ಇಸ್ಲಾಮಾಬಾದ್ (ಪಿಟಿಐ): ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪರಸ್ಪರ ಚರ್ಚಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಭಾರತ ಕಾನೂನು ತಜ್ಞರ ತಂಡವು ತನ್ನ ಪ್ರವಾಸವನ್ನು ಒಂದು ದಿನ ವಿಸ್ತರಿಸಿದೆ.
ಎರಡು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಗೃಹ, ವಿದೇಶಾಂಗ ಇಲಾಖೆ ಅಧಿಕಾರಿಗಳು ಸೇರಿರುವ ನಾಲ್ವರು ಕಾನೂನು ತಜ್ಞರ ನಿಯೋಗವು ಪಾಕ್ ನಿಯೋಗದ ಮುಖ್ಯಸ್ಥ ಅಟಾರ್ನಿ ಜನರಲ್ ಇರ್ಫಾನ್ ಖಾದಿರ್ ಅವರ ಜತೆ ಮಾತುಕತೆ ನಡೆಸಿ ಶನಿವಾರ ವಾಪಸಾಗಬೇಕಿತ್ತು.
ಆದರೆ ಸಮಾಲೋಚನೆಯು ನಿಧಾನಗತಿಯಲ್ಲಿ ಸಾಗಿದ್ದರಿಂದ ಸೋಮವಾರದವರೆಗೆ ನಿಯೋಗವು ತನ್ನ ಪ್ರವಾಸವನ್ನು ವಿಸ್ತರಿಸಿದೆ. ಮಾತುಕತೆ ವೇಳೆ ಹಲವು ವಿವಾದಾತ್ಮಕ ವಿಷಯಗಳ ಕುರಿತು ಮತ್ತು ಮುಂಬೈ ದಾಳಿಯ ಸಾಕ್ಷಿಗಳ ಮರುವಿಚಾರಣೆಯ ಬಗ್ಗೆ ಉಭಯ ದೇಶಗಳು ಚರ್ಚೆ ನಡೆಸಿವೆ.