ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋ-ಶಾ ರಹಸ್ಯಗಳು

Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮೈತ್ರಿ ಸರ್ಕಾರದ ‘ಮಹಾನ್‌’ ಶಾಸಕರು ಯಾವಾಗ ಸಾಮೂಹಿಕ ರಾಜೀನಾಮೆ ಕೊಟ್ಟರೋ, ಅಂದಿನಿಂದ ಸುಮಾರು ಎರಡು ತಿಂಗಳವರೆಗೆ ಹಾಳು ಬಿದ್ದಿದ್ದ ನಮ್ಮ ಆಡಳಿತಯಂತ್ರ ಕೊನೆಗೂ ಓಡುವ ಲಕ್ಷಣ ಕಾಣುತ್ತಿದೆ. ನಿಧಾನಸಭೆಯಲ್ಲಿ ನಡೆದ ಕಾಲಹರಣ ಪ್ರಹಸನ ಮರೆಯಲು ನಾವೆಲ್ಲಾ ಶತಪ್ರಯತ್ನ ಮಾಡುತ್ತಿರುವಾಗಲೇ, ಸಂತೋ–ಶಾ ಎಂಬ ಚಂಡ ಪ್ರಚಂಡರಿಬ್ಬರು ಆಡಳಿತ ಯಂತ್ರವನ್ನು ಸರಿಪಡಿಸಲು ತೆಗೆದುಕೊಂಡ ಸಮಯ, ದೇಶದ ರಾಜಕೀಯದಲ್ಲೇ ದಾಖಲೆಯಾಗಿಬಿಟ್ಟಿದೆ.

ಅಚ್ಚರಿಯೆಂದರೆ, ಅವರು ದೆಹಲಿಯಲ್ಲಿ ಕುಳಿತುಕೊಂಡೇ ಇಲ್ಲಿನ ಆಡಳಿತಯಂತ್ರ ಸರಿಪಡಿಸಿದ್ದಾರೆ! ಅದು ಹೇಗೆ ಸಾಧ್ಯವಾಯಿತು? ಅವರು ಯಾವ ತಂತ್ರ ಬಳಸಿ ಕುತಂತ್ರ ಹೆಣೆದರು? ಅವರ ಬಹು ದೂರಾಲೋಚನೆಗಳೇನು? ಇವೆಲ್ಲಾ ಈವರೆಗೆ ಯಾರಿಗೂ ಗೊತ್ತಾಗದ ದೊಡ್ಡ ರಹಸ್ಯ. ನಂಬಿದರೆ ನಂಬಿ, ಆ ಸಂತೋ- ಶಾ ರಹಸ್ಯಗಳು ಇದೀಗ ಸೋರಿಕೆಯಾಗಿವೆ. ಒಂದು ವಿಶೇಷ ಸೂಚನೆ– ದಯವಿಟ್ಟು ಇದನ್ನು ಗುಟ್ಟಾಗಿ ಓದಬೇಕಾಗಿ ವಿನಂತಿ.

*ಮೊತ್ತ ಮೊದಲನೆಯದಾಗಿ ಸಿಎಮ್ಮಪ್ಪರಿಗಿರುವ ಸಂಪುಟ ರಚನೆ, ಖಾತೆ ಹಂಚಿಕೆ ಮತ್ತು ಆಡಳಿತದ ಮೇಲಿನ ವಿಶೇಷಾಧಿಕಾರ ‘370 ವಿಧಿ’ಯನ್ನು ಹೈಕಮಾಂಡಿಗೆ ಹಸ್ತಾಂತರ ಮಾಡಿಬಿಡುವುದು.

* ‘ಮೊದ್ಲು ಕುರ್ಚಿ ಕೊಡಿ, ಆಮೇಲಿನದ್ದು ನನಗೆ ಬಿಡಿ’ ಎಂದು ಹಟ ಮಾಡಿದ ಸಿಎಮ್ಮಪ್ಪರನ್ನು ಒಂದಷ್ಟು ಸತಾಯಿಸುವುದು.

* ಸಿಎಮ್ಮಪ್ಪರ ಸುತ್ತ ಅಸಮಾಧಾನದ ಹೊಗೆ ಹಬ್ಬಿಸಲು ಅವರು ಕೊಟ್ಟ ಸಚಿವಾಕಾಂಕ್ಷಿಗಳ ಪಟ್ಟಿಗೆ ಬೆಂಕಿ ಕೊಟ್ಟುಬಿಡುವುದು. ಕತ್ತಿ ವರಸೆ, ಗೂಳಿ ದಾಳಿ ಮತ್ತು ಅಪ್ಪಚ್ಚಿಯಾಗುವುದರಿಂದ ಹೇಗೆ ರಕ್ಷಿಸಿಕೊಳ್ಳುತ್ತಾರೆ ಎಂದು ಕಾದು ನೋಡುವುದು.

