ಗುಲ್ಬರ್ಗಕ್ಕೆ ರೈಲ್ವೆ ವಿಭಾಗ

ಗುಲ್ಬರ್ಗ: ಹೈದರಾಬಾದ್ ಕರ್ನಾಟಕದ ಜನರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಗುಲ್ಬರ್ಗ ರೈಲ್ವೆ ವಿಭಾಗ ಆರಂಭದ ಕನಸು ನನಸಾಗಲಿದ್ದು, ನಾಲ್ಕು ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶನಿವಾರ ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಪಿಟ್ಲೈನ್ಗೆ ಭೂಮಿಪೂಜೆ, ಎಸ್ಕಲೇಟರ್ ಹಾಗೂ 4ನೇ ಪ್ಲಾಟ್ಫಾರಂ ಉದ್ಘಾಟಿಸಿ ಮಾತನಾಡಿದರು.
ಅಸ್ಸಾಂನ ಸಿಲ್ಚಾರ್, ಜಮ್ಮು–ಕಾಶ್ಮೀರದ ಉಧಮ್ಪುರ ಹಾಗೂ ಕರ್ನಾಟಕದ ಗುಲ್ಬರ್ಗದಲ್ಲಿ ಮೂರು ರೈಲ್ವೆ ವಿಭಾಗ ಆರಂಭಿಸುವ ಪ್ರಸ್ತಾವನೆಯನ್ನು ರಾಜ್ಯಸಭೆಯಲ್ಲಿ ಈಗಾಗಲೇ ಮಂಡಿಸಲಾಗಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಗುಲ್ಬರ್ಗದಲ್ಲಿ ವಿಭಾಗೀಯ ಆಡಳಿತ ಕಚೇರಿ ಆರಂಭಿಸುವುದಕ್ಕೆ ಪೂರಕ ಬಜೆಟ್ನಲ್ಲೆ ಈಗಾಗಲೇ ₨ 5 ಕೋಟಿ ಅನುದಾನ ನೀಡಿ, ಅಗತ್ಯ ಭೂಮಿ ಒದಗಿಸಲಾಗಿದೆ. ಈ ಕಚೇರಿ ಪೂರ್ಣಪ್ರಮಾಣದಲ್ಲಿ ಆರಂಭವಾಗಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ. ಹೊಸ ಪ್ರಕಟಣೆಗಳನ್ನು ಹೊರಡಿಸುವುದು, ಮಾರ್ಗ ಹಾಗೂ ಉದ್ಯೋಗಿಗಳ ಹಂಚಿಕೆ ಕೆಲಸ ಮುಗಿಸಲು ಸಮಯ ಹಿಡಿಯುತ್ತದೆ ಎಂದರು.
ಮುಂಬೈ– ಚೆನ್ನೈ, ಮುಂಬೈ–ಬೆಂಗಳೂರು ಮಧ್ಯೆ ಜೋಡಿ ರೈಲು ಮಾರ್ಗ ಹಾಗೂ ವಿದ್ಯುದೀಕರಣ ಕಾಮಗಾರಿಗಳನ್ನು ಈ ಹಿಂದೆಯೇ ಕೈಗೆತ್ತಿಕೊಳ್ಳಲಾಗಿತ್ತು. 2016ರ ಹೊತ್ತಿಗೆ ಪೂರ್ಣಗೊಳಿಸುವುದಕ್ಕೆ ಅಗತ್ಯ ಅನುದಾನ ಒದಗಿಸಲಾಗಿದೆ. ಇದರಿಂದ ರೈಲು ಪ್ರತಿ ಗಂಟೆಗೆ ಕನಿಷ್ಠ 110 ಕಿ.ಮೀ. ಸಂಚರಿಸಲು ಸಹಾಯವಾಗಲಿದೆ. ಹೀಗಾಗಿ ಪ್ರಯಾಣ ಸಮಯ ಮುಂಬೈ–ಚೆನ್ನೈ ಮಧ್ಯೆ ನಾಲ್ಕೂವರೆ ತಾಸು ಹಾಗೂ ಮುಂಬೈ–ಬೆಂಗಳೂರು ಮಧ್ಯ ಮೂರುವರೆ ತಾಸು ತಗ್ಗಲಿದೆ ಎಂದರು.
‘ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ರೈಲ್ವೆ ಯೋಜನೆಗಳಿಗೆ 9 ತಿಂಗಳ ಹಿಂದೆ ನಾನು ರೈಲ್ವೆ ಸಚಿವ ಸ್ಥಾನ ವಹಿಸಿಕೊಂಡ ನಂತರ ಚುರುಕು ನೀಡಲಾಗಿದೆ. ಮುಂದಿನ 9 ವರ್ಷ ಮಾಡಬಹುದಾದಷ್ಟು ಕೆಲಸ ಮಾಡಿರುವ ತೃಪ್ತಿ ಸಿಕ್ಕಿದೆ. ರೈಲ್ವೆ ವಿಕಾಸ ನಿಗಮದ ಅಧಿಕಾರಿಗಳು ಕೂಡ ಸಹಕರಿಸುತ್ತಿದ್ದಾರೆ. ಹೀಗಾಗಿ ಮಧ್ಯ ರೈಲ್ವೆ ಹಾಗೂ ದಕ್ಷಿಣ ಮಧ್ಯೆ ರೈಲ್ವೆ ವಿಭಾಗಗಳ ನೌಕರರ ಕ್ಷೇಮಾಭಿವೃದ್ಧಿ ನಿಧಿಗಳಿಗೆ ತಲಾ ₨5 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಘೋಷಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.