ಶಿವಾಜಿ ಜಯಂತಿ: ಸಂಭ್ರಮದ ಮೆರವಣಿಗೆ

ಖಾನಾಪುರ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಗುರುವಾರ ರಾತ್ರಿ 8 ರಿಂದ ಶುಕ್ರವಾರ ನಸುಕಿನ ಜಾವದವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಾಜಿಯ ರೂಪಕಗಳ ಮೆರವಣಿಗೆ ಮಾಡುವುದರ ಮೂಲಕ ಶಾಂತಿಯು ತವಾಗಿ ಆಚರಿಸಲಾಯಿತು.
ಗುರುವಾರ ರಾತ್ರಿ ಪಟ್ಟಣದ ಶಿವ ಸ್ಮಾರಕ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸ್ಟೇಷನ್ ರಸ್ತೆ, ಮೇದಾರ ಗಲ್ಲಿ ಕಾರ್ನರ್, ಸಿಂಡಿಕೇಟ್ ಬ್ಯಾಂಕ್ ವೃತ್ತ, ಚುರಮುರಕರ ಗಲ್ಲಿ, ಬೇಂದ್ರೆ ವೃತ್ತ, ವಿಠೋಬಾ ಗಲ್ಲಿಗಳ ಮೂಲಕ ಹಾಯ್ದು ಮಹಾಲಕ್ಷ್ಮೀ ಮಂದಿರವನ್ನು ನಸುಕಿನ ಜಾವ ತಲುಪಿತು. ಈ ಮೆರವಣಿಗೆಯಲ್ಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಸಾವಿರಾರು ಯುವಕರು, ಸಾರ್ವಜನಿಕರು ಭಾಗ ವಹಿಸಿದ್ದರು. ಶ್ರೀರಾಮ ಸೇನೆಯ ವತಿಯಿಂದ ರೂಪಿಸಲಾಗಿದ್ದ ಔರಂಗ ಜೇಬ್ ಹಾಗೂ ಸಂಭಾಜಿ ನಡುವೆ ನಡೆಯುವ ಸಂಭಾಷಣೆ ಹಾಗೂ ಯುದ್ಧದ ರೂಪಕ ಮೆರವಣಿಗೆಯಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಮೆರವಣಿಗೆಯಲ್ಲಿ ಯುವಕರು ಮರಾಠಿ ನೃತ್ಯಗಳಿಗೆ ಕುಣಿದು ಕುಪ್ಪಳಿ ಸಿದರು. ಬೆಳಗಾವಿ ಗ್ರಾಮೀಣ ವಿಭಾಗದ ಡಿಎಸ್ಪಿ ಎಸ್.ಎಂ ಮುಚ್ಚಂಡಿ, ಸಿಪಿಐ ಮಹಾಂತೇಶ್ವರ ಹಾಗೂ ನೂರಾರು ಪೊಲೀಸರು ಭಾಗವಹಿಸಿ ಮೆರವಣಿಗೆ ಶಾಂತಿಯುತವಾಗಿ ಸಾಗುವಂತೆ ಕ್ರಮ ಕೈಗೊಂಡರು.
ಇತಿಹಾಸ ನಿರ್ಮಿಸಿದ ಛತ್ರಪತಿ ಶಿವಾಜಿ
ಶಿಂಧಿಕುರಬೇಟ (ಗೋಕಾಕ): ‘ದೇಶ ಪ್ರೇಮ ಹಾಗೂ ರಾಷ್ಟ್ರಾಭಿಮಾನದ ಸಂಕೇತವಾಗಿರುವ ಶಿವಾಜಿ ಮಹಾರಾಜರು ತಮ್ಮ 15ನೇ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವನೆಯನ್ನು ಮೈಗೂಡಿಸಿಕೊಂಡು ತಮ್ಮ ಜೀವಿತ ಅವಧಿಯಲ್ಲಿ ಸುಮಾರು 6,330 ಕೋಟೆಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ’ ಎಂದು ಶಿಕ್ಷಕ ರಾಮಚಂದ್ರ ಕಾಕಡೆ ಹೇಳಿದರು.
ಗ್ರಾಮದ ದೇಸಾಯಿ ವಾಡೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದು ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು ಸಮಾಜವನ್ನು. ಹಿಂದುಗಳನ್ನು ತುಚ್ಛವಾಗಿ ಕಾಣುತ್ತಿದ್ದ ಅಂದಿನ ಮೊಘಲರ ಕಾಲದ ವ್ಯವಸ್ಥೆಯನ್ನು ನಿವಾರಿಸಿ, ಹಿಂದು ಸಮಾಜದ ರಕ್ಷಣೆ ಹಾಗೂ ಹಿಂದುಗಳ ರಕ್ಷಣೆಗೆ ಹೋರಾಡಿದ ಶಿವಾಜಿ ಮಹಾರಾಜರು ಒಬ್ಬ ಧೀಮಂತ ಮಹಾನ ಪುರುಷ ಎಂದು ಬಣ್ಣಿಸಿದರು. ಇಂದಿನ ಅಧುನಿಕ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ಯೊಂದು ಮನೆಯಲ್ಲಿಯೂ ಶಿವಾಜಿ ಹುಟ್ಟಿ ಬರಬೇಕು ಎಂದು ಆಶಿಸಿದರು.
ಮಾರುತಿ ಕೆಂಪಣ್ಣ ಜಾಧವ ದಂಪತಿಗಳು ಅಂಬಾಭವಾನಿ ಪೂಜೆ ನೆರವೇರಿಸಿದರು. ಬಾಲ ಶಿವಾಜಿಯ ತೊಟ್ಟಿಲೋತ್ಸವ ಕಾರ್ಯಕ್ರಮ ಸುಮಂಗಲೆಯರಿಂದ ಜರುಗಿತು. ಜಯಂತಿ ನಿಮಿತ್ತ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಅಶೋಕ ನಿಲಗಾರನ್ನು ’ಸಾಹಿತ್ಯರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಭಿನವ ಸಿದ್ಧಲಿಂಗ ಸ್ವಾಮೀಜಿ ಹಾಗೂ ದಾದಾ ಸಾಹೇಬ ಮಹಾರಾ ಜರು ಸಾನ್ನಿಧ್ಯ ವಹಿಸಿದ್ದರು. ಅಮೃತ ಕಾಳ್ಯಾಗೋಳ ಆಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಕವ್ವ ಬಿರನಾಳಿ, ಉಪಾಧ್ಯಕ್ಷ ಲಾಲಾ ಮಕಾನದಾರ, ಶಿಕ್ಷಕ ಸದಾಶಿವ ಗಾಯಕವಾಡ, ಗ್ರಾ.ಪಂ. ಸದಸ್ಯರಾದ ಗುರುಸಿದ್ದಪ್ಪ ಕಡೇಲಿ, ಬಾಬು ಶಿಂಧೆ, ಅಡಿವೆಪ್ಪಾ ಚೌವ್ಹಾಣ ಉಪಸ್ಥಿತರಿದ್ದರು.
ಸುರೇಶ ಮುರುಮಕರ ಸ್ವಾಗತಿಸಿದರು. ಪುರಂದರ ಕೋಳಿ ನಿರೂಪಿಸಿದರು. ಕುಮಾರಿ ಲಕ್ಷ್ಮೀ ಕಾಳ್ಯಾಗೋಳ ವಂದಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.