* ಮೊದಲ ಬಾರಿಗೆ ಸಂಪುಟದಲ್ಲೂ ಮೀಸಲಾತಿ ಘೋಷಣೆ! ಇದರಲ್ಲಿ ಒಟ್ಟು 17 ಹುದ್ದೆಗಳನ್ನು ‘ಅನರ್ಹ’ ಪಂಗಡಕ್ಕೆ ಸೇರಿದವರಿಗೆ ಮಾತ್ರ ಕೊಡಲಾಗುವುದು.

* ಸಂಪುಟ ರಚನೆಯಲ್ಲಿ ಸಚಿವರನ್ನು ಜಾತಿ ಮತ್ತು ಜಿಲ್ಲೆಯ ಆಧಾರದಲ್ಲಿ ಆಯ್ಕೆ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಮಂಗಳ ಹಾಡುವುದು.

* ಮೂರು ಉಪಮುಖ್ಯಮಂತ್ರಿ ಸ್ಥಾನಗಳನ್ನು ಹುಟ್ಟುಹಾಕಿ, ಸಿಎಮ್ಮಪ್ಪರಿಗಿರುವ ‘ಅತೀ ಮುಖ್ಯಮಂತ್ರಿ’ ಗರ್ವವನ್ನು ಇಳಿಸುವುದು.

* ಮೂವರು ಡಿಸಿಎಂಗಳಲ್ಲಿ ಒಬ್ಬರನ್ನು ಅತ್ಯಂತ ‘ಸೆಕ್ಸಿ’ ಎಂಬ ಆಧಾರದಲ್ಲಿ ಆಯ್ಕೆ ಮಾಡಬೇಕು. ದಾಸ, ಲಪ್ಪ, ಲಕ್ಕು ಮತ್ತು ಕಾಚಾರಿಯ ಈ ನಾಲ್ವರಲ್ಲಿ ಲಕ್ಕುವೇ ಅತ್ಯಂತ ಅರ್ಹ ‘ಸೆಕ್ಸಿ’ ವ್ಯಕ್ತಿ.

* ಎರಡನೆಯ ಡಿಸಿಎಂ ಕುರ್ಚಿ ‘ಆಪರೇಷನ್’ ಕಾರ್ಯ ನಿರ್ವಹಿಸಿದವರಿಗೆ ಕೊಡಬೇಕು. ಅದನ್ನು ವೈದ್ಯೋ ನಾರಾಯಣೋ ಹರಿ ಅವರಿಗೆ ಖಂಡಿತ ಕೊಡಬಹುದು.

* ಕಿರಿತನದ (ಎತ್ತರ) ಆಧಾರದ ಮೇಲೆ ಖಾರ ಜೋಳರನ್ನು ಮೂರನೇ ಡಿಸಿಎಂ ಮಾಡಬಹುದು.

* ಡಿಸಿಎಂ ಆಕಾಂಕ್ಷಿ ಶೋಕ ಅವರಿಗೆ ಕಂದಾಯದಂತಹ ಪ್ರಮುಖ ಖಾತೆ ಕೊಟ್ಟು ಶೋಕತೃಪ್ತರಾಗುವುದನ್ನು ತಡೆಯಬಹುದು.

* ಮಾಜಿ ಸಿಎಂ ಕಟ್ಟರ್ ಅವರಿಗೆ ಎರಡು ‘ಕಂಡೀಷನ್’ ಮೇಲೆ ಕೈಗಾರಿಕಾ ಖಾತೆ ಕೊಡಬಹುದು. ಒಂದು- ಕೊಟ್ಟದ್ದನ್ನು ಕಣ್ಮುಚ್ಚಿಕೊಂಡು ಬಾಚಿಕೊಳ್ಳಬೇಕು. ಎರಡನೆಯದು- ಐಸಿಯುನಲ್ಲಿರುವ ಉದ್ಯಮಗಳು ಚೇತರಿಸಿಕೊಳ್ಳುವಂತೆ ಮಾಡಲು ಡಿಸೆಂಬರ್ ಗಡುವು ಕೊಡುವುದು. ಇವೆರಡನ್ನೂ ಪಾಲಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಪಕ್ಷದ ‘ಮಾರ್ಗದರ್ಶಕ’ರನ್ನಾಗಿ ನೇಮಿಸುವುದು.

