ಮೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರು ಪ್ರತಿಭಟನೆ
ಕೊಪ್ಪ: ತಾಲ್ಲೂಕಿನ ವಿವಿಧೆಡೆ ಸಮರ್ಪಕ ರೀತಿ ವಿದ್ಯುತ್ ಸರಬರಾಜು ಆಗತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಮೆಸ್ಕಾಂ ಕಚೇರಿಗೆ ಮಂಗಳವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
10 ದಿನದ ಹಿಂದೆ ವಿದ್ಯುತ್ ಸಮಸ್ಯೆ ಚರ್ಚಿಸಲು ರೈತ ಸಂಘ, ಮೆಸ್ಕಾಂನ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿದ್ದರೂ ಬೆರಳೆಣಿಕೆ ಅಧಿಕಾರಿಗಳಷ್ಟೇ ಹಾಜರಾಗಿದ್ದರು ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ದಿನದ 6 ಗಂಟೆ 3 ಪೇಸ್ ವಿದ್ಯುತ್ ಹಾಗೂ 12 ಗಂಟೆ ಕಾಲ ನಿರಂತರ ಸಿಂಗಲ್ಪೇಸ್ ವಿದ್ಯುತ್ ಒದಗಿಸುವ ಸರ್ಕಾರದ ಭರವಸೆ ಜಾರಿಗೆ ಆಗ್ರಹಿಸಿದರು.
ಮೆಸ್ಕಾಂನಲ್ಲಿ ಟೋಲ್ಫ್ರೀ ವ್ಯವಸ್ಥೆಯಿಲ್ಲ, ಮೂರು ತಿಂಗಳಿನಿಂದ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸುವುದು, ಲೋ ಓಲ್ಟೇಜ್ ಪೂರೈಕೆ ಮಾಡುತ್ತಿರುವುದರಿಂದ ರೈತರು, ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ ಎಂದು ದೂರಿದರು.ಮೆಸ್ಕಾಂ ಎಂಜಿನಿಯರ್ ವಿಜಯ ಕುಮಾರ್, ಮೆಸ್ಕಾಂ ಸಹಾಯಕ ಎಂಜಿನಿಯರ್ ಅಶೋಕ್ ಕುಮಾರ್, ಮಹಮದ್ ಸೈಯದ್ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದ ಕಾರ್ಯಕರ್ತರು ಕಚೇರಿಗೆ ಬೀಗಹಾಕಿದರು.
ದಿನದ 6 ಗಂಟೆ ತ್ರೀಪೇಸ್ ವಿದ್ಯುತ್ ಹಾಗೂ 12 ಗಂಟೆ ಸಿಂಗಲ್ಪೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು, ಟೋಲ್ಫ್ರೀ ವ್ಯವಸ್ಥೆ ತಕ್ಷಣ ಕಲ್ಪಿಸಲಾಗುವುದು ಹಾಗೂ ಏ. 2ರಂದು ಮೆಸ್ಕಾಂ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸುವರು ಎಂಬ ಲಿಖಿತ ಭರವಸೆ ದೊರೆತ ನಂತರ ಪ್ರತಿಭಟನೆ ಕೈಬಿಡಲಾಯಿತು.
ಜೆಡಿಎಸ್ ರಾಜ್ಯ ಘಟಕ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ರೈತ ಸಂಘದ ಸುಧೀರ್ ಕುಮಾರ್ ಮುರೊಳ್ಳಿ, ಕರುವಾನೆ ನವೀನ್, ನಿಲುಗುಳಿ ನಾಗರಾಜ್, ಕುಪ್ಪಳ್ಳಿ ಸುಧಾಕರ್, ಕೆಳಕೊಪ್ಪ ಸತೀಶ್, ಬೆಳಗುಳ ಚಿಂತನ್, ಬೆಳ್ಳಪ್ಪಗೌಡ ಪ್ರತಿಭಟನೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.