ಕೋಲಾರ: ‘ಶಾಸಕ ವರ್ತೂರು ಪ್ರಕಾಶ್ ದುರಾಡಳಿತದಿಂದ ಬೇಸತ್ತು ರಾಜಕೀಯ ಬದಲಾವಣೆ ಬಯಸಿರುವ ಕ್ಷೇತ್ರದ ಜನ ಜೆಡಿಯು ಅಭ್ಯರ್ಥಿ ಸುಧಾಕರ್ಗೌಡ ಅವರನ್ನು ಬೆಂಬಲಿಸಬೇಕು’ ಎಂದು ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ಮನವಿ ಮಾಡಿದರು.
ನಗರದ ರಹಮತ್ ನಗರದಲ್ಲಿ ಸುಧಾಕರ್ಗೌಡ ಪರ ಗುರುವಾರ ಪ್ರಚಾರ ನಡೆಸಿ ಮಾತನಾಡಿ, ‘ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವರ್ತೂರು ಪ್ರಕಾಶ್ ನಗರ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
‘ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಜನ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಸಮಸ್ಯೆ ಬಗೆಹರಿಸಲು ಶಾಸಕರಿಗೆ 10 ವರ್ಷದ ಅಧಿಕಾರಾವಧಿ ಸಾಕಾಗಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿಯ ಜಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ವರ್ತೂರು ಪ್ರಕಾಶ್ ಅವರಿಗಿಂತ ಮೊದಲು ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾಗಿದ್ದ ಶ್ರೀನಿವಾಸಗೌಡ ಸಹ ಕ್ಷೇತ್ರಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ. ಅವರು ಸಭೆ ಸಮಾರಂಭಗಳಲ್ಲಿ ವೇದಿಕೆ ಮೇಲೆ ನಿಂತು ಉದ್ದುದ್ದ ಭಾಷಣ ಮಾಡುವುದಕ್ಕಷ್ಟೇ ಸೀಮಿತರಾಗಿದ್ದಾರೆ. ಜನ ಅವರ ಭಾಷಣ ಕೇಳಿ ಮರುಳಾಗಬಾರದು’ ಎಂದರು.
ಕಾಲ ಕೂಡಿ ಬಂದಿದೆ: ‘ಪಕ್ಷಕ್ಕೆ ಸೈದ್ಧಾಂತಿಕ ನೆಲೆಯಿದೆ. ಕ್ಷೇತ್ರದಲ್ಲಿ ಆಗಿರುವ ದೌರ್ಜನ್ಯ, ದಬ್ಬಾಳಿಕೆ ತಡೆಯಲು ಸಮರ್ಥ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ಮತದಾರರ ಜವಾಬ್ದಾರಿ. ಆ ಜವಾಬ್ದಾರಿಯ ನಿರ್ವಹಣೆಗೆ ಈಗ ಕಾಲ ಕೂಡಿ ಬಂದಿದೆ. ಜನರ ಯೋಚಿಸಿ ಮತ ಚಲಾಯಿಸಬೇಕು’ ಎಂದು ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಹೇಳಿದರು.
ತಾಲ್ಲೂಕಿನ ಮೂರಾಂಡಹಳ್ಳಿ, ಕಳ್ಳೀಪುರ, ಹಸಾಳ, ವಕ್ಕಲೇರಿ, ನಗರದ ವೀರಾಂಜನೇಯ ನಗರ, ರಹಮತ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಯಿತು. ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮು, ಎಪಿಎಂಸಿ ಮಾಜಿ ನಿರ್ದೇಶಕ
ಈರಣ್ಣ, ಶಿವಕುಮಾರ್ಗೌಡ ಇದ್ದರು.