ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆ ಟಿವಿ ವಾಹಿನಿಗಳನ್ನು ಒಟ್ಟಾಗಿಸಿ ಇತ್ತಿಚೆಗೆ ಸಂಸದ್ ಟಿವಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಂಸದ್ ಚಾನೆಲ್ನಲ್ಲಿ ಖ್ಯಾತ ಸರೋದ್ ವಾದಕಉಸ್ತಾದ್ಅಮ್ಜದ್ ಅಲಿ ಖಾನ್ ಅವರ ಸಂದರ್ಶನ ನಡೆಯಿತು.
ಸಂದರ್ಶನವನ್ನು ಸಂಸದ ಶಶಿ ತರೂರ್ ಅವರು ನಡೆಸಿ ಕೊಟ್ಟರು. ಅಮ್ಜದ್ ಅಲಿ ಖಾನ್ ಅವರು ತಮ್ಮ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಈ ವೇಳೆ ಹಂಚಿಕೊಂಡರು.
‘ನನ್ನ ಮೊದಲ ಪ್ರೀತಿ ತಬಲಾ ಆಗಿತ್ತೆ ಹೊರತು, ಸರೋದ್ ಆಗಿರಲಿಲ್ಲ. ತಬಲಾದಿಂದ ದೂರ ಮಾಡಲು ನನ್ನ ತಂದೆ ತಬಲಾ ಮುಚ್ಚಿಡುತ್ತಿದ್ದರು. ಆದರೆ, ಸಂಗೀತದ ರಿದಂ ಅರಿತುಕೊಳ್ಳಲು ತಬಲಾ ಬೇಕೆ ಬೇಕು‘ ಎಂದು ಅಮ್ಜದ್ ಅಲಿ ಖಾನ್ ಹೇಳಿದರು.
‘ಧ್ವನಿಯ ಮತ್ತು ಭಾಷೆಯ ಪ್ರಪಂಚದಲ್ಲಿ ನಾವಿದ್ದೇವೆ. ಆದರೆ, ಬಹುತೇಕರು ಭಾಷೆಯ ಪ್ರಪಂಚದಲ್ಲಿದ್ದಾರೆ. ದೇವರಿಗೆ ಧನ್ಯವಾದಗಳು, ನಾನು ಧ್ವನಿಯ ಪ್ರಪಂಚದಲ್ಲಿದ್ದೇನೆ‘ ಎಂದರು.
‘ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಎಲ್ಲವನ್ನೂ ಸಾಧಿಸುವುದಿಲ್ಲ ಮತ್ತು ಅವರು ಬಯಸಿದ್ದನ್ನು ಪಡೆಯುವುದಿಲ್ಲ‘ ಎಂದು ಖಾನ್ ಹೇಳಿದರು.
1945 ರಲ್ಲಿ ಜನಿಸಿರುವ ಅಮ್ಜದ್ ಅಲಿ ಖಾನ್ ಅವರು ಅಂತರರಾಷ್ಟ್ರೀಯ ಸರೋದ್ ವಾದಕರು. ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ 2001 ರಲ್ಲಿ ದೊರಕಿದೆ.
ಸಂಸದ್ ಟಿವಿ ಕಲೆ, ಸಂಗೀತ ಸೇರಿದಂತೆ ಮುಂತಾದ ಕ್ಷೇತ್ರದ ಗಣ್ಯರ, ರಾಜಕೀಯ ನಾಯಕರ ಹಾಗೂ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಆರಂಭಿಸಿದ್ದು ಗಮನ ಸೆಳೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.