗಿದೆ. ಎಂದೆನಿಸಿದಾಗೆಲ್ಲ, ಕನ್ನಡವನ್ನು ಬಲ್ಲ ನಮ್ಮಂಥವರು ಖಾಯಂ ಆಗಿಯೇ ಕೆಲವರ ಬರಹಗಳ ಬಳಿಗೆ ಹೋಗಿ ಬರುವುದುಂಟು; ಅಲ್ಲಿ ತೋಡಿಕೊಳ್ಳುವವರಿಗೆ ತಾವು ತೆರೆದುಕೊಂಡಿರುವುದು. ತುಂಬಾ ಸಲ ಆ ಬರಹಗಳು ನಮ್ಮನ್ನು ಹತ್ತಿರಕ್ಕೆ ಕರೆದು ಮಾತನಾಡಿಸುವ ಔದಾರ್ಯವನ್ನೂ ತೋರುವುವು. ಆಗಲೂ ನಾಚಿಕೊಂಡರೆ ನಷ್ಟ ನಮಗೆ ಮಾತ್ರವೇ ಇರುವುದು. ಈ ಬಗೆಯ ನಷ್ಟಕ್ಕೆ ಕನ್ನಡದ ತನ್ನವರು ಒಳಗಾಗಬಾರದೆಂದೇ ಕೆ.ವಿ.ಕುವೆಂಪುನವರು ತಮ್ಮ ಬರಹಗಳನ್ನು ಇಲ್ಲಿರಿಸಿದ್ದಾರೆ.<br /> <br /> ಏನು ಬಂದು ಏನು ಹೋದರೂ ನಮ್ಮ ಕನ್ನಡದ ಜನಸಮುದಾಯ ಸಂಜೆಗಾಳಿಯ ಹಾಗೆ ಬಂದು ನೆರವಾದವರನ್ನು ಮನದೊಳಗೆ ನೆನೆಸುವುದಿದೆ. ಇವತ್ತಿಗೂ ಕುವೆಂಪು ಅವರ ಬರಹಗಳನ್ನು ಮೇಲಿಂದ ಮೇಲೆ ಓದಬೇಕೆನ್ನಿಸುವುದು ಯಾಕೆಂದರೆ- ಈ ಮನುಷ್ಯ ಜನಕ್ಕಾಗುವ ಕಷ್ಟ-ಸುಖದ ಬಗ್ಗೆ ಎಷ್ಟೆಲ್ಲ ಒದ್ದಾಡಿದ್ದಾರೆ ಎಂದೇ; ಏನೆಲ್ಲವನ್ನು ತನ್ನ ಎದೆಯ ಮೇಲೆ ಹಾಕಿಕೊಂಡಿದ್ದಾರೆ ಎನ್ನಿಸಿಯೇ; ಅಲ್ಲಾಡದೆ ಏಕ ಉರಿಯುವ ನಮ್ಮ ನಡುಮನೆಯ ದೀಪದ ಬತ್ತಿಯನ್ನು ಎತ್ತರಿಸಿದ್ದಾರೆ ಎನ್ನುವ ಸಲುವಾಗಿಯೇ. <br /> <br /> ಒಂದು ಮನೆಯ ಹಾಗೆ...<br /> ವಿವಾಹವು ನಡೆಯುವ ಹಾದಿಯೇ ಹೊರತು ಸೇರುವ ಸೆರೆಮನೆಯಲ್ಲ ಎಂದು ಹೇಳಿದವರು ಕುವೆಂಪು. ಈ ಮಾತು ಅವರು ಕಂಡ ಬಾಳನೋಟವನ್ನು ತೋರಿಸುವಂಥದು; ಮುಖತಃ ಇವತ್ತಿಗೂ ಸಂಸಾರದಲ್ಲಿ ಕಂಗೆಟ್ಟವರಿಗೆ, ಬಾಯಾರಿದವರಿಗೆ ಬೇಕಾಗಿರುವುದು. ಹೀಗೆ ಹೇಳುತ್ತಿರುವಾಗ `ಕವಿಮನೆ~ ನೆನಪಾಗುವುದು. ಎಲ್ಲರೂ ಬಲ್ಲಂತೆ ಕುಪ್ಪಳ್ಳಿಯ ಸಮೀಪ `ಕವಿಮನೆ~ ಇದೆ. ಅಪರೂಪವೆನಿಸುವ ಈ ಸ್ಥಳಕ್ಕೆ ಹೋಗಿಬರುವವರ ಕೊರತೆ ಏನಿಲ್ಲ. <br /> <br /> ಕವಿಶೈಲವನ್ನು ನೋಡ ಬಯಸುವವರು ಅಲ್ಲಿ ಪ್ರವೇಶ ಪತ್ರ ಪಡೆದು ಹೋಗಬೇಕು. ಆ ಪ್ರವೇಶ ಪತ್ರ ಬಳುಕುತ್ತಿರುವುದಿಲ್ಲ; ಮಡಚಿಡಬೇಕು ಎನ್ನಿಸುವಂತೆಯೂ ಇರುವುದಿಲ್ಲ; ಒಂದು ಸಲ ನೋಡಬೇಕು ಎಂಬಷ್ಟು ನಯವಾಗಿರುತ್ತದೆ, ಎಲೆಯಂತೆ. ಆ ಪತ್ರದ ನಡುಮಧ್ಯೆ ಕುವೆಂಪು, ಹೇಮಾವತಿ ದಂಪತಿಗಳು ಕುಳಿತಿರುವ ಭಾವಚಿತ್ರವಿದೆ. ಅಷ್ಟು ಹತ್ತಿರವೂ ಅಲ್ಲದ, ದೂರವೂ ಅಲ್ಲದ ಹಾಗೆ ಇಬ್ಬರೂ ನಿರುಮ್ಮಳವಾಗಿದ್ದಾರೆ.