ವೈದ್ಯರ ಕೊರತೆ ನೀಗಿಸಲು ಆಗ್ರಹ
ಸೋಮವಾರಪೇಟೆ: ತಾಲ್ಲೂಕಿನ ಸೂರ್ಲಬ್ಬಿ, ಕೂಡಿಗೆ ಮೊದಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೆ ವೈದ್ಯರ ನೇಮಕಾತಿಯಾಗಬೇಕೆಂದು ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಜಿಲ್ಲೆಯಾದ್ಯಂತ ವೈದ್ಯರ ಕೊರತೆ ಇದೆ. ಗ್ರಾಮಾಂತರ ಪ್ರದೇಶಕ್ಕೆ ಬರಲು ವೈದ್ಯರು ಹಿಂದೇಟು ಹಾಕುತ್ತಿರುವುದರಿಂದ ಹೀಗಾಗುತ್ತಿದೆ ಎಂದ ವೈದ್ಯಾಧಿಕಾರಿ ಡಾ.ಚೇತನ್ ವಾರದಲ್ಲಿ ಒಂದು ದಿನ ಇಲ್ಲಿಗೆ ವೈದ್ಯರನ್ನು ನಿಯೋಜಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಆಶ್ವಾಸನೆ ನೀಡಿದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗುಂದ ಗಿರಿಜನ ಕಾಲೋನಿಯಲ್ಲಿ ಕಲುಷಿತ ನೀರು ಸೇವಿಸಿ ಎರಡು ಮಂದಿ ಸಾವನ್ನಪ್ಪಿ ಹಲವರು ಅಸ್ವಸ್ಥರಾದ ಘಟನೆ ನಡೆದು ತಿಂಗಳುಗಳೇ ಕಳೆದರೂ ಇನ್ನೂ ಅಲ್ಲಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.ಚುನಾವಣೆಯ ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕ ಪಡಿತರ ಚೀಟಿಗೂ ಪಡಿತರ ಸಾಮಗ್ರಿಗಳನ್ನು ವಿತರಿಸಿದ ಸರ್ಕಾರ ಬಳಿಕ ಪಡಿತರ ನಿಲುಗಡೆ ಮಾಡಿದ ಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಧಿಕಾರಿಗಳು ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸದಸ್ಯರು ಆಗ್ರಹಿಸಿದರು.
ಮಾರ್ಚ್ ತಿಂಗಳ ಕೊನೆಯೊಳಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಕೈಗೊಂಡ ನೀರಿನ ಯೋಜನೆಗಳನ್ನು ಮುಗಿಸಬೇಕೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ವಿ.ಲೋಕೇಶ್ ಎಂಜಿನಿಯರುಗಳಿಗೆ ನಿರ್ದೇಶಿಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ಈರಪ್ಪ, ಸದಸ್ಯರಾದ ಡಿ.ಎಸ್.ಪೊನ್ನಪ್ಪ, ಪವಿತ್ರಾ ದೇವೇಂದ್ರ, ರಾಧಾ ರಾಜಗೋಪಾಲ್, ಪಾಲಾಕ್ಷ, ಶಂಕರನಾರಾಯಣ, ಸವಿತಾ ಸುರೇಶ್, ಪ್ರಮೀಳಾ ಪೂಜಾರಿ, ಕೆ.ವಿ.ರಾಣಿ, ಅರೆಯೂರು ಸೋಮಯ್ಯ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.