ರಾಮದುರ್ಗ: ತಾಲ್ಲೂಕಿನ ಚುಂಚನೂರು ಮತ್ತು ಹಣಮಸಾಗರ ಗ್ರಾಮಗಳ ಸುತ್ತಲಿನ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸುಮಾರು 25 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.
ಒಂದು ಬದಿಗೆ ಹೊತ್ತಿದ ಬೆಂಕಿ ನಂದಿಸಲು ಗ್ರಾಮಸ್ಥರು ಶ್ರಮಿಸುತ್ತಿದ್ದಂತೆ ಮತ್ತೊಂದೆಡೆಗೆ ಬೆಂಕಿ ಆವರಿಸಿ ವರ್ಷವಿಡೀ ಶ್ರಮಪಟ್ಟು ಬೆಳೆಸಿದ ಕಬ್ಬು ರೈತರ ಕಣ್ಣ ಮುಂದೆಯೇ ಬೆಂಕಿಯಲ್ಲಿ ಬೆಂದು ಹೋಯಿತು.
ಸುದ್ದಿ ತಿಳಿದ ತಕ್ಷಣ ಮುನವಳ್ಳಿ ಮತ್ತು ಸವದತ್ತಿಯಿಂದ ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಗ್ರಾಮಸ್ಥರ ಪ್ರಯತ್ನವೂ ಫಲಕಾರಿಯಾಗದೆ ಸುಮಾರು 25 ಎಕರೆಯಷ್ಟು ಕಬ್ಬು ಬೆಂಕಿಯಲ್ಲಿ ಬೆಂದು ಹೋಯಿತು.
ಕಲ್ಲೋಳ್ಳೆಪ್ಪ ನಟಗಲ್ ಅವರ 4 ಎಕರೆ ಕಬ್ಬು, ಮಾರುತಿ ಮಾಲದಿನ್ನಿ ಅವರ 3 ಎಕರೆ, ಮಲ್ಲಪ್ಪ ಕತ್ತಿ ಅವರ 1 ಎಕರೆ, ಬಸಪ್ಪ ಮಾಲದಿನ್ನಿ ಅವರ 1 ಎಕರೆ, ಅಣ್ಣಪ್ಪ ನಟಗಲ್ ಅವರ 3 ಎಕರೆ, ಮಾರುತಿ ಮಾಲದಿನ್ನಿ ಅವರ 3 ಎಕರೆ, ಭೀಮಪ್ಪ ಮಾಲದಿನ್ನಿ ಅವರ 1 ಎಕರೆ ಮತ್ತು ವಿ. ಡಿ. ಬೊಮ್ಮನ್ನವರ ಅವರ 3 ಎಕರೆ ಪ್ರದೇಶದ ಕಬ್ಬು ಸುಟ್ಟು ಹೋಗಿದೆ.
ಸ್ಥಳಕ್ಕೆ ಧಾವಿಸಿದ ಮಾಜಿ ಶಾಸಕ ಮತ್ತು ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಹಾದೇವಪ್ಪ ಯಾದವಾಡ, ಉಪಾಧ್ಯಕ್ಷ ಜಿ. ಜಿ. ಪಾಟೀಲ, ನಿರ್ದೇಶಕ ಬಿ. ಎಂ. ತುಪ್ಪದ ಕಬ್ಬು ಸುಟ್ಟ ಸ್ಥಳಗಳನ್ನು ಪರಿಶೀಲಿಸಿದರು.
ಸವದತ್ತಿಯ ರೇಣುಕಾ ಸಕ್ಕರೆ ಕಾರ್ಖಾನೆಯ ಕಬ್ಬು ಕಡಿಯುವ ತಂಡದವರು ನಿರಂತರ ಕೆಲಸದಲ್ಲಿ ತೊಡಗಿ ಕಬ್ಬು ಕಟಾವು ನಡೆಸಿದ್ದಾರೆ.