ಬಿಜೆಪಿಯ ಬಹುತೇಕರು ಕೆಜೆಪಿಗೆ: ಬೆಲ್ದಾಳೆ
ಬೀದರ್: ರಾಜ್ಯದಲ್ಲಿ ಬಿಜೆಪಿಯ ಬಹುತೇಕರು ಕೆಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂದು ಕರ್ನಾಟಕ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷೆ ಶಕುಂತಲಾ ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಸಪ್ನಾ ಇಂಟರ್ನ್ಯಾಷನಲ್ನಲ್ಲಿ ಭಾನುವಾರ ನಡೆದ ಕರ್ನಾಟಕ ಜನತಾ ಪಕ್ಷದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಬೆಲೆ ಇಲ್ಲ. ಹೀಗಾಗಿ ನಿಷ್ಠಾವಂತರು ಕೆಜೆಪಿ ಸೇರಬೇಕು ಎಂದು ಆಹ್ವಾನ ನೀಡಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಯನ್ನು ಬೇರು ಹಂತದಿಂದ ಕಟ್ಟಿ ಬೆಳೆಸಿದ್ದರು. ಆದರೆ, ಅವರಿಗೆ ಆ ಪಕ್ಷದಿಂದ ಆದ ಅನ್ಯಾಯವೇ ಕೆಜೆಪಿ ಸ್ಥಾಪನೆಗೆ ಕಾರಣ ಎಂದು ಕರ್ನಾಟಕ ಜನತಾ ಪಕ್ಷದ ಪ್ರಮುಖರಾದ ರವಿಕುಮಾರ್ ರಾಯಸಂದ್ರ ಹೇಳಿದರು.
ಮಾಜಿ ಕೇಂದ್ರ ಸಚಿವ ಧನಂಜಯ್ಕುಮಾರ್ ಅವರಿಗೆ ನೋಟಿಸ್ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ ಅವರಲ್ಲಿ ತಾಕತ್ತಿದ್ದರೆ ಬಳ್ಳಾರಿ ಶಾಸಕರಿಗೆ ನೋಟಿಸ್ ಕೊಡಲಿ ಎಂದು ಸವಾಲು ಹಾಕಿದರು. ಬಿಜೆಪಿಯಲ್ಲಿ ಕೆಲವರು ಹಿಂಬಾಗಿಲಿನಿಂದ ಉನ್ನತ ಸ್ಥಾನ ಪಡೆದಿದ್ದಾರೆ ಎಂದು ದೂರಿದರು.
ಕೆಜೆಪಿಯಲ್ಲಿ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಕಲ್ಪಿಸಲಾಗುತ್ತದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಯುವಕರು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಸಲಹೆ ಮಾಡಿದರು.ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಕೆಜೆಪಿ ಸೇರುತ್ತಿದ್ದಾರೆ. ಮಾಜಿ ಸಚಿವ ಜಬ್ಬಾರ್ಖಾನ್ ಹೊನ್ನಾಳಿ ಪಕ್ಷ ಸೇರ್ಪಡೆ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ಪ್ರಮುಖರಾದ ಜಗದೀಶ್ ಹಿರೇಮನಿ ಹೇಳಿದರು.
ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಕೆಲ ನಾಯಕರಿಗೆ ಅಸ್ತಿತ್ವವೇ ಇಲ್ಲ ಎಂದು ಲೇವಡಿ ಮಾಡಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ್ ಎಸ್. ಪಾಟೀಲ್ ಗಾದಗಿ ಮಾತನಾಡಿದರು. ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.