ಮರಳಿಗಾಗಿ ಕಟ್ಟಡ ಕಾರ್ಮಿಕರ ಹೋರಾಟ

ಹರಿಹರ: ತಾಲ್ಲೂಕಿನ ಮರಳು ಮಾಫಿಯಾ ಹಾಗೂ ಸರ್ಕಾರದ ಅವೈಜ್ಞಾನಿಕ ಮರಳುನೀತಿಯನ್ನು ಖಂಡಿಸಿ ವೃತ್ತಿನಿರತ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಜಿ. ನಜ್ಮಾ ಅವರಿಗೆ ಮನವಿ ಸಲ್ಲಿಸಿದರು.
ಹರಿಹರೇಶ್ವರ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು, ಸಿಬಾರ ವೃತ್ತ, ಹೊಸಪೇಟೆ ಬೀದಿ, ಕುರುಬರ ಓಣಿ, ಪಿ.ಬಿ.ರಸ್ತೆ, ಮಹಾತ್ಮ ಗಾಂಧಿ ವೃತ್ತ, ಮುಖ್ಯರಸ್ತೆ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಮೂಲಕ ತಾಲ್ಲೂಕು ಕಚೇರಿ ಆವರಣ ತಲುಪಿತು.
ಛೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಶಂಕರ್ ಖಟಾವ್ಕರ್ ಮಾತನಾಡಿ, ತಾಲ್ಲೂಕಿನಿಂದ ನಿತ್ಯ ದಾವಣಗೆರೆ ಹಾಗೂ ಬೆಂಗಳೂರಿಗೆ ನೂರಾರು ಗಾಡಿ ಸಾಗಣೆಯಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿರುವುದು ಅಧಿಕಾರಿಗಳು ಮರಳು ಮಾಫಿಯಾದ ಜತೆ ಕೈಜೋಡಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ತಾಲ್ಲೂಕಿನಲ್ಲಿ ಅಧಿಕಾರಿಗಳು ಮರಳು ಮಾಫಿಯಾದ ಜತೆ ಸೇರಿಕೊಂಡು ಕೃತಕ ಅಭಾವ ಸೃಷ್ಟಿಸಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮರಳು ದೊರೆಯದಿದ್ದರೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವೃತ್ತಿನಿರತ ಸಿವಿಲ್ ಎಂಜಿನಿಯರ್ ಅಸೋಸಿಯೇಷನ್ ಕಾರ್ಯದರ್ಶಿ ಶಿವಪ್ರಕಾಶ ಶಾಸ್ತ್ರಿ ಮಾತನಾಡಿ, ಕೂಡಲೇ, ಸರ್ಕಾರ ಮಧ್ಯೆ ಪ್ರವೇಶಿಸಿ, ಸಾರ್ವಜನಿಕರಿಗೆ ನಿಗದಿಪಡಿಸಿದ ದರದಲ್ಲಿ ಮರಳು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಎಂ. ಗುರುನಾಥ ಮಾತನಾಡಿ, ತಾಲ್ಲೂಕಿನಲ್ಲಿರುವ 13 ಮರಳು ಪಾಯಿಂಟ್ಗಳಲ್ಲಿ ಕೇವಲ ಒಂದೇ ಪಾಯಿಂಟ್ಗೆ ಪರವಾನಗಿ ನೀಡುವ ಮೂಲಕ ಅಧಿಕಾರಿಗಳು ಮರಳು ಮಾಫಿಯಾದೊಂದಿಗೆ ಷಾಮೀಲಾಗಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಈ ಸಂಗತಿ ತಾಲ್ಲೂಕು ಆಡಳಿತಕ್ಕೆ ಗೊತ್ತಿದ್ದರೂ, ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ನೂತನ ನೀತಿ ಜಾರಿಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ತಹಶೀಲ್ದಾರ್ ಜಿ. ನಜ್ಮಾ ಮಾತನಾಡಿ, ತಾಲ್ಲೂಕಿನಲ್ಲಿರುವ 13 ಮರಳು ಪಾಯಿಂಟ್ಗಳಲ್ಲಿ 3 ಪಾಯಿಂಟ್ಗಳಿಗೆ ಪರಿಸರ ಇಲಾಖೆಯಿಂದ ಶಾಶ್ವತ ನಿಷೇಧಾಜ್ಞೆ ಇದೆ.
9 ಪಾಯಿಂಟ್ಗಳಲ್ಲಿ ಮರಳಿನ ಸಂಗ್ರಹ ಲಭ್ಯವಿಲ್ಲ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ವರದಿ ನೀಡಿದ ಕಾರಣ, ತಾಲ್ಲೂಕಿನ ಇಂಗಳಗೊಂದಿ ಪಾಯಿಂಟ್ಗೆ ಮಾತ್ರ ಮರಳು ಸಾಗಣೆ ಮಾಡಲು ಪರವನಾಗಿ ನೀಡಲಾಗುತ್ತಿದೆ ಎಂದರು. ಟಾಸ್ಕ್ಫೋರ್ಸ್ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಸಿ ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವೃತ್ತಿನಿರತ ಸಿವಿಲ್ ಎಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಡೆನ್ನಿಸ್ ರೋಚೆ, ಬಿ. ರಾಜಶೇಖರ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಎಚ್. ಭೀಮಣ್ಣ, ಕಾರ್ಪೇಂಟರ್ ಸಂಘದ ಅಧ್ಯಕ್ಷ ಭದ್ರಾಚಾರ್, ಪೇಂಟರ್ ಸಂಘದ ಬೀರಪ್ಪ, ಪರಶುರಾಮ ಕಾಟ್ವೆ, ಸಿ.ಎನ್.ಹುಲಿಗೇಶ್, ಎಚ್. ನಿಜಗುಣ, ಟಿ.ಕೆ. ಮುರುಗೇಶ್, ಕಲೀಂಬಾಷಾ, ಹರೀಶ್, ಇಂದ್ರಜಿತ್, ಬಾತಿ ಚಂದ್ರಶೇಖರ್, ಮಂಜಣ್ಣ, ಹನುಮಂತಪ್ಪ, ಅಬ್ದುಲ್ ಸತ್ತಾರ್, ಸಯ್ಯದ್ ಯೂಸೂಫ್, ಹನುಮಂತಪ್ಪ ಉಪಸ್ಥಿತರಿದ್ದರು. ಶಾಲೆಯ ಬಾಗಿಲು ಕಿಟಕಿಗಳಿಗೆ ಹೇಸಿಗೆ ಬಳಿದ ಕಿಡಿಗೇಡಿಗಳು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.