ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಸೀಲಿಯನ್ಸ್: ದೃಶ್ಯಮೇಳದ ವಿಸ್ಮಯಲೋಕ...

Last Updated 11 ಜೂನ್ 2022, 19:31 IST
ಅಕ್ಷರ ಗಾತ್ರ

ಕಲಾವಿಮರ್ಶಕ ಹಾಗೂ ಕಲಾವಿದ ಚಿ.ಸು.ಕೃಷ್ಣಸೆಟ್ಟಿ ಅವರ ‘ಕೃಷ್ಣಸೆಟ್ಟಿ ಫೌಂಡೇಷನ್’ ಆಯೋಜಿಸಿರುವ ‘ರಿಸೀಲಿಯನ್ಸ್’ (ಸ್ಥಿತಿಸ್ಥಾಪಕತ್ವ) ಶೀರ್ಷಿಕೆಯಡಿಯಲ್ಲಿ ಐವತ್ತೇಳು ಕಲಾವಿದರ ಚಿತ್ರಕಲಾ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಏಳು ಗ್ಯಾಲರಿಗಳಲ್ಲಿ ಜೂನ್ 4 ರಿಂದ 12ರವರೆಗೆ ನಡೆಯುತ್ತಿದೆ.

ಹಲವು ಹಿರಿಕಿರಿ ಕಲಾವಿದರ ಕೃತಿಗಳು ಇಲ್ಲಿವೆ. ಕೋವಿಡ್ ನಂತರ ಬಹುದೊಡ್ಡ ಪ್ರಮಾಣದ ಕಲಾಪ್ರದರ್ಶನವಿದು. ಈ ಕಲಾವಿದರು ತಮ್ಮ ಅಸ್ತಿತ್ವವನ್ನು ಪುನಃ ಪ್ರತಿಷ್ಠಾಪನಗೊಳಿಸಲೆಂದೇ ಹುರಿಗೊಂಡು ಸಿದ್ಧರಾಗಿರುವರು. ಹಾಗೇ ಕಲಾಸಕ್ತರಿಗೆ ಕಲೆಯ ರಸಾನುಭವ ಪಡೆಯಲು ಅಭಿವ್ಯಕ್ತಿಯ ಬಹುರೂಪಗಳನ್ನು ಇಲ್ಲಿ ತೂಗು ಹಾಕಲಾಗಿದೆ. ಈ ಪ್ರದರ್ಶನಕ್ಕೆಂದೇ ರಚಿಸಿದ ಹೊಸಕೃತಿಗಳು ಒಂದು ವಿಸ್ಮಯ ಲೋಕವನ್ನೇ ತೆರೆದಿಟ್ಟಿವೆ.

ಸಂಕೀರ್ಣ ಬದುಕಿನ ಜೀವ ಪ್ರಪಂಚದ ಬಗೆಬಗೆಯ ಹೊರಳು ನೋಟಗಳ ರೂಪಗಳು ಬಸವರಾಜಾಚಾರ್ ಕೆ.ಆರ್. ಅವರ ಉಡ್ ಕಟ್‌ನ ‘ಜರ್ನಿ-3’ ಕೃತಿಯಲ್ಲಿವೆ. ಮನುಷ್ಯ ಸಂಬಂಧ ಬಹು ಸಂಕೀರ್ಣ. ಬಸವರಾಜಾಚಾರ್ ಅದನ್ನು ಜಾನಪದೀಯ ಕಲಾ ಸಂಕೇತಗಳ ರೂಪಕಗಳ ಮೂಲಕ ಹೇಳುವ ಯತ್ನವನ್ನು ಕೃತಿಯಲ್ಲಿ ಮಾಡಿರುವರು. ಅತ್ರಿ ಚೇತನ್ ಅವರ ಉಡ್ ಕಟ್‌ನ ‘ಲೇಯಿಂಗ್ ಟುಗೆದರ್-2’ನಲ್ಲಿ ಕತ್ತಲಿನ ಹಿನ್ನೆಲೆಯ ಬೆಳಕಲ್ಲಿ ಕಾಣುತ್ತವೆ ಸೈಕಲ್ ಗಾಲಿಗಳು. ಅದರ ಹಿಂಬದಿ ರೂಪವು ಚೆಲುವು ಪಡೆದಿದೆ. ಒಂದು ಕಾಲದಲ್ಲಿ ಸೈಕಲ್‌ಗಳು ಬದುಕಿನ ಭಾಗವಾಗಿದ್ದವು. ನಾಸ್ಟಾಲ್ಜಿಕ್ ಸ್ಮೃತಿಯ ಛಾಯೆಯಲ್ಲಿರುವ ಒಂದಕ್ಕೊಂದು ಒರಗಿದ ಸೈಕಲ್‌ನ ಚಕ್ರಗಳು ಸ್ಥಾವರಗೊಂಡಿದ್ದರೂ ಒಂದು ಚಲನಶೀಲ ಬದುಕನ್ನು ಅವು ಕಟ್ಟಿಕೊಡುತ್ತವೆ.

