ಕುಂದಾಪುರ: ಹಲವು ವರ್ಷಗಳಿಂದ ಮಂಗಳೂರು, ಬೆಂಗಳೂರು ಸೇರಿದಂತೆ ನಾಡಿನ ಹಲವು ಕಡೆಗಳಲ್ಲಿ ಯಶಸ್ವಿ ಯೋಜನೆ ರೂಪಿಸಿರುವ ಬ್ಯಾರೀಸ್ ಗ್ರೂಪ್ ಕಂಪನಿಯಿಂದ ಕುಂದಾಪುರ ಸಮೀಪದ ಕೋಟೇಶ್ವರದ ಪ್ರಕೃತಿ ಮಡಿಲಲ್ಲಿ ನಿರ್ಮಾಣಗೊಂಡಿರುವ ’ಬ್ಯಾರೀಸ್ ಗ್ರೀನ್ ಆವಿನ್ಯೂ’ ವಸತಿ ಸಂಕೀರ್ಣದ ಕಟ್ಟಡವನ್ನು ಭಾನುವಾರ ಉದ್ಘಾಟನೆ ಮಾಡಲಾಗುವುದು ಎಂದು ಬ್ಯಾರೀಸ್ ಗ್ರೂಪ್ನ ಮುಖ್ಯಸ್ಥ ಸೈಯದ್ ಮಹಮ್ಮದ್ ಬ್ಯಾರಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಡಿನ ಬೇರೆ ಬೇರೆ ಕಡೆಗಳಲ್ಲಿ ವಾಣಿಜ್ಯ ಕಟ್ಟಡ, ಶಾಲಾ–ಕಾಲೇಜು ಸೇರಿದಂತೆ ಹಲವು ಯೋಜನೆ ಯಶಸ್ವಿಯಾಗಿ ನಿರ್ವಹಿಸುತ್ತಿರುವ ನಮ್ಮ ಕಂಪನಿ ಕೇವಲ ಹಣ ಮಾಡಬೇಕು ಎನ್ನುವ ಉದ್ದೇಶ ಮಾತ್ರ ಕೇಂದ್ರಕರಿಸಿಲ್ಲ. ಉದ್ಯಮದ ಜತೆ ಪರಿಸರ ಹಾಗೂ ಸಮಾಜ ಉಳಿಸಿ–ಬೆಳೆಸುವ ಕಾಳಜಿ ಇರಿಸಿಕೊಂಡಿದ್ದೇವೆ. ಬೇರೆ ಬೇರೆ ಮಹಾನಗರಗಳಲ್ಲಿ ಯೋಜನೆ ಪೂರೈಸಿದ್ದ ನಮಗೆ ಹುಟ್ಟೂರಿನಲ್ಲಿ ಒಂದು ಮಹತ್ವಾಕಾಂಕ್ಷೆ ಯೋಜನೆ ನೀಡಬೇಕು ಎನ್ನುವ ಗುರಿಯೊಂದಿಗೆ ಕೋಟೇಶ್ವರದಲ್ಲಿ ನಮ್ಮ ಪೂರ್ವಿಕರ ಜಾಗದಲ್ಲಿ ಸಮಾಜಕ್ಕೆ ಒಳಿತಾಗುವ ಹಸಿರುಮಯ ವಾತಾವರಣದಲ್ಲಿ ’ಬ್ಯಾರೀಸ್ ಗ್ರೀನ್ ಆವಿನ್ಯೂ’ ಕಟ್ಟಡ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಬೃಹತ್ ಕಟ್ಟಡಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪರಿಸರ ನಾಶ ಮಾಡುವ ಪ್ರಸ್ತುತ ಕಾಲಘಟ್ಟದಲ್ಲಿ ಇರುವ ಪ್ರಕೃತಿ ಸೊಬಗನ್ನು ಉಳಿಸಿಕೊಂಡು ಹಸಿರನ್ನು ಹೆಚ್ಚಿಸುವ ಉದ್ದೇಶವನ್ನು ಕಾರ್ಯಗತಗೊಳಿಸಿದ್ದೇವೆ. ಇಲ್ಲಿನ ನಿಲಯವಾಸಿಗಳಿಗೆ ಅನುಕ್ಷಣವೂ ಒಳ್ಳೆಯ ಗಾಳಿ–ಬೆಳಕು ದೊರಕಬೇಕು ಎನ್ನುವ ಧ್ಯೇಯ ಅಳವಡಿಸಿಕೊಂಡಿದ್ದೇವೆ. ಪಾರ್ಕಿಂಗ್ ತಾಣದಿಂದಲೇ ದಿನದ ಆರಂಭ ಆರಂಭಿಸುವ ಪ್ರತಿಯೊಬ್ಬರಿಗೂ ಹಸಿರುವ ದರ್ಶನ ದಿನದ ಮೊದಲ ಕ್ಷಣ ಆರಂಭವಾಗುತ್ತದೆ ಎಂದರು.
