ಗಟ್ಟಿ ಗುಂಡಿಗೆಗೆ ಸವಾಲು ಈ ರಸ್ತೆ

ಸಂಡೂರು: ಸಂಡೂರಿನಿಂದ ತೋರಣಗಲ್ಲು ಮಾರ್ಗವಾಗಿ ಬಳ್ಳಾರಿಗೆ ತಲುಪಬೇಕಾದರೆ ತಾರಾನಗರ ಹತ್ತಿರದ ನಾರಿಹಳ್ಳ ಜಲಾಶಯ ಪಕ್ಕದ ರಸ್ತೆಯನ್ನು ಬಳಸಬೇಕಾದ ಅನಿವಾರ್ಯತೆ ಇಲ್ಲಿನ ಜನರಿಗಿದೆ. ಸುಮಾರು 6ರಿಂದ 7 ಕಿ.ಮೀ ಉದ್ದ ಇರುವ ನಾರಿಹಳ್ಳ ಜಲಾಶಯದ ಕೆರೆಯ ಏರಿ ದಾರಿಯಲ್ಲಿ ಸಾಗಲು ಭಂಡ ಧೈರ್ಯ, ಗಟ್ಟಿ ಗುಂಡಿಗೆ ಇದ್ದರೆ ಮಾತ್ರ ಸಾಧ್ಯ. ಮನುಷ್ಯನ ಮೊಣಕಾಲೆತ್ತರ ತಗ್ಗು- ಗುಂಡಿಗಳಿಂದ ಕೂಡಿರುವ ನಾರಿಹಳ್ಳ ಜಲಾಶಯದ ರಸ್ತೆ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಹಾಳಾಗಿ ಹೋಗಿದೆ.
ದಾರಿಯ ಒಂದು ಬದಿ ಕಡಿದಾದ ಮಣ್ಣಿನ ಗುಡ್ಡ ಇದ್ದರೆ ಇನ್ನೊಂದು ಬದಿಯಲ್ಲಿ 50 ಅಡಿಗೂ ಹೆಚ್ಚಿನ ಆಳವಿರುವ ಜಲಾಶಯವಿದೆ. ಇಕ್ಕಟ್ಟಾದ ಅಂಕುಡೊಂಕಾದ ರಸ್ತೆಯಲ್ಲಿ ಹಲವು ತಿರುವುಗಳಂತೂ ಅಪಾಯಕಾರಿಯಾಗಿವೆ.ಇದೇ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ಅದಿರು ಲಾರಿಗಳು ಓಡಾಡುತ್ತವೆ. ಮಳೆಗಾಲದಲ್ಲಿ ಕೆರೆಯ ಏರಿಯ ಮೇಲೆ ಕೆಸರು ಜಾರಿಕೆ ಇರುತ್ತದೆ. ಚಾಲಕರು ಮೈಯ್ಯೆಲ್ಲ ಕಣ್ಣಾಗಿ ವಾಹನ ಓಡಿಸಬೇಕು. ಅಪಘಾತ ಸಂಭವಿಸಿದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಮಳೆಗಾಲದಲ್ಲಿ ಜಲಾಶಯದಲ್ಲಿ ಸಾಕಷ್ಟು ನೀರು ತುಂಬಿರುತ್ತದೆ. ನಾರಿಹಳ್ಳ ಜಲಾಶಯ ನಿರ್ಮಾಣವಾಗಿ 3 ದಶಕಗಳಾಗುತ್ತಾ ಬಂದಿದ್ದರೂ ಕೆರೆಯ ಏರಿಯ ದುರಸ್ತಿಯಾಗಲಿ ತಡೆಗೋಡೆಯಾಗಲಿ ನಿರ್ಮಾಣವಾಗಿಲ್ಲ.
ಬಳ್ಳಾರಿಯಿಂದ ಸಂಡೂರು ಮಾರ್ಗವಾಗಿ ಕೂಡ್ಲಿಗಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಮುಂತಾದ ಕಡೆ ತಲುಪಲು ಈ ರಸ್ತೆಯಲ್ಲೇ ದಿನನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಅಮಾಯಕ ಜೀವಗಳು ನಾರಿಹಳ್ಳದ ಪಾಲಾಗುವ ಮುನ್ನ ತಡೆಗೋಡೆ ನಿರ್ಮಿಸಿ ಗಂಡಾಂತರಗಳನ್ನು ತಪ್ಪಿಸಲು ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯವರು ಹಾಗೂ ಸರ್ಕಾರ ಮುಂದಾಗಬೇಕೆಂದು ಇಲ್ಲಿನ ಸ್ಥಳೀಯರು ಆಗ್ರಹಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.