ಬೆಂಗಳೂರು: ನಿತಿನ್ ತಿಮ್ಮಯ್ಯ ಅವರ ಅಮೋಘ ಆಟದ ಬಲದಿಂದ ಬೆಂಗಳೂರಿನ ಕೊಡವ ಸಮಾಜ ತಂಡ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ 21ನೇ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.
ಶಾಂತಿನಗರದ ಸಮೀಪವಿರುವ ಕಾರ್ಯಪ್ಪ ಹಾಕಿ ಅರೆನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೊಡವ ಸಮಾಜ ತಂಡ 5–1 ಗೋಲುಗಳಿಂದ ಎಎಸ್ಸಿ ಬಾಯ್ಸ್ ತಂಡವನ್ನು ಸೋಲಿಸಿತು.
ವಿಜಯಿ ತಂಡದ ನಿತಿನ್ ತಿಮ್ಮಯ್ಯ 16, 28 ಮತ್ತು 45ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಪಿ.ಎಸ್.ಚೆಂಗಪ್ಪ (39) ಮತ್ತು ವಿ.ಎಸ್.ವಿನಯ (70ನೇ ನಿ.) ತಲಾ ಒಂದು ಗೋಲು ಗಳಿಸಿ ಜಯದ ಅಂತರ ಹೆಚ್ಚಿಸಿದರು.
ಎಎಸ್ಸಿ ತಂಡದ ಸಿರಿಲ್ ಲುಗನ್ 61ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.
ಎಂಇಜಿಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಎಂಇಜಿ ತಂಡ ಜಯದ ತೋರಣ ಕಟ್ಟಿತು.
ಎಂಇಜಿ 1–0 ಗೋಲಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಂಡವನ್ನು ಮಣಿಸಿತು.
ಸುರಾಸ್ ಸಿಂಗ್ 39ನೇ ನಿಮಿಷದಲ್ಲಿ ಗೆಲುವಿನ ಗೋಲು ಹೊಡೆದರು.