’ಎಲ್’ ಇಂಗ್ಲೀಷ್ ಅಕ್ಷರ ಮಾದರಿಯ ಕಟ್ಟಡದಲ್ಲಿ ವಿಜ್ಞಾನದ ಸದ್ಭಳಿಕೆಯೊಂದಿಗೆ ವಾಸ್ತುವಿಗೂ ಪ್ರಾಶಸ್ತ್ಯ ನೀಡಲಾಗಿದೆ. ಕಟ್ಟಡದ ವಾಸಿಗಳಲ್ಲಿ ಎಲ್ಲ ಧರ್ಮದ, ಎಲ್ಲಾ ಭಾಷೆಯ ಹಾಗೂ ಬೇರೆ ಬೇರೆ ಪ್ರದೇಶದ ಜನರಿರುವುದರಿಂದಾಗಿ ಇದನ್ನು ’ಮಿನಿ ಭಾರತ’ ವನ್ನಾಗಿಸುವ ಪ್ರಯತ್ನ ಮಾಡಲಾಗಿದೆ.
ಭಾನುವಾರ ಬೆಳಿಗ್ಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ’ಬ್ಯಾರೀಸ್ ಗ್ರೀನ್ ಆವಿನ್ಯೂ’ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ. ಸೈಯ್ಯದ್ ಮೊಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉದ್ಯಮಿಗಳಾದ ಆನಂದ ಸಿ.ಕುಂದರ್, ಪ್ರಕಾಶ್ ಟಿ.ಸೋನ್ಸ್ ಹಾಗೂ ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಬಿಲ್ಲವ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ ಅಧ್ಯಕ್ಷ ಎಎಸ್ಎನ್ ಹೆಬ್ಬಾರ್, ಬ್ಯಾರೀಸ್ ಗ್ರೂಪ್ನ ಈಶ್ವರನ್, ಸಿದ್ದಿಕ್ ಬ್ಯಾರಿ, ಸುಲೇಮನ್ ಸಾಹೇಬ್, ರಮೇಶ್ ಸುತಾರ್ ಹಾಗೂ ಇಂಜಿನಿಯರ್ ಇಕ್ಬಾಲ್ ಇದ್ದರು.
ಬೆಳಕಿನ ವ್ಯವಸ್ಥೆಗೆ ಸೋಲಾರ್: ಸೈಯದ್ ಮಹಮ್ಮದ್ ಬ್ಯಾರಿ
ಬೆಳಕಿನ ವ್ಯವಸ್ಥೆಗೆ ಸೋಲಾರ್ ಹಾಗೂ ಎಲ್ಇಡಿ ಬಲ್ಬ್ಗಳನ್ನು ಬಳಕೆ ಮಾಡುವ ಮೂಲಕ ಗ್ರಾಹಕರಿಗೆ ವಿದ್ಯುತ್ ಹೊರೆ ಕಡಿಮೆ ಮಾಡುವ ಹಾಗೂ ಸರ್ಕಾರಕ್ಕೂ ವಿದ್ಯುತ್ ವ್ಯಯವನ್ನು ಕಡಿಮೆ ಮಾಡುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಬಳಕೆಯಾಗುವ ನೀರನ್ನು ಎಸ್ಟಿಪಿ ತಂತ್ರಜ್ಞಾನದ ಮೂಲಕ ಪುನರ್ ಬಳಕೆ ಮಾಡುವ ವ್ಯವಸ್ಥೆ ಮಾಡಿರುವುದರಿಂದ ಇಲ್ಲಿ ನೀರಿನ ಒಟ್ಟಾರೆ ವ್ಯಯ ಶೂನ್ಯಗೊಳಿಸಲಾಗಿದೆ. ಇಂಗು ಬಾವಿಗಳ ಮೂಲಕ ಮಳೆಗಾಲದ ನೀರನ್ನು ಉಳಿಸಿಕೊಳ್ಳುವ ಮೂಲಕ ನೀರಿನ ಸಮಸ್ಯೆ ಬರದಂತೆ ಯೋಜನೆ ರೂಪಿಸಲಾಗಿದೆ. 7 ಅಂತಸ್ತಿನ ಕಟ್ಟಡದಲ್ಲಿ 63 ಸುಸಜ್ಜಿತ ಪ್ಲಾಟ್ಗಳಿದ್ದು, ವ್ಯಾಯಾಮ, ಸಭೆ, ವಾಕಿಂಗ್, ಮಕ್ಕಳ ಆಟಕ್ಕೆ, ಹಿರಿಯರ ಓಡಾಟ ಹಾಗೂ ವಿಶ್ರಾಂತಿಗೆ ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ ಎಂದು ಯಾರೀಸ್ ಗ್ರೂಪ್ನ ಮುಖ್ಯಸ್ಥ ಸೈಯದ್ ಮಹಮ್ಮದ್ ಬ್ಯಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.