ಪ್ರವಾಸಿ ತಾಣಗಳಲ್ಲಿ ಅಲ್ಲಿಯ ನಿವಾಸಿಗಳ ವರ್ತನೆ, ಸ್ನೇಹಪರತೆಯ ಬಗ್ಗೆ ವಿವರ ನೀಡುತ್ತಲೇ ಆ ಭಾವನೆಗಳಿಗೆ ತಕ್ಕಂತೆ ಕನ್ನಡ ಹಾಗೂ ಹಿಂದಿಯ ಗಾಯನಗಳನ್ನು ಪೋಣಿಸುತ್ತಲೇ ಹೋಗಿದ್ದಾರೆ ಇಟ್ನಾಳರು. ಜೈಪುರ, ಶಿಲ್ಪಗ್ರಾಮ, ಬಿಕಾನೇರ್, ಜೈಸಲ್ಮೇರ್, ಮೇವಾಡ, ಅಜ್ಮೇರ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಓದುಗರಿಗೆ ಭೆಟ್ಟಿ ಮಾಡಿಸುವ ಲೇಖಕರು ಬಹಳ ಲೋಕಾಭಿರಾಮವಾಗಿ ಆ ಸ್ಥಳ ಮಹತ್ವವನ್ನು ವಿವರಿಸುತ್ತಾರೆ. ವಾಜಪೇಯಿ ಸರ್ಕಾರ ಇದ್ದಾಗ ಆದ ಅಣುಬಾಂಬ್ ಪರೀಕ್ಷೆ ನಡೆದ ಪೋಖ್ರಾನ್ಗೆ ಭೇಟಿ ನೀಡಿ ಆ ಸ್ಥಳ ಹೇಗೆ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಿದೆ ಎಂಬುದನ್ನು ಭಾವುಕವಾಗಿ ವಿವರಿಸಿದ್ದಾರೆ. ಒಣ ವಿವರಣೆಗೆ ಜೋತುಬೀಳದೇ ಕಾವ್ಯ, ಲಾಲಿತ್ಯವನ್ನು ಪ್ರವಾಸ ಕಥನದಲ್ಲಿ ಬೆರೆಸಿದ್ದರಿಂದ ಇದು ವಿಭಿನ್ನ ಕೃತಿಯಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ.