ಯೋಧ ಈಗ ಗ್ರಾ.ಪಂ. ಸದಸ್ಯ

ಹಿರಿಯೂರು: ಸುಮಾರು 16 ವರ್ಷ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸಿದ್ದ ಯೋಧ, ಈಗ ಗ್ರಾಮ ಪಂಚಾಯ್ತಿ ಚುನಾಯಿತ ಸದಸ್ಯ.
ತಾಲ್ಲೂಕಿನ ಮೇಟಿಕುರ್ಕೆ ಗ್ರಾಮ ಪಂಚಾಯ್ತಿಯ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಮಲ್ಲಿಕ್ ಸಾಬಿಗೆ ಶುಕ್ರವಾರ ಶುಭ ದಿನವಾಗಿ ಪರಿಣಮಿಸಿದ್ದು, ವಿಜಯಮಾಲೆ ಧರಿಸಿದ್ದಾರೆ.
ಕಡು ಚಳಿಯ ಪ್ರದೇಶ ಎಂದು ಹೆಸರು ಪಡೆದಿರುವ ಸಿಯಾಚಿನ್ನಲ್ಲಿ ಮಲ್ಲಿಕ್ ಸಾಬಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದರು. 21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ನಂತರ ಹುಟ್ಟೂರಿಗೆ ಮರಳಿರುವ ಅವರು ಕೃಷಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದು, ತೆಂಗು ಹಾಗೂ ಸಪೋಟ ಬೆಳೆಯುತ್ತಿದ್ದಾರೆ. ಪತ್ನಿ ಹಾಗೂ ಮಗನೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಚುನಾವಣೆಯಲ್ಲಿ 322 ಮತಗಳನ್ನು ಮಲ್ಲಿಕ್ ಸಾಬಿ ಗಳಿಸಿ ತಮ್ಮ ಜನಪ್ರಿಯತೆ ಸಾಬೀತು ಮಾಡಿದ್ದಾರೆ.
ರಾಜಕೀಯ ಗೊತ್ತಿಲ್ಲ: ‘ನನಗೆ ರಾಜಕೀಯ ಹೊಸದು. ಚುನಾವಣೆಗೆ ಸ್ಪರ್ಧಿಸಿದ ಮೇಲೆ ಜನರ ನಿರೀಕ್ಷೆಗಳ ಕುರಿತು ಮಾಹಿತಿ ಸಿಕ್ಕಿದೆ. ಪ್ರಾಮಾಣಿಕತೆಯೇ ನನ್ನ ಉಸಿರು. ಜಾತಿ–ಧರ್ಮ, ಮೇಲು–ಕೀಳು ಎಂಬ ವ್ಯತ್ಯಾಸ ನೋಡದೆ ಗ್ರಾಮದ ಸ್ವಚ್ಛತೆಗೆ, ಕುಡಿಯುವ ನೀರು, ಬಡವರಿಗೆ ಸೂರು ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ದಂಪತಿಗೆ ಜಯದ ಮಾಲೆ: ತಾಲ್ಲೂಕಿನ ರಂಗನಾಥಪುರ ಗ್ರಾಮ ಪಂಚಾಯ್ತಿಗೆ ಸೇರಿದ ಆರನಕಟ್ಟೆ-ದೊಡ್ಡಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೊಡ್ಡಕಟ್ಟೆ ರಮೇಶ್ ಹಾಗೂ ಕೆ.ಉಷಾ ದಂಪತಿ ಗ್ರಾಮ ಪಂಚಾಯಿತಿ ಜಯ ಗಳಿಸುವ ಮೂಲಕ ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿದ್ದಾರೆ.
*ಪಂಚಾಯಿತಿ ಕಣದಲ್ಲಿ ಶತಾಯುಷಿ ಅಜ್ಜಿ ಜಯಭೇರಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.