ನವದೆಹಲಿ (ಪಿಟಿಐ):ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ, ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚಳ ಸೇರಿದಂತೆ ಹಲವು ಆರ್ಥಿಕ ಸವಾಲುಗಳ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಜುಲೈ 29ರಂದು ಉದ್ಯಮ ಪ್ರಮುಖರ ಜತೆ ಚರ್ಚೆ ನಡೆಸಲಿದ್ದಾರೆ.
ಆರ್ಥಿಕ ಚೇತರಿಕೆಗೆ ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಪ್ರಧಾನಿ ಉದ್ಯಮ ತಜ್ಞರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ಪ್ರಕಟಣೆಯಲ್ಲಿ ತಿಳಿಸಿದೆ. ಆಮದು ಹೊರೆ ಹೆಚ್ಚಳದಿಂದ `ಸಿಎಡಿ' ಕಳೆದ ಹಣಕಾಸು ವರ್ಷದಲ್ಲಿ `ಜಿಡಿಪಿ'ಯ ಶೇ 4.8ಕ್ಕೆ ಏರಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದನ್ನು ಶೇ 4.2ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
ರೂಪಾಯಿ ಅಪಮೌಲ್ಯ ತಪ್ಪಿಸುವ ಕುರಿತು ಪ್ರಧಾನಿ ತಜ್ಞರ ಜತೆಗೆ ಮಾತುಕತೆ ನಡೆಸಲಿದ್ದಾರೆ. ದೆಹಲಿ-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್(ಡಿಎಂಐಸಿ), ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ (ಸಿಬಿಐಸಿ) ಮತ್ತು ಅಮೃತಸರ- ದೆಹಲಿ-ಕೋಲ್ಕತ್ತ ಇಂಡಸ್ಟ್ರಿಯಲ್ ಕಾರಿಡಾರ್ (ಎಡಿಕೆಐಸಿ) ಕುರಿತೂ ಮಾತುಕತೆ ನಡೆಯಲಿದೆ.