ನವದೆಹಲಿ (ಪಿಟಿಐ): 2ಜಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐವರು ಕಾರ್ಪೊರೇಟ್ ದಿಗ್ಗಜರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಇದೇ 31ಕ್ಕೆ ಮುಂದೂಡಿತು.
ಯೂನಿಟೆಕ್ ವೈರ್ಲೆಸ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂ ನಿರ್ದೇಶಕ ವಿನೋದ್ ಗೋಯೆಂಕಾ ಹಾಗೂ ಅನಿಲ್ ಅಂಬಾನಿ ರಿಲಯನ್ಸ್ ಸಮೂಹದ ಕಾರ್ಯ ನಿರ್ವಹಣಾಧಿಕಾರಿಗಳಾದ ಹರಿ ನಾಯರ್, ಗೌತಮ್ ದೋಶಿ ಮತ್ತು ಸುರೇಂದ್ರ ಪಿಪರಾ ದೀಪಾವಳಿಯನ್ನು ಸೆರೆಮನೆಯಲ್ಲಿ ಆಚರಿಸದೇ ವಿಧಿ ಇಲ್ಲ.
ದೆಹಲಿ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯ ತಮ್ಮ ಜಾಮೀನು ಅರ್ಜಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಇವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
20ಕ್ಕೆ ಆದೇಶ: ಪ್ರಕರಣದಲ್ಲಿ ದೂರಸಂಪರ್ಕ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಇತರರಿಗೆ ಸಂಬಂಧಿಸಿದ ದೋಷಾರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಇದೇ 22ರಂದು ಆದೇಶ ನೀಡಲಿದೆ. ಕನಿಮೊಳಿ ಸೇರಿದಂತೆ ವಿವಿಧ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಇದೇ 24ರಿಂದ ಆರಂಭಿಸುವುದಾಗಿಯೂ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಹೇಳಿದ್ದಾರೆ.