ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ: ವ್ಯೂಹ

Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಎಷ್ಟೊಂದು ಹೆಜ್ಜೆಗಳ ಪ್ರದಕ್ಷಿಣೆಯಿದೆ
ತಿಳಿಗೆಂಪು ಗುಲಾಬಿಯೇ ಮೈಯಾದ
ಒಲವೆಂಬ ಆ ವ್ಯೂಹದ ಹೊರಗೆ!
ಸುತ್ತುತ್ತಲೇ ಇದೆ ತನ್ನೊಳಗೆ ತಾನೇ
ಜಗದ ಕಣ್ಣಿಗೆ ನಿಶ್ಚಲವಾಗಿರುವ ಬಗೆ
ಬೇರೆಯಾಗುವ ದಾರಿ ತೋರದೆ
ತನ್ನದೇ ಬಂಧದೊಳಗೆ ತನ್ನಂತೆ ತಾನೇ..

ಪ್ರಶ್ನೆಯೊಂದನು ಹೊದ್ದು
ಆಗಾಗ ಕೇಳುವವು
ಅಲ್ಲಿ ಹೊಸ ಹೆಜ್ಜೆ ಸದ್ದು

ಕಾಲದ ಗೋಜಿಲ್ಲದ ಹೆಜ್ಜೆಗಳು
ತಮ್ಮದೇ ಗಡಿಬಿಡಿಯಲ್ಲಿ ಬಿಡುವಾದಾಗ
ಇದೇ ಈ ವ್ಯೂಹದ ಸುತ್ತ ಒಂದಷ್ಟು ಹೊತ್ತು
ನಡೆಯುತ್ತವೆ ವಿರಾಮದ ನಡಿಗೆ.

ಸುತ್ತುವಾಗೊಮ್ಮೆ
ಬೆಚ್ಚಿ ಬೆರಗಾಗಿ,ಮೋಹಕ್ಕೆ ಬಲಿಯಾಗಿ
ಹೊಕ್ಕುವ ಬಯಕೆ ಅತಿಯಾಗಿ ಕಳ್ಳಕಿಂಡಿ
ಕಂಡೇ ಬಿಟ್ಟಿತೆನುವಾಗ ಹೆಜ್ಜೆಗಳ ಬಿಡುವು
ಮುಗಿದು, ತನ್ನ ಕೇಂದ್ರವ ನೆನೆದು
ತಮ್ಮ ಅಕ್ಷದತ್ತ ಸರಿಯುತ್ತವೆ ಸಣ್ಣ
ತಪ್ಪಿತಸ್ಥ ಭಾವದೊಂದಿಗೆ.

ತೋರಿಕೆಯ ಠೀವಿಯಲಿ ಸುತ್ತುತ್ತಲೇ
ಇದೆ ಇತ್ತ ಈ ವ್ಯೂಹ
ಸದ್ದಿಲ್ಲದ ಒಂದು ನಿಟ್ಟುಸಿರಿನೊಂದಿಗೆ
ಆಗಾಗ ಹೊಸ ಬಂಧ ರಚಿಸಿ,
ತುಸು ನಿಧಾನಿಸಿ,ಒಮ್ಮೆ ವೇಗ ಹೆಚ್ಚಿಸಿ
ಕಂಡೇಬಿಡಲಿ ಕಾಣದವರಿಗೂ ಎಂಬಂತೆ
ಒಂದು ರಹಸ್ಯ ರಾಜಮಾರ್ಗ ನಿರ್ಮಿಸಿ...

ಎಂದೋ ಒಳಬಂದ
ಎರಡು ಹೆಜ್ಜೆಗಳೂ
ಹಾದಿ ಕಂಡದ್ದಕ್ಕೆ ಓಡಿಹೋದವು ಆಚೆ.

ಬಿಡುವಿರದ ಅದೇ ನಡಿಗೆಗಳು
ಮೋಹದಲಿ ಮತ್ತೆಮತ್ತೆ ಇತ್ತ ಬಂದು
ರಾಜಮಾರ್ಗವ ಕಂಡು
ಎಂದಿನಂತೆ ನವುರು ನಡುಗಿ ಒಳನಡೆದು
ಒಂದು ಹೆಜ್ಜೆ‌..ಒಂದೇ ಹೆಜ್ಜೆ..
ಹಿಂದೆ ಸರಿಯುತ್ತವೆ ಬೆಚ್ಚಿ!!

ಸಂಯಮ ಶಿಸ್ತು ಕವಾಯತು
ಆಹಾ...ಸುಂದರ ಬಲು ಭದ್ರ
ನಡುರಾತ್ರಿಯಲಿ, ಕತ್ತಲಿನ ಕೊನೆ ಜಾವದಲಿ
ಕೇಳುತ್ತದೆ ವ್ಯೂಹದ ಹೊಕ್ಕುಳಿಂದೊಂದು
ಬಿಕ್ಕುವ ಸದ್ದು.

ಯಾರದದು?

ಅಗೋ..
ಅಕ್ಕರೆಯಿಂದೊಬ್ಬ ವೃದ್ಧ ಗೋಪಾಲ
ಹರಸಿದ ಆಂತರ್ಯದಿಂದ.!
ಅತ್ತು ಮುಗಿದ ಮೇಲಾದರೂ
ನಡೆದು ಹೋಗಲಿ ಒಂದು ಅಂತರ್ಯುದ್ಧ
ಛಿದ್ರವಾಗಲಿ ಈ ಅಭೇದ್ಯ ವ್ಯೂಹ
ತೋರದಿರುವುದೇ ಹೊಸದೊಂದು ಹಾದಿ
ಕರುಣೆಯ ಈ ಅಗಾಧ ಜಗಪ್ರವಾಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT