ಬೆಂಗಳೂರು: ಭಾರತದ ಸಾಂಸ್ಕೃತಿಕ ಐತಿಹ್ಯದ ರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ರಮಣ ಮಹರ್ಷಿ ಅಧ್ಯಯನ ಕೇಂದ್ರವು ಇದೇ 21 ರಿಂದ 23ರವರೆಗೆ 35ನೇ ರಾಷ್ಟ್ರೀಯ ವಿಚಾರ ಗೋಷ್ಠಿ ಮತ್ತು ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದೆ.
ಸಂಜಯನಗರದಲ್ಲಿರುವ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ವಿಚಾರಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
21 ರಂದು `ಅಂದಂದಿನ ಅಂದ~ ಮತ್ತು `ಭಗವಾನರಿಗೆ ಪ್ರಿಯವು ಯಾವುದು~ ಸಂಗೀತ ರೂಪಕಗಳು, 22ರಂದು `ಸನ್ನಿಧಿಗೆ ನವ ಮಾರ್ಗಗಳು~ ಹಾಗೂ ವಿವಿಧ ಸಂಗೀತ ರೂಪಕಗಳು, 23ರಂದು `ವರ್ತಮಾನ ರಮಣ~ ಬಹುಮಾಧ್ಯಮ ನೃತ್ಯ ರೂಪಕ ನಡೆಯಲಿದೆ.
ವರ್ತಮಾನವನ್ನು ಮರುಶೋಧನೆಗೆ ಒಳ ಪಡಿಸದಿದ್ದರೆ `ಜೀವನ~ ತನ್ನ ಅರ್ಥ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುತ್ತದೆ ಎಂಬ ರಮಣ ಮಹರ್ಷಿಗಳ ನುಡಿಯನ್ನು ಜನರಲ್ಲಿ ಬಿತ್ತುವ ಸಲುವಾಗಿ ಕಳೆದ ಮೂರು ದಶಕಗಳಿಂದ 35 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಗೋಷ್ಠಿಗಳು, 1000 ಕ್ಕೂ ಹೆಚ್ಚು ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಸಂಸ್ಥೆಯು ಹಮ್ಮಿಕೊಂಡು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.