ಎಸ್.ಎ.ವಿಮಲನಾಥನ್ ಅವರು ಅಕ್ರಿಲಿಕ್‌ನಲ್ಲಿ ರಚಿಸಿದ ಕೃತಿ ‘ಸಿಟಿ’ ಗಮನ ಸೆಳೆಯುತ್ತದೆ. ಶಹರ ಬದುಕಿನ ಸಂಕೀರ್ಣತೆಗಳು ಮೇಲ್ನೋಟದಲ್ಲಿ ಸೆಳೆದರೂ ಅದರಾಳದಲ್ಲಿ ಹುದುಗಿದ ಅಂತರಾಳವು ಗಾಢವರ್ಣಗಳಲ್ಲಿಯ ಥಳುಕು ಬಳುಕನ್ನು ಹೇಳುತ್ತದೆ.

ಕರಿಯಪ್ಪ ಹಂಚಿನಮನಿಯವರ ಅಕ್ರಿಲಿಕ್‌ನಲ್ಲಿ ರಚಿಸಿದ ಬೃಹತ್ ಕೃತಿ-ಅದರ ಬಣ್ಣಗಳ ಹೊಯ್ದಾಟದಲ್ಲಿ ವ್ಯಕ್ತಗೊಳ್ಳುವ ಚಿತ್ರವಿನ್ಯಾಸಗಳ ರೂಪ ಮೈವಳಿಕೆಯಲ್ಲಿ ತೋರುವ ತೆಳು ಮತ್ತು ದಟ್ಟಬಣ್ಣಗಳ ತೀವ್ರ ಕುಂಚದ ಬಳಕೆ ಕಲಾಕೃತಿಯನ್ನು ಒಂದು ಶ್ರೇಷ್ಠತ್ವದ ಹಂತಕ್ಕೆ ಕೊಂಡೊಯ್ಯುತ್ತದೆ. ಗೆರೆಗಳಲ್ಲಿ ಮೂಡಿದ ನಗ್ನ ಅಮೂರ್ತ ಚಿತ್ರಗಳು ಕಾಮದ ಹಸಿವು ನೀಗಿದ ಬಳಿಕದ ದಣಿವನ್ನು ಹೇಳುವುದಷ್ಟೇ ಅಲ್ಲ, ಒರಗುವಿಕೆಯಲ್ಲಿ ತನುಮನಗಳ ಆಹ್ಲಾದದಾಯಕ ಅನುಭೂತಿಯನ್ನು ದಕ್ಕಿಸುವಂತೆ ಮಾಡುತ್ತವೆ.

ಎಂ.ನಾರಾಯಣ್ ಅವರ ‘ಪೋಲೊ’ ಬೃಹತ್ ಕಲಾಕೃತಿ. ಮುಖ್ಯವಾಗಿ ಕ್ಯಾನ್‌ವಾಸ್ ಮೇಲೆ ಕಲಾವಿದನ ಕುಂಚದ ಗತಿಯ ಜೋರು ಹೊಡೆತಗಳು ಅಭಿವ್ಯಕ್ತಿಯ ಮೌಲ್ಯವನ್ನು ವೃದ್ಧಿಸಿವೆ. ಹತ್ತಿರದಲ್ಲಿ ನೋಡಿದಾಗಿನ ಒಂದು ಫಾರ್ಮ್‌ನ ತಂತ್ರ ದೂರದಿಂದ ಕಾಣುವ ನೋಟದಲ್ಲಿ ಕುದುರೆಗಳ ಓಟದ ಅಶ್ವಶಕ್ತಿ, ಠೇಂಕಾರಗಳ ನೆಗೆತ-ಅಬ್ಬಾ ಎಂಬ ಉದ್ಗಾರ ಹೊರಡಿಸುತ್ತದೆ.

