ಹೊಸಕೋಟೆ: ಬಿಗ್ ಟ್ರಂಕ್ ಬಸ್ಗೆ ಚಾಲನೆ

ಹೊಸಕೋಟೆ: ‘ಪಟ್ಟಣದಲ್ಲಿ ಸೂಕ್ತ ಜಾಗ ನೀಡಿದರೆ ಸಾರಿಗೆ ಇಲಾಖೆ ವತಿಯಿಂದ ಬಸ್ ನಿಲ್ದಾಣ ನಿರ್ಮಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಹೊಸಕೋಟೆಯಲ್ಲಿ ಬುಧವಾರ ನಡೆದ ಬಿಗ್ ಟ್ರಂಕ್ ಬಸ್ ಹಾಗೂ ಫೀಡರ್ ಬಸ್ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚು ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ನೂತನ ಬಸ್ ಗಳಲ್ಲಿ 31 ಮಿಡಿ ಬಸ್ ಗಳಾಗಿದ್ದು ಅವು ತಾಲ್ಲೂಕಿನ ಐದು ಮಾರ್ಗಗಳಲ್ಲಿ 81 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿವೆ. 20 ಬಸ್ ಗಳು (ಬಿಗ್ ಟ್ರಂಕ್) ಪ್ರತಿ 10 ನಿಮಿಷಕ್ಕೆ ಒಂದರಂತೆ ಎರಡು ಮಾರ್ಗಗಳಲ್ಲಿ ಪಟ್ಟಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸಲಿವೆ’ ಎಂದರು.
‘ನಗರಕ್ಕೆ ಸಂಪರ್ಕ ಕಲ್ಪಿಸಲು 12 ಕಾರಿಡಾರ್ಗಳು ಇವೆ. ಹೊಸಕೋಟೆ ಸೇರಿದಂತೆ ಈಗಾಗಲೇ ಮೂರು ಕಾರಿಡಾರ್ ಗಳಲ್ಲಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಒಂಬತ್ತು ಕಾರಿಡಾರ್ ಗಳಲ್ಲಿ ಆದಷ್ಟು ಶೀಘ್ರದಲ್ಲಿ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.ಇದಕ್ಕೂ ಮುಂಚೆ ಪಟ್ಟಣದಲ್ಲಿ ₨40 ಕೋಟಿ ವೆಚ್ಚದ ಒಳಚರಂಡಿ ಯೋಜನೆಗೆ ಮೊಯಿಲಿ ಚಾಲನೆ ನೀಡಿದರು.
‘ದೇಶದಲ್ಲೇ ಪ್ರಥಮವಾಗಿ ಹೊಸಕೋಟೆಯನ್ನು ಉಪನಗರವನ್ನಾಗಿ ಮಾಡಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ₨110 ಕೋಟಿ ಮಂಜೂರು ಮಾಡಿದೆ’ ಎಂದು ಹೇಳಿದರು. ಶಾಸಕ ಎನ್.ನಾಗರಾಜು ಮಾತನಾಡಿ, ‘ಹೊಸಕೋಟೆ ತಾಲ್ಲೂಕಿನಲ್ಲಿ ₨1,000 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.