<br /> <br /> ಮೊದಲು ಹೇಮಾವತಿಯವರು ಹೇಳಬೇಕಾದ್ದನ್ನು ಮಿಗದಂತೆ ಹೇಳಿ, ಈಗ ಕೇಳಿಸಿಕೊಳ್ಳುವ ಸರದಿಗೆ ಹೊಂದುಕೊಳ್ಳುತ್ತಿದ್ದು ಕುವೆಂಪು ಅವರು ಮತ್ತೇನನ್ನೋ ಹೇಳುತ್ತಿರುವಂತೆ ಆ ಚಿತ್ರವಿದೆ. ಮನೆಯ ಆಚೆಗೆ ಬಂದು ಒಂದು ಮುಷ್ಠಿಯಷ್ಟು ಜಾಗಬಿಟ್ಟು ಕುಳಿತಿರುವ ಈ ಇಬ್ಬರು ಒಂದು ಮನೆಯ ಹಾಗೆ ಕಾಣಿಸಿಕೊಳ್ಳುತ್ತಾರೆ. ಇದು ಕೇವಲ ಭಾವಚಿತ್ರವಾಗದೆ, ಈ ಕಾಲದ ಭಾವದ ಅಭಾವವನ್ನು ಕಡಿಮೆಗೊಳಿಸುವ ಚೈತನ್ಯದ ಧಾರೆಯನ್ನೇ ಕಳುಹಿಸುತ್ತದೆ. <br /> <br /> ಸಂಸಾರ ನಡೆಯುವುದು ಒಬ್ಬರಿಂದಲ್ಲ; ಯಾವುದೇ ಹೆಮ್ಮೆಗಳಿಂದಲ್ಲ ಎಂಬುದನ್ನು ಬಲ್ಲ ಕುವೆಂಪು ಸರಳತೆಗೆ ತೆತ್ತುಕೊಳ್ಳುತ್ತಾರೆ. ತಪ್ಪು ಮಾಡಿದೆ ಎನ್ನಿಸಿದಾಗ ಅಷ್ಟೇ ಹಗುರವಾಗಿ ಒಪ್ಪಿಕೊಳ್ಳುತ್ತಾರೆ; ಕ್ಷಮೆ ಕೋರುತ್ತಾರೆ:<br /> <br /> ತಾಯ ಚರಣಕಿರಣವೊಂದು <br /> ಕೃಪೆಯೊಳೆನ್ನ ಪೊರೆಯಲೆಂದು<br /> ನಿನ್ನ ರೂಪದಿಂದ ಬಂದು<br /> ಸಲಹುತಿರುವುದೆನ್ನನಿಂದು!<br /> ಮರೆಯುತದನು ಒಮ್ಮೆಯೊಮ್ಮೆ<br /> ಗಂಡನೆಂಬ ಗಂಡುಹೆಮ್ಮೆ<br /> ಮನವ ಮಥಿಸಿ ತಡೆಯಲಮ್ಮೆ:<br /> ಮರ್ತ್ಯನೊಂದು ಮನಃಸ್ಥಿತಿ<br /> ಮತ್ತೆ ಮತ್ತೆ ಈ ವಿಸ್ಮೃತಿ :<br /> ಹೇ ಮಾಸತಿ, ಪ್ರೇಮಾವತಿ,<br /> ಮೃಣ್ಮಯದಲಿ ಚಿನ್ಮಯ ರತಿ,<br /> ಮನ್ನಿಸೆನ್ನ ಭಗವತಿ!<br /> <br /> ಈ ಕ್ಷಮಾ ಕವಿತೆಯ ಒಳದನಿಯು, ಒಡೆದ ಮನಸ್ಸುಗಳಿಗೆ, ಎರಡು ಒಲೆ ಉರಿಯುತ್ತಿರುವ ಒಂದೇ ಮನೆಗೆ, ಇದಕ್ಕಿದ್ದಂತೆ ಹೊರಟುನಿಂತವರ ಬಳಿಗೆ ಸೇರಲೆಂದೇ ಇದೆ. <br /> <br /> ಸಾಮಾನ್ಯವಾಗಿ ಕಂಡಲ್ಲಿ ಕ್ಷೇಮ ಸಮಾಚಾರವನ್ನೂ ವಿಚಾರಿಸುವವರು ಈಚೆಗೆ ಇನ್ನೊಂದು ಪ್ರಶ್ನೆಯನ್ನು ಹೆಚ್ಚು ಕೇಳುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಯಾರ ಮಾತು ನಡೆಯುತ್ತದೆ? ಎಂಬುದೇ ಆ ಪ್ರಶ್ನೆ. ಇಂಥದ್ದೇ ಪ್ರಶ್ನೆ ಈ ಹಿಂದೆಯೂ ಕೇಳಿಬರುತ್ತಿದ್ದರೂ, ಈಗಿನ ಹಕ್ಕುದಾರಿಕೆ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿರಲಿಲ್ಲ; ಈಗದು ಬಳಕೆಯಲ್ಲಿದೆ. <br /> <br /> ಇದು ಕುಟುಂಬದಲ್ಲಿ ಪ್ರತಿಷ್ಠೆಯ, ಚರ್ಚೆಯ ವಿಷಯವೂ ಆಗುತ್ತಿದೆ. ಈ ಪ್ರತಿಷ್ಠೆಯ ಚಕ್ರಕ್ಕೆ ಸಿಲುಕಿ ಹಲವಾರು ಮನೆಗಳು ಆಘಾತಕ್ಕೆ ಒಳಗಾಗುತ್ತಲೇ ಇವೆ. ಇಂಥ ಪ್ರತಿಷ್ಠೆಗಿಂತಲೂ ಬದುಕು ದೊಡ್ಡದು ಎಂಬುದನ್ನು ಕುವೆಂಪು ಮನವರಿಕೆ ಮಾಡುತ್ತಾರೆ. ಅವರಿಗೆ ಸಂಸಾರದೊಳಗೆ ಯಾರು ಹಿಡಿತ ಸಾಧಿಸಬೇಕೆಂಬುದು ಗೌಣ; ಸಮಯದೊಂದಿಗೆ ಸವಿಯನ್ನು ಹೆಚ್ಚಿಸಿದ ಸತಿಯ ಬಗೆಗೆ ಪ್ರೀತಿ ಸಮೇತವಾಗಿರುವ ವಿನಯ:<br /> <br /> ಹಕ್ಕಿರದುಸಿರಿಗೆ ಹಕ್ಕಾದೆ;<br /> ದಿಕ್ಕಿರದುಸಿರಿಗೆ ದಿಕ್ಕಾದೆ.<br /> ಮನೆಬಿಟ್ಟವನಿಗೆ ಮನೆಯಾದೆ;<br /> ಕಣ್ಗೆಟ್ಟವನಿಗೆ ಕಣ್ಣಾದೆ;<br /> ಒಲುವೆಯ ಹೆಣ್ಣಾದೆ!<br /> ಸಾವಿನ ಸರಸಕೆ ಬಲಿವೊದರಸೆಗೆ<br /> ಅಮೃತದ ಹಣ್ಣಾದೆ. <br /> ಇಂಥ ಕುವೆಂಪು ಅವರಿಗೆ ಕನ್ನಡದ ಮನೆಯಷ್ಟೇ ಅಲ್ಲ, ತನ್ನ ಕನ್ನಡದ ನುಡಿಯು ಚೆನ್ನಾಗಿರಬೇಕೆಂಬ ಆಸೆ ಇದೆ.<br /> <br /> ಕನ್ನಡ ಸಿದ್ಧವಾದುದಲ್ಲ; ಆಗಬೇಕಾದದ್ದು ಸದ್ಯದ ಕನ್ನಡದ ಸಂದರ್ಭವನ್ನು ನೋಡಿ: ಕನ್ನಡವನ್ನು ಹೇಗಾದರೂ ಸರಿಯೇ ಉಳಿಸಬೇಕೆಂದು ಹೇಳುವವರು ದಿನೇದಿನೇ ಹೆಚ್ಚುತ್ತಿದ್ದಾರೆ. ಹಾಗೆ ಹೇಳುತ್ತಿರುವವರಲ್ಲಿ ಕನ್ನಡಕ್ಕೆ ಎರಗಿರುವ ಅನೇಕ ಸಮಸ್ಯೆಗಳ ಕರಡಿಗೆಗಳಿವೆ. <br /> <br /> ಈ ಸಮಸ್ಯೆಗಳ ಎದುರಿಗೆ, ಕನ್ನಡಕ್ಕೆ ಕನ್ನಡದ್ದೇಯಾದ ವಿವೇಚನಾಕ್ರಮವನ್ನು, ಸಾಮಗ್ರಿಯನ್ನು ಕಟ್ಟಿಕೊಳ್ಳುವ ತುರ್ತು ಮುಂಚೂಣಿಯಲ್ಲಿದೆ. ಈ ಪ್ರಕ್ರಿಯೆ ವ್ಯಾಕರಣ, ರಚನೆಗೆ ಸಂಬಂಧಿಸಿದ ಹಾಗೆ ಆಂಶಿಕವಾಗಿಯಾದರೂ ನಡೆಯುತ್ತಿದೆ; ನಡೆಯಲಿ. ಆದರೆ ಈ ಬಗೆಯ ಪಂಡಿತ ವಲಯದ ಕಟ್ಟೋಣದ ಆಚೆಗೂ ಕನ್ನಡಕ್ಕಿರುವ ಧಾರಣಾಶಕ್ತಿಯನ್ನು ಕನ್ನಡ ಜನಸಮುದಾಯದ ಭಾಗವಾಗಿರುವ ಕುವೆಂಪು ಅವರ ಕೃತಿಗಳು ನಿರೂಪಿಸುತ್ತವೆ.<br /> <br /> ಹೀಗೆ ಹೇಳುವಾಗ, ಮೊದಲಿಗೆ ಕರ್ನಾಟಕದ ವಿಕಾಸವನ್ನು ಕುರಿತು ಚಿಂತಿಸಿರುವ ನೆನ್ನೆಗಳನ್ನು ನೋಡಬೇಕಿದೆ. ಕನ್ನಡವನ್ನು ಕಟ್ಟಿದವರು ಎರಡು ದಾರಿಗಳನ್ನು ತುಳಿದಿದ್ದಾರೆ.