‘ಆಲಿಕಲ್ಲಿನ ಹೊಡೆತಕ್ಕೆ ಅಮ್ಮ ನ ಉಸಿರೇ ನಿಂತಿತು’

ಬಳ್ಳಾರಿ: ‘ಕೇವಲ 10ರಿಂದ 15 ನಿಮಿಷಗಳಲ್ಲೇ ಎಲ್ಲ ಮುಗಿದು ಹೋಯಿತು. ಆಲಿಕಲ್ಲುಗಳ ಹೊಡೆತ ತಾಳಲಾರದೆ ಬಳಲಿದ ಅಮ್ಮನನ್ನು ರಕ್ಷಿಸಬೇಕೆಂದರೂ ಸಾಧ್ಯವಾಗಲಿಲ್ಲ. ಕಣ್ಣೆದುರೇ ಆಕೆಯ ಉಸಿರು ನಿಂತು ಹೋಯಿತು. ನನಗೂ ತೀವ್ರ ಪೆಟ್ಟಾಗಿದೆ. ಜತೆಯಲ್ಲಿದ್ದ ಹೆಂಡತಿ ಮತ್ತು ನಾನು ಉಳಿದಿದ್ದು ನಿಜಕ್ಕೂ ಪವಾಡ...’
ತಾಲ್ಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಆಲಿಕಲ್ಲುಗಳ ಪೆಟ್ಟು ತಾಳಲಾರದೆ ಸಾವಿಗೀಡಾದ ಲಕ್ಷ್ಮಮ್ಮ (55) ಅವರ ಪುತ್ರ ನಾಗರಾಜ, ಅಮ್ಮನನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆಯನ್ನು ಹೀಗೆ ವ್ಯಕ್ತಪಡಿಸುತ್ತಿದ್ದರೆ, ಆತನ ಕಣ್ಣಂಚಿನಿಂದ ನೀರು ಇಳಿಯುತ್ತಿತ್ತು.
ಕೃಷಿ ಕೆಲಸ ಮುಗಿಸಿ ಮನೆಯತ್ತ ಬರುತ್ತಿದ್ದವರಿಗೆ ಮಾರ್ಗ ಮಧ್ಯದಲ್ಲಿ ಎದುರಾದ ಭೀಕರ ಆಲಿಕಲ್ಲು ಮಳೆ ದಿಕ್ಕು ತೋಚದಂತೆ ಮಾಡಿತು. ಕೃಷಿಯಲ್ಲಿ ತೊಡಗಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ ಅಮ್ಮನನ್ನು ಕಳೆದುಕೊಂಡ ಯುವಕ, ಜೆಸಿಬಿ ಒಂದರಲ್ಲಿ ಹೆತ್ತ ತಾಯಿಯ ಶವವನ್ನು ಮನೆಗೆ ಸಾಗಿಸಿದ್ದು, ತನ್ನ ಜೀವನದಲ್ಲೇ ಇಂತಹ ಮಳೆಯನ್ನು ಕಂಡಿಲ್ಲ ಎಂದು ಉಸಿರು ಬಿಡದೆ ಹೇಳಿದ. ಅದು ಗಂಭೀರ ಸ್ವರೂಪದ ಮಳೆ. ಅಂದಾಜು 45 ನಿಮಿಷಗಳ ಕಾಲ ಧೋ ಎಂದು ಸುರಿದ ಮಳೆಯೊಂದಿಗೆ ಆಕಾಶದಿಂದ ಬಿದ್ದ ಆಲಿಕಲ್ಲುಗಳ ರಾಶಿ ಜನರನ್ನು ಬೆಚ್ಚಿಬೀಳಿಸಿದೆ.
ಪಕ್ಕದ ಎತ್ತಿನಬೂದಿಹಾಳ ಗ್ರಾಮದ ದಮ್ಮೂರು ಗಂಗಮ್ಮ ಆಲಿಕಲ್ಲುಗಳ ಹೊಡೆತ ತಾಳದೆ ಹೆದರಿ ಜೀವ ರಕ್ಷಣೆಗೆಂದು
ಓಡಿ ಹೋಗುವಾಗ ಬಿದ್ದು ಕೈ ಮುರಿದುಕೊಂಡಿದ್ದರೆ, ಅದೇ ಊರಿನ ಗೋವಿಂದಪ್ಪ ಮತ್ತು ನಿಂಗಪ್ಪ ಎಂಬವರ ತಲೆಗೆ ತೀವ್ರ ಪೆಟ್ಟಾಗಿದೆ.
‘ನಾವೆಲ್ಲ ಉಳಿದದ್ದೇ ವಿಸ್ಮಯ. ಒಂದು ಕಡೆ ಸಿಡಿಲು, ಗುಡುಗು ಇದ್ದುದರಿಂದ ಮರದ ಕೆಳಗೂ ಕುಳಿತಕೊಳ್ಳುವಂತಿಲ್ಲ. ಆಲಿಕಲ್ಲು ಸುರಿಯುತ್ತಿದ್ದುದರಿಂದ ಓಡಿ ಹೋಗಲೂ ಆಗದ ಸ್ಥಿತಿ ತಲುಪಿದ್ದೆವು. ಮೇಲಿನಿಂದ ಯಾರೋ ಕಲ್ಲುಗಳನ್ನು ಎತ್ತಿ ತಲೆ ಮೇಲೆ ಎಸೆಯುತ್ತಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು. ಹೇಗೋ ನಮ್ಮ ಜೀವ ಉಳಿಯಿತು’ ಎಂದು ಗ್ರಾಮದ ವುಂತಕಲ್ ರಾಮಯ್ಯ, ಕೆಂಚಪ್ಪ ‘ಪ್ರಜಾವಾಣಿ’ ಎದುರು ತಮ್ಮ ಅನುಭವ ಹಂಚಿಕೊಂಡರು.
ಕಮರಿದ ಕನಸು: ‘ಐದಾರು ತಿಂಗಳಿಂದ ಬೆಳೆಸಿದ ಜೋಳ, ಹತ್ತಿ ಕಣ್ಣೆದುರೇ ನೆಲಕಚ್ಚಿತು. ಕೀಟ, ರೋಗ ಬಾಧೆಗೊಳಗಾದರೆ ಔಷಧಿ ಸಿಂಪಡಿಸಿ ರಕ್ಷಿಸಿಕೊಳ್ಳಬಹುದು. ಆದರೆ, ಪ್ರಕೃತಿಯೇ ಮುನಿಸಿಕೊಂಡು ಬೆಳೆಯನ್ನು ನಾಶ ಮಾಡಿದರೆ ಉಳಿಸಿಕೊಳ್ಳುವುದು ಅಸಾಧ್ಯ. ಹತ್ತಾರು ಸಾವಿರ ಖರ್ಚು ಮಾಡಿ ಬೆಳೆಸಿ, ಉಳಿಸಿದ ಹತ್ತಿ, ಮೆಣಸಿನಕಾಯಿ, ಜೋಳ ಅರ್ಧ ಗಂಟೆಯಲ್ಲೇ ನೆಲದ ಪಾಲಾಯಿತು. ಮಗುವಿನ ಕೈಯಲ್ಲಿರುವ ತುತ್ತನ್ನು ಎಲ್ಲಿಂದಲೋ ಹಾರಿಬಂದ ಕಾಗೆ ಕಿತ್ತುಕೊಂಡು ಹೋದಂತಾಯಿತು’ ಎಂದು ವಿಘ್ನೇಶ್ವರ ಕ್ಯಾಂಪ್ನ ರೈತರಾದ ಕೆ. ಸಂಜೀವಪ್ಪ, ರಾಜಕುಮಾರ ಅವರು ತಿಳಿಸಿದರು.
ಇದೇ ಊರಿನ ಪಕ್ಕದಲ್ಲಿರುವ ಮಾರೆಮ್ಮ ಕ್ಯಾಂಪ್ನ ಈಶ್ವರರಾವ್ ಅವರ ತೋಟದಲ್ಲಿನ ಪಪ್ಪಾಯ ಗಿಡಗಳು ನೆಲಕಚ್ಚಿದ್ದು, ಹಣ್ಣುಗಳು ಅಪ್ರಯೋಜಕವಾಗಿವೆ. ತಾಲ್ಲೂಕಿನಲ್ಲಿ ಕಳೆದ ಐದು ದಿನಗಳಿಂದ ಸುರಿದ ಅಕಾಲಿಕ ಮಳೆ, ಬಿರುಗಾಳಿ ಆಲಿಕಲ್ಲು ಹಾವಳಿಯಿಂದ 10 ಸಾವಿರಕ್ಕೂ ಅಧಿಕ ಎಕರೆ ಭೂಮಿಯಲ್ಲಿ ಬೆಳೆದು ನಿಂತಿದ್ದ ಕೃಷಿ ಮತ್ತು ತೋಟಗಾರಿಕೆ ಫಸಲು ಮಣ್ಣುಪಾಲಾಗಿದ್ದು, ಬೇಸಿಗೆಯನ್ನು ಮರೆ ಮಾಚಿ, ಮಳೆಗಾಲದ ಅನುಭವ ನೀಡುತ್ತಿದೆ. ಶನಿವಾರವೂ ಮಳೆ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಜನರಲ್ಲಿ ಭಯ ಮುಂದುವರೆದಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.