ಧಾರಾನಗರಿಯಲ್ಲಿ ತಂಪು ತಂದ ಮಳೆ
ಧಾರವಾಡ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸೋಮವಾರ ಸುರಿದ ಮಳೆ ತಂಪೆರೆದಿದೆ. ಸೋಮವಾರ ಬೆಳಿಗ್ಗೆಯಿಂದಲೇ ಬಿಸಿಲಿನ ಬೇಗೆ ಬಿರುಸುಗೊಂಡಿತ್ತು. ಮಳೆಗಾಲದಲ್ಲೂ ಇಂಥ ಬಿಸಿಲು ಚುರುಗುಡುತ್ತಿದೆ ಎಂದು ಜನ ಅಂದುಕೊಳ್ಳುವಷ್ಟರಲ್ಲಿ ಸಂಜೆ ಹೊತ್ತಿಗೆ ತಂಪು ಗಾಳಿಯೊಂದಿಗೆ ಮೋಡಗಳು ತಾಸಿಗೂ ಹೆಚ್ಚು ಕಾಲ ನೀರನ್ನು ಸುರಿಸಿದವು.
ಜೋರಾಗಿ ಮಳೆ ಸುರಿಯುತ್ತದೆ ಎಂದು ಕೆಲವರು ಮನೆ ಸೇರಿದರೆ, ಬಹಳ ದಿನಗಳ ಮೇಲೆ ಮಳೆ ಸುರಿಯುತ್ತಿದೆ ಎಂದು ಮಳೆಯನ್ನೇ ನೋಡುತ್ತಾ ಅನೇಕರು ನಿಂತರು. ಸರಿಯಾಗಿ 4 ಗಂಟೆಯಿಂದ ನಗರದಲ್ಲಿ ಆರಂಭವಾದ ಮಳೆ 5 ಗಂಟೆಯವರೆಗೂ ಸುರಿಯಿತು. ನಂತರ ತಂಪು ವಾತಾವರಣದೊಂದಿಗೆ ಜಡಿ ಮಳೆ ಹತ್ತಿಕೊಂಡಿತು. ಕೆಲವರು ಮಳೆಯಲ್ಲಿಯೇ ದ್ವಿಚಕ್ರ ವಾಹನದ ಮೇಲೆ ಸಂಚರಿಸಿದರು.
ರಸ್ತೆಗಳಲ್ಲಿ ನೀರು ಹರಿಯಿತಾದರೂ ವಾಹನ ಸಂಚಾರಕ್ಕೇನೂ ಅಡೆತಡೆ ಆಗಲಿಲ್ಲ. ಅನೇಕ ಶಾಲಾ ವಿದ್ಯಾರ್ಥಿಗಳು ಹುರುಪಿನಿಂದಲೇ ಮಳೆಯಲ್ಲಿಯೇ ನೆನೆದುಕೊಂಡು ಹೋದರು. ನಗರದ ಜೆಎಸ್ಎಸ್ ಮೈದಾನದಲ್ಲಂತೂ ನೀರು ತುಂಬಿಕೊಂಡು ಕೆರೆಯಂತೆ ಭಾವಿಸುತ್ತಿತ್ತು. ಆದರೆ ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಜಿಲ್ಲೆಯಲ್ಲಿ 31.8 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ ಎಂದು ಹವಾಮಾನ ಇಲಾಖೆ `ಪ್ರಜಾವಾಣಿಗೆ~ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.