ನಾಕೌಟ್ ನಿರೀಕ್ಷೆಯಲ್ಲಿ ಆ್ಯಂಡ್ರ್ಯೂ ಸ್ಟ್ರಾಸ್
ಚೆನ್ನೈ: ವಿಶ್ವಕಪ್ ಟೂರ್ನಿಯ ಕ್ವಾರ್ಟರ್ಫೈನಲ್ಗೆ ಪ್ರವೇಶಿಸುವ ಅವಕಾಶ ಸಿಗುವ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್, ನಾಕೌಟ್ ಹಂತದಲ್ಲಿ ಗೆಲುವು ಸಾಧಿಸಬೇಕಾದರೆ ಉತ್ತಮ ಪ್ರದರ್ಶನ ಕಾಪಾಡಿಕೊಳ್ಳಬೇಕು ಎಂದು ತಮ್ಮ ಸಹ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಬಿ ಗುಂಪಿನಲ್ಲಿ ಸದ್ಯ ದಕ್ಷಿಣ ಆಫ್ರಿಕಾ ತಂಡವೊಂದೇ ಎಂಟರ ಘಟ್ಟಕ್ಕೆ ಪ್ರವೇಶಿಸುವುದು ಖಚಿತವಾಗಿದೆ. ಉಳಿದ ಮೂರು ಸ್ಥಾನಗಳಿಗೆ ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಗಳ ನಡುವೆ ಪೈಪೋಟಿಯಿದೆ. ಮಾರ್ಚ್ 19ರಂದು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಮತ್ತು 20ರಂದು ಭಾರತ ಮತ್ತು ವಿಂಡೀಸ್ ತಂಡಗಳ ನಡುವಿನ ಪಂದ್ಯಗಳ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
‘ವಿಂಡೀಸ್ ವಿರುದ್ಧದ ಪಂದ್ಯ ನಮಗೆ ಕಠಿಣ ಸವಾಲಾಗಿತ್ತು. ಪಂದ್ಯ ಸೋತರೆ ಮನೆಗೆ ಮರಳುವ ಅಪಾಯವಿತ್ತು. ಖಾಲಿ ಕೈಯಲ್ಲಿ ಮನೆಗೆ ಹೋಗಬಾರದು ಎಂಬ ದೃಢನಿರ್ಧಾರದಿಂದಲೇ ಮೈದಾನಕ್ಕೆ ಇಳಿದಿದ್ದೇವು. ಅದರಂತೆ ಹೋರಾಟ ಮಾಡಿ ಗೆದ್ದಿದ್ದೇವೆ’ ಎಂದು ಸುದ್ದಿಗಾರರಿಗೆ ಹೇಳಿದರು.
‘ಪಂದ್ಯದಲ್ಲಿ ಚೆಂಡು ಬದಲಾಯಿಸುವ ಮುನ್ನ ಬ್ಯಾಟಿಂಗ್ ಕಷ್ಟವಾಗಿತ್ತು. ಕೆಳಮಟ್ಟದಲ್ಲಿ ಬೌನ್ಸ್ ಇದ್ದಿದ್ದರಿಂದ ಬ್ಯಾಟ್ ಮೇಲೆ ಚೆಂಡು ಬರುತ್ತಿರಲಿಲ್ಲ. ಇದರಿಂದಾಗಿ 20-30 ರನ್ನುಗಳ ಹಿನ್ನಡೆಯಾಯಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಗೇಲ್ ವಿಕೆಟ್ ಮತ್ತಿತರ ಮೂರು ವಿಕೆಟ್ ಪಡೆದಿದ್ದು ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದರು.
‘ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಟೂರ್ನಿಯಿಂದ ನಿರ್ಗಮಿಸಿರುವ ಕೆವಿನ್ ಪೀಟರ್ಸನ್ ಅನುಪಸ್ಥಿತಿಯಲ್ಲಿಯೂ ತಂಡ ಗೆಲುವು ಸಾಧಿಸಿದೆ. ಲ್ಯೂಕ್ ರೈಟ್ ಮತ್ತು ಟ್ರೆಡ್ವೆಲ್ ಅವರ ಪ್ರದರ್ಶನ ಉತ್ತಮವಾಗಿತ್ತು’ ಎಂದು ಸ್ಟ್ರಾಸ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.