ಮಾತಾಡಿಕೊಳ್ಳುತ್ತಿದ್ದಾನೆ
ನೋಡುತ್ತ ಪುಟ್ಟ ಕಿಟಕಿಯಿಂದಾಚೆ ಅಗಾಧ ಆಕಾಶ
ಅಲ್ಲಿ ವಿಹರಿಸುತಿರುವ ದೇವಗನ್ನಿಕೆಯರ
ಹಾಗೆ ಕಾಣುತಿರುವ ಮೋಡಗಳ ಹೊರಗೆ
ಒಳಗೆ ಕಾಣುವ ದೃಶ್ಯ
ತೇಲಿಹೋಗುವ ಶವ
ಹೊಸ ಖಂಡಗಳಾವಿಷ್ಕರಿಸಿಕೊಂಡು ಸಾಗುತಿರುವ ನೌಕೆಯಂತೆ.
ಅಲ್ಲಿ ಕಾಯುತಿದೆ ಹೊಸದಾಗಿ ಇದಕಾಗಿಯೇ ತಯಾರಿಸಿರುವ
ನುಣುಪು ನುಣುಪು ಸುಂದರವಾಗಿ ಅದು
ನೋಯಿಸದೆ ಸಾಯಿಸಲು
ಊರ ನಾಶ ಮಾಡಿ ಹೊಳೆಯುತಿರುವ ಚತುಷ್ಪಥ ರಸ್ತೆಯಾಗಿ.
ಕೊನೆಯ ಅಗುಳನ್ನು ನಿತ್ಯ ಹಾಕುವಂತೆ ಅವುಗಳಿಗೆ ಹಾಕಿ ನಡೆಯುತ್ತಿದ್ದಾನೆ.
ಅವೋ ಸುಮ್ಮನಿವೆ ಅಸಹಜವಾಗಿ ಒಂದನೂ ಮೂಸದೆ.
ಒಂದೊಂದೇ ಹೆಜ್ಜೆ ಅದರತ್ತ.
ಸಂತರ, ದಾರ್ಶನಿಕರ, ಪ್ರವಾದಿಗಳ ನುಡಿ ಮೂಕಸಾಕ್ಷಿಯಾಗಿ ಅದುರುತ್ತಿವೆ.
ಈಗಾಗಲೇ ಎಷ್ಟೋ ಬಾರಿ ಸತ್ತು ಹೋಗಿ ಆಗಿದೆ.
ಮತ್ತೊಮ್ಮೆ ಸಭ್ಯವಾಗಿ ಕೊಲೆ.
ಕಣ್ಣ ತೂಬಿನಿಂದ ಕಾಣುತಿದೆ ಒಳಗೆ ದುಃಖದ ಜಲ
ಬತ್ತುತ್ತಾ ಮರುಭೂಮಿಯಾಗುತಿರುವುದು.
ನಡೆದಂತೆಲ್ಲಾ ಅದರತ್ತ ಅವರ ನುಡಿಗಳು ಒದ್ದೆಯಾಗುತಿವೆ.
ಸುಂದರವಾಗಿ ವಿನ್ಯಾಸ ಮಾಡಿರುವ ಅದರೊಳಗೆ
ನಾಗರೀಕವಾಗಿ
ನಾಗರೀಕರ ಬೇಡಿಕೆಗಾಗಿ
ಕೊಲೆಮಾಡಲಾಗುತ್ತಿದೆ
ಜೀವ ಹೋಗುವುದ ಖಾತ್ರಿ ಪಡಿಸಿಕೊಳ್ಳಲು ಕಾಯುತ್ತಿದ್ದಾರೆ.