<br /> <br /> ಒಂದು ಕನ್ನಡ ನಾಡಿನ ಆಚಾರ್ಯ ಕಾರ್ಯಕರ್ತ ಆಲೂರು ವೆಂಕಟರಾಯರ ಮಾದರಿ; ಇದನ್ನು `ನಾಡುನೋಡು~ ಮಾದರಿ ಎನ್ನಬೇಕಿದೆ. ಇನ್ನೊಂದು ಕುವೆಂಪು ಮೊದಲಾಗಿ ಇತರ ಕವಿಗಳು ತುಳಿದಿರುವ ಮಾದರಿ; ಇದನ್ನು `ನುಡಿಕೇಳು~ ಮಾದರಿ ಎನ್ನಬೇಕಿದೆ. ಈ ಎರಡು ದಾರಿಗಳು ಕನ್ನಡದವರು ಆರಿಸಿಕೊಂಡಿರುವ ಹಾಗೆ, ಕನ್ನಡಿಗರಿಗೆ ತೋರಿರುವ ದಾರಿಯೂ ಆಗಿದೆ. <br /> <br /> ಮೇಲೆ ಸೂಚಿಸಿರುವ ಎರಡು ಮಾದರಿಗಳಲ್ಲಿ ಮೊದಲನೆಯದು, ನಾನು - ನನ್ನದು - ನನ್ನ ಮನೆ ಎನ್ನುವ ಭಾವನೆಯಲ್ಲಿ ಹುಟ್ಟಿಕೊಂಡಿರುವುದು; ಇದು ತನ್ನದು ಎಲ್ಲಿಂದ ಎಲ್ಲಿಯವರೆಗೆ? ಯಾವುದು? ಎಷ್ಟು? ಎಂಬುದನ್ನು ಗೊತ್ತು ಮಾಡಿಕೊಳ್ಳಲು ಯತ್ನಿಸುತ್ತದೆ; ಹಾಗಾಗಿ ಚದರಗಳನ್ನು ಲೆಕ್ಕ ಹಾಕುತ್ತದೆ; ಲೆಕ್ಕ ಹಾಕಿದ ಮೇಲೆಯೇ ಅಲ್ಲಿ ತಂಗಿರುವ ಜನರ ಭಾಷೆ ಸಮೃದ್ಧಿಗೊಳ್ಳಲು ಏನು ಬೇಕು? ಏನು ಮಾಡಬೇಕು? ಎಂದು ಮುಂದಾಗುತ್ತದೆ. ಈ ದಾರಿಗೆ ತನ್ನ ಭಾಷೆಯನ್ನು ಇನ್ಯಾವುದೋ ನುಂಗಿಬಿಡುವುದು ಎಂಬ ಆತಂಕವೂ ಇದೆ. <br /> <br /> ಎರಡನೆಯದು, ನಾನು-ನನ್ನದು ನನ್ನ ಮನೆ ಎನ್ನುವ ಭಾವ ಸಂಬಂಧದಲ್ಲಿಯೇ ಇರುತ್ತದೆಯಾದರೂ, ಅಳತೆ ಮಾಡುವುದನ್ನು ಉಲ್ಲಂಘಿಸುತ್ತದೆ. ಈ ದಾರಿಗೆ ಯಾವುದೇ ಆತಂಕವಿರುವುದಿಲ್ಲ. ಇದು ಕನ್ನಡವಿರುವುದೇ ಮೇರೆ ಮೀರುವುದಕ್ಕೆ ಎನ್ನುತ್ತದೆ. ಈ ನಿಲುವು ಮೊದಲನೆಯದಕ್ಕೆ ವಿರೋಧವಲ್ಲ; ಒತ್ತಾಸೆಯೇ ಆಗಿದೆ. ಆದರೆ ಆ ಒತ್ತಾಸೆಯು ಮೂರ್ತ ರೂಪಗಳಲ್ಲಿ ಇರುವುದಿಲ್ಲವಷ್ಟೇ ಎನ್ನುವುದನ್ನು ಕುವೆಂಪು ಅವರ `ಕನ್ನಡ~ ಕವಿತೆ ಕಾಣಿಸುತ್ತದೆ. ಈ ಕವಿತೆ ಕನ್ನಡವನ್ನು ಕೊಂಡಾಡುತ್ತಲೇ ಈ ಒಂದು ಪ್ರಶ್ನೆಯನ್ನು 1946ರಲ್ಲಿ ಕೇಳಿಕೊಂಡಿದೆ.<br /> <br /> ಬಾಳುವುದೇತಕೆ? ನುಡಿ ಎಲೆ ಜೀವ:<br /> ಸಿರಿಗನ್ನಡದಲಿ ಕವಿತೆಯ ಹಾಡೆ!<br /> ಸಿರಿಗನ್ನಡದೇಳಿಗೆಯನು ನೋಡೆ:<br /> ಕನ್ನಡ ತಾಯಿಯ ಸೇವೆಯ ಮಾಡೆ!