ಬೆಂಗಳೂರು: `ನಗರದ ಪ್ರಸಿದ್ಧ ದ್ರೌಪದಿ ದೇವಿ `ಕರಗ' ಉತ್ಸವವನ್ನು ಏಪ್ರಿಲ್ 24 ರಂದು ಹಮ್ಮಿಕೊಳ್ಳಲಾಗಿದೆ' ಎಂದು ವಹ್ನಿಕುಲ ಕ್ಷತ್ರಿಯ (ತಿಗಳರ) ವೀರಕುಮಾರರ ಸಂಘದ ಉಪಾಧ್ಯಕ್ಷ ಚಲಕರಿ ನಾರಾಯಣಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪ್ರದಾಯದಂತೆ ಪ್ರತಿ ಚೈತ್ರ ಪೌರ್ಣಿಮೆಯಂದು `ಕರಗ' ಉತ್ಸವ ನಡೆಸಲಾಗುತ್ತಿತ್ತು. ಏ. 25 ರಂದು ಚೈತ್ರ ಪೌರ್ಣಿಮೆ ದಿನ ಚಂದ್ರ ಗ್ರಹಣವಿರುವುದರಿಂದ ಏ. 24 ರಂದು ಉತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.
ಧರ್ಮರಾಯಸ್ವಾಮಿ ರಥೋತ್ಸವ ಮತ್ತು ಧ್ವಜಾರೋಹಣದ ಮೂಲಕ ಏ. 16ರಂದು ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದರು.
ಉತ್ಸವ ಪ್ರಯುಕ್ತ ಏ. 24 ರಂದು ರುದ್ರಪಟ್ಟಣ ಕೇಶವಮೂರ್ತಿ, ಆರ್.ಕೆ.ಪ್ರಕಾಶ್ ತಂಡದವರಿಂದ ವೀಣಾವಾದನ, ಸೀತಾರಾಂ ಮುನಿಕೋಟಿ ಅವರಿಂದ `ದೌಪದಿ ವೈಭವ' ಕಥಾ ಕಾಲಕ್ಷೇಪ ಹಾಗೂ ಮತ್ತಿತರರ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಂ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಎಸ್.ಸುರೇಶ್ರಾಜು ಮತ್ತಿತರರು ಉಪಸ್ಥಿತರಿದ್ದರು.