ಸ್ಯಾಶೆ ನಿಷೇಧ ಆದೇಶ ಮರುಪರಿಶೀಲನೆಗೆ ಅರ್ಜಿ
ಮಂಗಳೂರು: ಗುಟ್ಕಾ ಸ್ಯಾಶೆ ನಿಷೇಧ ಆದೇಶ ಮರುಪರಿಶೀಲಿಸುವಂತೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಏ. 13ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಕೇಂದ್ರೀಯ ಅಡಿಕೆ ಮತ್ತು ಕೊಕೊ ಮಾರುಕಟ್ಟೆ ಹಾಗೂ ಸಂಸ್ಕರಣಾ ಸಹಕಾರಿ ಸಂಸ್ಥೆ (ಕ್ಯಾಂಪ್ಕೊ) ತಿಳಿಸಿದೆ.
ಗುಟ್ಕಾ ಸ್ಯಾಶೆ ನಿಷೇಧಿಸಿರುವುದರ ಪರಿಣಾಮ ಅಡಿಕೆ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದೇಶಕ್ಕೆ ಸಂಬಂಧಿಸಿದ ವಿಚಾರಣೆಗೆ ತಮ್ಮನ್ನೂ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ, ಶಿವಮೊಗ್ಗದ ಮ್ಯಾಮ್ಕೋಸ್, ಶಿರಸಿಯ ತೋಟಗಾರ್ಸ್ ಸೇಲ್ ಸೊಸೈಟಿ, ಭಾರತೀಯ ಕಿಸಾನ್ ಸಂಘ, ಎಸ್ಕೆಎಸಿಎಂಎಸ್ ಸಂಸ್ಥೆಗಳು ದಾವೆಯಲ್ಲಿ ಮಧ್ಯಪ್ರವೇಶಕ್ಕೆ ಅರ್ಜಿ ಸಲ್ಲಿಸಿವೆ ಎಂದು ‘ಕ್ಯಾಂಪ್ಕೊ’ ತಿಳಿಸಿದೆ. ಕೇರಳ ರಾಜ್ಯದಲ್ಲೂ ಅಡಿಕೆ ಬೆಳೆಗಾರರು ಅಧಿಕವಾಗಿದ್ದು, ಇವರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರವೂ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ‘ಕ್ಯಾಂಪ್ಕೊ’ ಒತ್ತಾಯಿಸಿದೆ.
ಅಡಿಕೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕ್ಯಾಂಪ್ಕೊ ನಿಯೋಗ ಈಗಾಗಲೇ ಖುದ್ದು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮನವರಿಕೆ ಮಾಡಿಕೊಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದ್ದು, ಅಡಿಕೆ ಬೆಳೆಗಾರರು ಯಾವುದೇ ವದಂತಿಗೆ ಕಿವಿಗೊಡಬಾರದೆಂದು ಎಂದು ‘ಕ್ಯಾಂಪ್ಕೊ’ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.