ಗಮ್ಯ ಜೀವನವನ್ನು ಬಿಂಬಿಸುವ ಈ ಲಲಿತ ಪ್ರಬಂಧಗಳ ವಸ್ತು ವಿಷಯದಲ್ಲಿ ವೈವಿಧ್ಯವಿದೆ. ದಟ್ಟ ಅನುಭವದ ಜತೆಗೆ ಲೇಖಕರ ಸೂಕ್ಷ್ಮ ಒಳನೋಟಗಳು ಸೇರಿಕೊಂಡಿರುವುದರಿಂದ ಕೆಲವು ಕಡೆಗಳಲ್ಲಿ ವಿಶ್ಲೇಷಣಾತ್ಮಕ ಶೈಲಿಯನ್ನು ನೋಡಬಹುದು. ಎಲ್ಲರ ಬದುಕಿನ ಕನವರಿಕೆಯ ಭಾಗವಾಗಿರುವ, ಆಹ್ಲಾದ ಭಾವವನ್ನು ತುಂಬಿಕೊಡುವ ಬಾಲ್ಯದ ಸವಿರುಚಿಯನ್ನು ಲೇಖಕರು ಇಲ್ಲಿ ಉಣಬಡಿಸಿದ್ದಾರೆ. ಜೀರಂಡಗಿಯ ಮೇಲಿನ ಆಕರ್ಷಣೆ, ರೇಡಿಯೊದ ಬಗೆಗಿನ ವಿಸ್ಮಯ ಭಾವ, ಕರಡಿಯಾಟ, ಹಗಲುವೇಷಗಾರರ ಮೋಡಿ ಇವೆಲ್ಲದರ ಅನುಭವ ಓದುತ್ತಾ ಹೋದಂತೆ ಓದುಗರನ್ನು ಆವರಿಸಿಕೊಳ್ಳುತ್ತದೆ ಮತ್ತು ತಮ್ಮ ಬಾಲ್ಯದ ಅನುಭವಗಳನ್ನು ನೆನಪಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ರಾಯಚೂರು ಸುತ್ತಲ ಗ್ರಾಮೀಣ ಭಾಷೆಯ ಸೊಗಡಿನ ಸಂಭಾಷಣೆಗಳಿರುವ ಈ ಪ್ರಬಂಧಗಳಿಗೆ ದೇಸಿತನವಿದೆ.