<br /> ಈ ಸಾಲುಗಳು ಮುಖ್ಯವೆನಿಸುವುದು ಯಾಕೆಂದರೆ, ಕನ್ನಡದ ಮೂಲಕ ಅಥವಾ ಕನ್ನಡದಿಂದ ಏನೂ ಸಿಗುವುದಿಲ್ಲ; ಯಾವುದೇ ಬಹುಮಾನವೂ ಪ್ರಾಪ್ತಿಯಾಗುವುದಿಲ್ಲ ಎನ್ನುವುದನ್ನೇ ಕುವೆಂಪು ಅವರು ಹೇಳುತ್ತಾರೆ; ನಾಡು ಕಟ್ಟುವ ಕಟ್ಟಾಳುಗಳಿಗಿಂತ ಕನ್ನಡವನ್ನು ಹಿಂಜರಿಕೆಯಿಲ್ಲದೆ ನುಡಿಯುವವರು ಅವರಿಗೆ ಸಾಕು ಎನ್ನಿಸುತ್ತದೆ. <br /> <br /> ಕನ್ನಡವನ್ನು ನೋಡುವುದಕ್ಕೆ (ವ್ಯಾಕರಣ, ರಚನೆಗೆ) ಸರಿ ಕಾಣಿಸುವ ಹಾಗೆ ಮುರಿದು ಕಟ್ಟುತ್ತಿರುವ ಈ ಸಂದರ್ಭದಲ್ಲಿ, ಕನ್ನಡವನ್ನು ಕೇಳ್ವೆಯ ದೆಸೆಯಿಂದ ಹೆಚ್ಚಿಸಬೇಕೆಂದು ಕುವೆಂಪು ಕನಸು ಕಂಡಿದ್ದಾರೆ. ಇಲ್ಲೊಂದು ಪ್ರಶ್ನೆ ಏಳುತ್ತದೆ. ಕುವೆಂಪು ಅವರು ಕನ್ನಡ, ಕರ್ನಾಟಕ, ಪ್ರಾಂತ್ಯದ ಬಗೆಗೂ ಮಾತನಾಡಿದ್ದಾರಲ್ಲ; ಆ ಕುರಿತು ಬರೆದಿದ್ದಾರಲ್ಲ ಎಂಬುದು ಪ್ರಶ್ನೆಯಾಗಿ ಕಾಡುವುದು ಸಹಜವೇ.<br /> <br /> ಈ ಬಗೆಯ ಉದ್ದೇಶಿತ ಬರಹಗಳು ಮತ್ತು ಭಾಷಣಗಳ ನೆಲೆಯಿಂದ ಲೇಖಕನ ಅಭಿಪ್ರಾಯವನ್ನು ಪಡೆಯುವ ರೂಢಿಯಾದ ಒಂದು ಓದಿನ ಕ್ರಮ ಇದೆ. ಈ ಕ್ರಮವನ್ನು ಬಿಟ್ಟು ಒಟ್ಟು ಕುವೆಂಪು ಅವರ ಬರವಣಿಗೆಯಲ್ಲೇ ಕಾಲಕಾಲಕ್ಕೆ ಆಗಿರುವ ಪಲ್ಲಟವನ್ನು ನೋಡಿದರೆ `ಕನ್ನಡ~ದಂತಹ ಕವಿತೆಯೆಂಬ ಜನಸಮುದಾಯದ ಆಂತರ್ಯ ಅರ್ಥವಾಗುತ್ತದೆ. ಈ ನೋಟದಲ್ಲಿ ಕನ್ನಡ ಭಾಷೆ ಮೊದಲಾಗುತ್ತದೆ; ಆನಂತರ ಕರ್ನಾಟಕದ ಮಾತು ಬರುತ್ತದೆ.<br /> <br /> ಕುವೆಂಪು ಅವರ ಬಳಕೆ<br /> ಈ ಹೊತ್ತಿಗೆ ಅಕ್ಷರ ಬಲ್ಲಂತಹ ಎರಡು ವರ್ಗದ ಜನ ಎರಡು ರೀತಿಯಲ್ಲಿ ಕುವೆಂಪು ಅವರನ್ನು ಬಳಸುತ್ತಿದ್ದಾರೆ. ಮೊದಲನೇ ವರ್ಗವು, ಅವರ ಬರಹಗಳೊಂದಿಗೆ ನೇರವಾದ ಒಡನಾಟವನ್ನು ಇರಿಸಿಕೊಂಡಿದೆ. ಈ ಒಡನಾಟದ ಸಲುಗೆಗೆ ಕುವೆಂಪು ಅವರನ್ನು ಉತ್ಸವಮೂರ್ತಿಯಾಗಿ ಮೆರೆಸುವುಕ್ಕಿಂತ, ಅವರ ಬರಹಗಳಲ್ಲಿ ಕಾಣಸಿಗುವ ಬೆಳಕನ್ನು ಹೀರಿಕೊಳ್ಳಲು ಹಂಬಲಿಸುತ್ತದೆ; <br /> <br /> ಇಲ್ಲಿ ಕುವೆಂಪು ಅವರ ಬರಹಗಳೊಂದಿಗೆ ಜಗಳವೂ ಸಾಧ್ಯವಾಗುತ್ತದೆ. ಈ ನಿಟ್ಟು ಯಾವುದೇ ಲೇಖಕನನ್ನು ಅನುಸಂಧಾನ ಮಾಡುವುದಕ್ಕೆ ಸರಿಯಾದದ್ದು. ಇಂಥವರಿಂದ ಕನ್ನಡಕ್ಕೆ ಅಪಾಯವಿಲ್ಲ; ಎರಡನೇ ವರ್ಗದಿಂದ ಆ ಅಪಾಯವಿದೆ. ಈ ವರ್ಗ ಹಿಂದೆಯಿಂದಲೂ ಕುವೆಂಪು ಅವರ ಬರಹಗಳಿಂದ ಕಲಿಯಲು ಪ್ರಯತ್ನಿಸಿದ್ದು ಕಡಿಮೆಯೇ; <br /> <br /> ಹೆಚ್ಚೆಂದರೆ ಇಲ್ಲಿ ಅವರ ಬರಹಗಳನ್ನು ತೋರಿಸುವುದಕ್ಕೆ ಆಸಕ್ತಿ ಇದೆ. ಹಾಗಾಗಿಯೇ ತಮ್ಮ ಮನೆಯ ಗೋಡೆಯ ಮೇಲೆ, ಕಾರಿನ ಮುಂಬದಿಗೆ, ದ್ವಿಚಕ್ರ ವಾಹನದ ಹಿಂಬದಿಗೆ ಕುವೆಂಪು ಅವರ ಬರಹಗಳನ್ನು ಕತ್ತರಿಸಿ ಹಾಕಿಕೊಳ್ಳುವುದಿದೆ.<br /> <br /> ಈ ತೋರುಗಾಣಿಕೆ ಇಲ್ಲಿಗೆ ಮುಗಿಯುವುದಿಲ್ಲ. ಕುವೆಂಪು ಅವರನ್ನು ಇಡುಗಂಟಾಗಿಯೇ ನೋಡುತ್ತಾ ಬಂದಿರುವ ಈ ವರ್ಗ, ಅವರ ಕೃತಿಗಳಲ್ಲಿ ಬಳಕೆಯಾಗಿರುವ ಪರಿಕರಗಳನ್ನು ನಿರ್ದಿಷ್ಟ ಕೋಮಿನ ಚೌಕಟ್ಟಿಗೆ ಒಳಪಡಿಸುವ ಉಮೇದಿನಲ್ಲಿದೆ. ಹಾಗಾಗಿಯೇ ಯಾವತ್ತೂ ಇಲ್ಲದ ಸಂಘ, ಸೇವಾ ಸಂಸ್ಥೆಗಳು ಕುವೆಂಪು ಅವರ ಹೆಸರಿನಲ್ಲಿ ಈಗ ಹೆಚ್ಚು ಹುಟ್ಟಿಕೊಳ್ಳುತ್ತಿವೆ.<br /> <br /> ಇವು ಹಮ್ಮಿಕೊಳ್ಳುವ ವಿಚಾರ ಸಂಕಿರಣ, ಸನ್ಮಾನ ಸಮಾರಂಭ, ಪುಸ್ತಕ ಚರ್ಚೆ, ಮಕ್ಕಳ ಸ್ಪರ್ಧೆ, ರಾಜ್ಯೋತ್ಸವ ಕಾರ್ಯಕ್ರಮ ಯಥಾಪ್ರಕಾರ ಕುವೆಂಪು ಅವರ ಜಾತಿ ಹಿನ್ನೆಲೆಗೆ ಸರಿಹೊಂದುವ ಇಲ್ಲವೇ ಗುಣವಾಚಕದ ಕೊಳದಲ್ಲಿ ಮುಳುಗಿಸಿ ಏಳಿಸುವವರಿಂದ ನೆರವೇರುತ್ತದೆ. <br /> <br /> ಈ ರೂಪದಲ್ಲಿ ಜಾತಿಯನ್ನು ಬಲಿಷ್ಠವಾಗಿಸಲು ಮುಂದಾಗುತ್ತಿರುವವರ ಯಾತ್ರೆ ರಾಜ್ಯದ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಖಾಸಗಿ ಕಂಪನಿಗಳ ಒಡೆತನದಲ್ಲಿರುವ ಸಂಸ್ಥೆಗಳ ಕಡೆಗೆ ಹೋಗುತ್ತಿದೆ. ವಿಪರ್ಯಾಸವೆಂದರೆ ಕುವೆಂಪು ಅವರ ಕೃತಿಗಳಲ್ಲಿ ಕಂಡುಬರುವ ಉಕ್ತಿಗಳೇ ಈ ಸಂಘಟನೆಗಳ ಹೆಸರುಗಳಾಗಿರುತ್ತವೆ ಎಂಬುದು.<br /> <br /> ಇಂಥವು ಹೆಚ್ಚಾಗಿ ಮೈಸೂರು, ಮಂಡ್ಯ, ನಂಜನಗೂಡು, ಹಾಸನ, ಚಾಮರಾಜನಗರದಂತಹ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. <br /> <br /> ಪರಿಣಾಮ; ಈಗೀಗ `ಕುವೆಂಪು~ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಕ್ರಿಕೆಟ್ ಆಡುವವರು ಕೂಡ ತಮಗೆ `ಬೇಕಾದ~ವರ ಹುಡುಕಾಟದಲ್ಲಿದ್ದಾರೆ. `ಕುವೆಂಪು~ ಹೆಸರಿನಲ್ಲಿ ತಲೆಯೆತ್ತಿರುವ ಶಿಕ್ಷಣ ಸಂಸ್ಥೆಗಳು ಪ್ರವೇಶ ಪಡೆಯುವವರಿಂದ ಜಾತಿಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿವೆ. ಇದಕ್ಕೆ ಅಧ್ಯಾಪಕರು, ವಿಶ್ವಾವಿದ್ಯಾನಿಲಯದ ಪ್ರಾಧ್ಯಾಪಕರು ಎಲ್ಲೆಡೆ ಚದುರಿಹೋಗಿರುವ ಕುವೆಂಪು ಅವರ ಆಪ್ತ ಶಿಷ್ಯರು, ವಿದ್ಯಾರ್ಥಿಗಳ ಬೆಂಬಲವೂ ವ್ಯಾಪಕವಾಗಿದೆ. ಹೀಗೆ ದೊಡ್ಡ ಮಂಕರಿಯಲ್ಲಿ ಕುವೆಂಪು ಅವರನ್ನು ಕವುಚಿಹಾಕುವ ಯತ್ನ ನಡೆದಿದೆ.<br /> <br /> ಕನ್ನಡದ ವಿವೇಕ<br /> `ಶೂದ್ರತಪಸ್ವಿ~ ನಾಟಕದ ಮೇಲೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ನೀಡಿದ ಅಭಿಪ್ರಾಯಕ್ಕೆ, ಕುವೆಂಪು ಅವರು ಬರೆದ `ಮಾರ್ನುಡಿ~ ಈಗಲೂ ಮುಖ್ಯವೇ. ಕನ್ನಡದಲ್ಲಿ ಸಂವಾದ ಮಾಡುವವರಿಗೆ ಇವರಿಬ್ಬರ ತೂಕಬದ್ಧ ವರ್ತನೆ ಮಾದರಿಯಾಗಿಯೇ ತೋರುತ್ತದೆ. ಮುಖ್ಯವಾಗಿ ಮಾಸ್ತಿ ಅವರಿಗೆ ಕುವೆಂಪು ಅವರು ಪ್ರತಿಕ್ರಿಯೆ ನೀಡಿರುವ ಬರಹದಲ್ಲಿನ ಅಡಿಟಿಪ್ಪಣಿಯನ್ನು ನಾವು ನೋಡಬೇಕು:<br /> <br /> ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟುಕೊಡುತ್ತದೆ ಎಂಬ ಅಸತ್ಯವೂ ಅಪ್ರಕೃತವೂ ಅವಿವೇಕವೂ ಆದ ಕಾವ್ಯ ವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಅದನ್ನು ಸ್ತುತಿಸಿದರೆಂದು ಕೇಳಿದ್ದೇನೆ (ಪು.28).<br /> <br /> ಮೇಲಿನ ಮಾತುಗಳನ್ನು ಆಲಿಸುವವರಿಗೆ ಈ ಕವಿ ಕನ್ನಡದ ಸೂಕ್ಷ್ಮವಲಯವನ್ನು ಜಾಗೃತ ಮಾಡುತ್ತಿದ್ದಾರೆ ಎನ್ನಿಸುವುದು ನಿಜವೇ. ಈ ವಿವೇಕವನ್ನು ಕನ್ನಡದ ನಮ್ಮ ಲೇಖಕರು ಕಾಲಕ್ಕೆ ತಕ್ಕಂತೆ, ಬೇರೆಬೇರೆ ಸಂದರ್ಭಗಳಲ್ಲಿ, ಭಿನ್ನವಾದ ವಿನ್ಯಾಸಗಳಲ್ಲಿ ಹೇಳುತ್ತಾ ಬಂದಿರುವುದನ್ನೂ ಕಾಣಬಹುದಾಗಿದೆ. ಉದಾಹರಣೆಗೆ: `ಇಂದಿನ ಜೀವನ ಕ್ಲಿಷ್ಟ ಎಂದರೇನು?~ (ಗೋಪಾಲಕೃಷ್ಣ ಅಡಿಗ), `ಕಮೀಟ್ಮೆಂಟ್ ಯಾರಿಗೆ? <br /> <br /> ಯಾವುದಕ್ಕೆ?~ (ನಿರಂಜನ), `ಸಾಹಿತ್ಯ - ತತ್ವಜ್ಞಾನ ತಾತ್ವಿಕ ನಿಲುವುಗಳು ಇತ್ಯಾದಿ~ (ಡಿ.ಆರ್. ನಾಗರಾಜ್), `ಅಲಕ್ಷ್ಯ ಮತ್ತು ಸಂಸ್ಕೃತಿ ಸ್ಥಿತಿ~ (ಕೆ.