ಗಣೇಶ ಧಾರೇಶ್ವರ ಅವರ ವಿಭಿನ್ನ ಕೃತಿ ‘ಜನರೇಷನ್ಸ್, ಟೈಮ್ ಅಂಡ್ ಪರ್ಸೆಪ್ಷನ್ಸ್‌’ ಶೀರ್ಷಿಕೆಯಲ್ಲಿದೆ. ಇದು ರಚನಾ ಶೈಲಿಯಿಂದ ತೀವ್ರಗಮನ ಸೆಳೆಯುತ್ತದೆ. ಅಕ್ರಿಲಿಕ್ ಬಣ್ಣ ಪ್ರಧಾನವಾಗಿ ಫ್ಯಾಬ್ರಿಕ್ ವಿವಿಧ ವಸ್ತುಗಳನ್ನು ಮೈವಳಿಕೆಯ ಮೇಲೆ ಬಳಸಿದ್ದಾರೆ. ಜೀನ್ಸ್‌ ಪ್ಯಾಂಟ್, ಜಾಕೆಟ್, ಅಂಗಿಯ ಬಿಳಿತೋಳು, ಪ್ಯಾಂಟಿನ ಜೇಬು, ಅದರಲ್ಲಿ ಮೊಬೈಲು-ಹೀಗೆ ಕಲಾವಿದ ಇಂದಿನ ಪೀಳಿಗೆಯ ಒಳನೋಟಗಳನ್ನು ಅಭಿವ್ಯಕ್ತಿಸುತ್ತಾನೆ.

ಅಕ್ರಿಲಿಕ್‌ನಲ್ಲಿ ಒಡಮೂಡಿದ ಹುಮೇರಾ ಅಲಿಯವರ ‘ಹಾರ್ಮನಿ’ ತೆಳುವಾದ ಬಣ್ಣಗಳ ಸಾಂಗತ್ಯ, ನಿಸರ್ಗದಲ್ಲಿ ಒಡಮೂಡುವ ಲಾಲಿತ್ಯದ ರೂಪಗಳು ಏಕತೆಯ ಧ್ವನಿಗಳಾಗಿವೆ. ಇದೇ ಸ್ವರೂಪದ ಶಿವಕುಮಾರ ಕೆಸರಮಡು ಅವರ ಕೃತಿ ಕಡಿಮೆ ಬಣ್ಣಗಳಲ್ಲಿ ತೆಳು ಮತ್ತು ದಟ್ಟೈಸುವಿಕೆಯ ರಚನಾತಂತ್ರದಿಂದ ಅಲೌಕಿಕ ರೂಪವನ್ನು ಸೃಷ್ಟಿಸಿದೆ.

ವಿನೋದಕುಮಾರ್‌ ಅವರ ‘ಎಕ್ಸ್‌ಫ್ಲೋರ್‌-2’ ಅಕ್ರಿಲಿಕ್ ಮಾಧ್ಯಮದ ರಚನೆ. ಸೂಕ್ಷ್ಮ ಜೀವರೂಪಗಳಲ್ಲಿ ಸೃಷ್ಟಿಯ ಸ್ಥಿತಿಸ್ಥಾಪಕತ್ವವನ್ನು ಸಾರುತ್ತ ಸೃಷ್ಟಿ, ಲಯ, ಮೋಕ್ಷದೆಡೆಗಿನ ಅನುಭೂತಿಯ ಭಾವವು ಉಂಟಾಗುತ್ತದೆ. ವಿಜಯ ನಾಗವೇಕರ ಅವರ ‘ಲಿಲಿ’ ಕೃತಿ ನೀರಲ್ಲಿ ತೇಲುವ ಕಮಲದ ಹೂವಿನ ಚಿತ್ರವು ಒಂದು ಪ್ರಭಾವಳಿ ಹೊಂದಿದ್ದು, ಇದ್ದೂ ಇಲ್ಲದ ಭಾವನೆಯನ್ನು ಹೊರಹೊಮ್ಮಿಸುತ್ತದೆ.

ಜೆ.ಎಂ.ಎಸ್.ಮಣಿ, ಗುರುದಾಸ ಶೆಣೈ, ಡಿಂಪಲ್ ಶಹಾ, ಪರಮೇಶ ಜೋಳದ, ಸುಬ್ರಮಣಿ ಗೋಪಾಲಸಾಮಿ, ಮಂಜುನಾಥ ಕಲ್ಲೇದೇವರು, ಲಕ್ಷ್ಮೀ ಮೈಸೂರು, ಜಯಂತ ಹುಬ್ಳಿ, ಬಿ.ಎಸ್.ದೇಸಾಯಿ, ಕಂದನ್ ಜಿ., ಸುರೇಶ ಕೆಂಪೇಗೌಡ ಮೊದಲಾದವರ ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಗಣೇಶ ಧಾರೇಶ್ವರ ಅವರ ವಿಭಿನ್ನ ಕೃತಿ ‘ಜನರೇಷನ್ಸ್, ಟೈಮ್ ಅಂಡ್ ಪರ್ಸೆಪ್ಷನ್ಸ್‌’
ಗಣೇಶ ಧಾರೇಶ್ವರ ಅವರ ವಿಭಿನ್ನ ಕೃತಿ ‘ಜನರೇಷನ್ಸ್, ಟೈಮ್ ಅಂಡ್ ಪರ್ಸೆಪ್ಷನ್ಸ್‌’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT