ಗದಗ: ನಗರದ ಹುಡ್ಕೋ ಕಾಲೊನಿಯ ವಾರ್ಡ್ ನಂ. 34 ರಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಿ ಸಿರುವ ಸುವರ್ಣ ಸ್ವಾತಂತ್ರ್ಯೋತ್ಸವ ಉದ್ಯಾನವನ್ನು ಶುಕ್ರವಾರ ಸಾರ್ವಜನಿಕರ ಸೇವೆಗೆ ಸಮರ್ಪಿ ಸಲಾಯಿತು.
ನಗರದ ಹುಡ್ಕೋ ಕಾಲೊನಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಶಾಸಕ ಶ್ರೀಶೈಲಪ್ಪ ಬಿದರೂರ ರಿಬ್ಬನ್ ಕತ್ತರಿಸುವ ಮೂಲಕ ಉದ್ಯಾನ ಸಮರ್ಪಿಸಿದರು. ನಂತರ ಮಾತನಾಡಿ, ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಉದ್ಯಾನ ನಿರ್ಮಿಸ ಲಾಗುತ್ತಿದೆ. ಗದಗ-ಬೆಟಗೇರಿ ರಸ್ತೆ ಕಾಮಗಾರಿಗೆ ರೂ. 30 ಕೋಟಿ ಅನುದಾನ ಬಂದಿದ್ದು, ನಗರದ ಮುಖ್ಯ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆಯಲ್ಲದೇ 2 ನೇ ಹಂತದ ಅಭಿವೃಧ್ಧಿ ಕಾರ್ಯಕ್ಕೆ ರೂ. 30 ಕೋಟಿ ಬಿಡುಗಡೆಯಾಗಿದ್ದು, ಅದಕ್ಕೂ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ರಸ್ತೆಗಳಿಗೆ 1ನೇ ಹಂತದಲ್ಲಿ ಪ್ರಾಧಾನ್ಯತೆ ನೀಡಲಾಗುತ್ತಿದ್ದು, 2 ನೇ ಹಂತದಲ್ಲಿ ಆಂತರಿಕ ರಸ್ತೆಗಳಿಗೆ ಆದ್ಯತೆ ನೀಡಲಾಗುವುದು. ರೂ. 92 ಕೋಟಿ ವೆಚ್ಚದಲ್ಲಿ 2 ನೇ ಹಂತದ ಕುಡಿಯುವ ನೀರಿನ ಕಾಮಗಾರಿಗೆ ಮಂಜೂರಾತಿ ದೊರೆತಿದೆ. ರೂ. 20 ಕೋಟಿ ಮೊದಲ ಹಂತದ ಟೆಂಡರ್ ಅಂತಿಮಗೊಂಡಿದೆ. 2ನೇ ಹಂತದಲ್ಲಿ ರೂ. 70 ಕೋಟಿಗೆ ಟೆಂಡರ್ ಕರೆಯಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅವಳಿ ನಗರಕ್ಕೆ 24*7 ಕುಡಿಯುವ ನೀರು ಒದಗಿಸಲಾ ಗುವುದು ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.