ಪಿ.ಪೂರ್ಣಚಂದ್ರ ತೇಜಸ್ವಿ), `ಕನ್ನಡ ಸಾಹಿತ್ಯದಲ್ಲಿ ಪ್ರಧಾನ ಮತ್ತು ಅಧೀನ ಸಂಸ್ಕೃತಿ~ (ಕೆ.ವಿ.ನಾರಾಯಣ), `ಜಾತಿಗಳೇ ಜೈಲಾಗದಿರಿ~ (ಬರಗೂರು ರಾಮಚಂದ್ರಪ್ಪ), `ಓದುವುದು ಎಂದರೆ~ (ರಾಜೇಂದ್ರ ಚೆನ್ನಿ) ಇತ್ಯಾದಿ.<br /> <br /> ಇಂತಹ ಬರಹಗಳು ಓದಿನ ಜವಾಬ್ದಾರಿಯನ್ನು ಕುರಿತು ನಿವೇದಿಸುತ್ತವೆ. ಇವುಗಳ ಸಮ್ಮುಖದಲ್ಲಿಯೇ ಕನ್ನಡದ ಸಂವಾದದ ಬಾಗಿಲುಗಳು ಈಗ ಮುಚ್ಚಿಹೋಗಿವೆ. <br /> <br /> ಯಾವುದೋ ಕೃತಿಯ ಬಗೆಗೆ ಚರ್ಚೆ ಆಗುತ್ತಿದೆ ಎಂದು ಅನಿಸುವ ಹೊತ್ತಿಗೆ, ಅಲ್ಲಿ ಲೇಖಕನನ್ನು ನಿಂದಿಸುವ, ಖಾಸಗಿ ವಿವರಗಳನ್ನು ಎತ್ತಾಡುವ ಕೆಟ್ಟ ಚಾಳಿ ಈಗ ಸಂಸ್ಕೃತಿ ಚಿಂತನೆಯ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗೆಯ ಚರ್ಚೆಗಳಲ್ಲಿ ಪಠ್ಯವೇ ನಾಪತ್ತೆ ಆಗಿರುತ್ತದೆ. ಬದಲಾಗಿ ಯಾವುದಾದರೊಂದು ಗುಂಪನ್ನು ಎತ್ತಿಕಟ್ಟುವ ಕೆಲಸ ಸಭೆ ಸೇರುವವರಿಂದ ನಡೆಯುತ್ತದೆ.<br /> <br /> ವಾದಗಳನ್ನು ಆಶಯಗಳನ್ನು ಮುಂದಕ್ಕೆ ಬಿಟ್ಟುಕೊಂಡು ಕೃತಿಗೆ ಅವಮಾನ ಮಾಡಲಾಗುತ್ತಿದೆ. ಲೇಖಕನ ಹಿನ್ನೆಲೆಯೇ ಕೃತಿಯ ಮೌಲ್ಯವನ್ನು ನಿರ್ಧರಿಸುವುದಕ್ಕೆ ಇರುವ ಏಕೈಕ ಮಾನದಂಡ. ಕನ್ನಡಕ್ಕೆ ಪ್ರಶಸ್ತಿ ಬಂದರೆ ವೈದಿಕರಲ್ಲದವರಿಗೆ ಬರಬೇಕು ಎಂದು ಹೇಳುವವರೇ ಸಂಸ್ಕೃತಿ ಚಿಂತಕರಾಗಿದ್ದಾರೆ. <br /> <br /> ಈ ನಡವಳಿಕೆಯಿಂದ ಏನನ್ನಾದರೂ ಕಲಿಯಲು ಸಾಧ್ಯವೇ? ಇವುಗಳನ್ನು ಮಾದರಿ ಎನ್ನಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದು ಹೊಸ ತಲೆಮಾರಿನ ಕೆಲವರಿಗಾದರೂ ಗೊತ್ತಾಗುತ್ತಿದೆ.<br /> <br /> ಈ ಕಷ್ಟ ಕಾಲದಲ್ಲಿ ನಮ್ಮನ್ನು ಕೈಹಿಡಿಯಬಲ್ಲಂತವು ಮತ್ತೆ ಕುವೆಂಪುನವರ ಬರಹಗಳೇ. ಲಂಕೇಶರಿಗೆ ಒಂದು ಕಡೆ ಕುವೆಂಪು ಅವರು ಹೇಳಿದ ಮಾತೊಂದು ಇಲ್ಲಿ ನೆನಪಾಗುತ್ತಿದೆ- `ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ~. ಈ ವಿವೇಕವೇ ನಮ್ಮ ನಾಳೆಗಳ ಕಾಯಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>