* ಶ್ರೀಮುಲು ಅವರಿಗೆ ಡಿಸಿಎಂ ಸ್ಥಾನವೇ ಬೇಕೆಂದಿದ್ದರೆ ಖಾತೆರಹಿತ ಡಿಸಿಎಂ ಪಟ್ಟ ಕೊಡುತ್ತೇವೆ ಎಂದು ನಿಷ್ಠುರವಾಗಿ ಹೇಳುವುದು.

* ಬಸೋರಾಜ್ ಅವರಿಗೆ ಗೃಹ ಖಾತೆ ಕೊಟ್ಟು ‘ನೀವೇ ನಂಬರ್- 2’ ಎಂದು ಗುಟ್ಟಾಗಿ ಹೇಳಿದರಾಯಿತು. ಆದರೆ ಗುಪ್ತಚರವು ಸಿಎಂ ಕೈಯಲ್ಲೇ ಇರಲಿ. ಫೋನ್ ಕದ್ದಾಲಿಕೆಯ ಪೂರ್ತಿ ಜವಾಬ್ದಾರಿ ಸಿಎಂ ವಹಿಸಬೇಕಾಗುತ್ತದೆ.

* ಮುಜರಾಯಿ ಮತ್ತು ಮೀನುಗಾರಿಕೆ ಖಾತೆಗೆ ಏಳನೇ ಕ್ಲಾಸ್ ಅರ್ಹತೆ ಸಾಕಾಗಿರುವುದರಿಂದ ಇಬ್ಬರು ಶೇಣಿವಾಸರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡರಾಯಿತು.

* ಒಂದು ತಿಂಗಳ ಹಿಂದೆಯೇ ವಸತಿ ಸಚಿವರ ಕುರ್ಚಿಗೆ ಟವೆಲ್ ಹಾಕಿ ಕಾದಿರಿಸಿರುವುದು ಮಾತ್ರವಲ್ಲ ನಾಮಫಲಕವನ್ನೂ ಬರೆಸಿಟ್ಟಿರುವ ಸೋಮನ್‌ ಅವರನ್ನು ಭ್ರಮನಿರಸನಗೊಳಿಸುವುದು ಬೇಡ.

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ವಿಂಗಡಿಸಿ ‘ಮಕ್ಕಳ ಅಭಿವೃದ್ಧಿ’ಯನ್ನು ತಮ್ಮ ಕೈಯಲ್ಲೇ ಇಟ್ಟುಕೊಳ್ಳುವ ಸಿಎಮ್ಮಪ್ಪರ ಸಲಹೆಯನ್ನು ಬಿಲ್ಕುಲ್ ಒಪ್ಪಿಕೊಳ್ಳಬಾರದು.

* ಈ ಸಂಪುಟ ರಚನೆ ನೋಡಿ ನಮ್ಮ ಮಾಜಿ ಮಂತ್ರಿಗಳಿಗೆ ಮೈಯಲ್ಲಿ ಭೂತ ಬಂದುಬಿಟ್ಟರೆ, ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡುವುದು. ಮಾಜಿ ಮಂತ್ರಿಗಳಿಗೆ ಹಿಂಬಡ್ತಿ ಕೊಡುವುದು ಅವಮಾನ ಎಂದು ಅವರು ಮತ್ತೆ ರೋದಿಸಿದರೆ, ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿಗಳೇ ಅವಮಾನ ಸಹಿಸಿಕೊಂಡಿಲ್ಲವೇ ಎಂದು ಸಮಾಧಾನಿಸುವುದು.

* ಕೊನೆಗೆ ನಮ್ಮ ಡ್ಯಾನ್ಸರ್ ಕಾಚಾರಿಯ ಅವರೇನಾದರೂ ‘ನಾನು ಪ್ರವಾಹ ಬಂದಾಗ ತೆಪ್ಪದಲ್ಲಿ ಸಾವಿರಾರು ಜನರನ್ನು ರಕ್ಷಿಸಿದ್ದೇನೆ, ನನ್ನನ್ನು ನಿರ್ಲಕ್ಷ್ಯ ಮಾಡಬಾರದಿತ್ತು’ ಎಂದು ಹಲುಬಿದರೆ ತೆಪ್ಪಗೆ ಕೂರುವಂತೆ ಜೋರು ಮಾಡಿದರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT