ಉಡುಪಿ: ಜಿಲ್ಲೆಯಲ್ಲಿ ಈ ವರ್ಷದ ಜನವರಿ 1ರಿಂದ ಜೂನ್ 30ರವರೆಗೆ ಒಟ್ಟು 215 ಕಳವು ಪ್ರಕರಣಗಳು ದಾಖಲಾಗಿದ್ದು ರೂ.1.93 ಕೋಟಿ ಮೌಲ್ಯದ ಸ್ವತ್ತು ಕಳುವಾಗಿದೆ. ಈ ಪೈಕಿ ರೂ 72.28 ಲಕ್ಷ ಮೌಲ್ಯದ ಸ್ವತ್ತುಗಳು ಪತ್ತೆಯಾಗಿದ್ದು, ರೂ.36.13 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಿಲ್ಲಾ ಪೊಲೀಸ್ ಕಚೇರಿಯ ಮೂಲಕ ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಯಿತು.
ಪೊಲೀಸರು ವಶಪಡಿಸಿಕೊಂಡ ಕಳವು ಸ್ವತ್ತುಗಳ ಪ್ರದರ್ಶನ ನಗರದ ಡಿ.ಎ.ಆರ್ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿತ್ತು. ಸ್ವತ್ತುಗಳನ್ನು ವಾರೀಸುದಾರರಿಗೆ ಹಸ್ತಾಂತರಿಸಿದ ಪೊಲೀಸ್ ವರಿಷ್ಠ ರವಿಕುಮಾರ್ ಮಾತನಾಡಿ, `ವರದಿಯಾಗಿದ್ದ ಪ್ರಕರಣಗಳಲ್ಲಿ ಒಟ್ಟು 87 ಪ್ರಕರಣಗಳನ್ನು ಪತ್ತೆ ಮಾಡಿದ್ದು 126 ಆರೋಪಿಗಳನ್ನು ಬಂಧಿಸಲಾಗಿದೆ.
ಮೂರು ಉಪವಿಭಾಗಗಳಿಂದ 1.92 ಕೆ.ಜಿ. ಚಿನ್ನಾಭರಣ ಹಾಗೂ 5.5ಕೆಜಿ ಬೆಳ್ಳಿ ಆಭರಣ, ಟಾಟಾ ಗ್ರಾಂಡ್ ಸುಮೋ, ಕ್ವಾಲಿಸ್ ಹಾಗೂ ಮಾರುತಿ ಕಾರು ಸೇರಿದಂತೆ ವಿವಿಧ ಸ್ವತ್ತುಗಳನ್ನು ಹಸ್ತಾಂತರಿಸಲಾಗುವುದು~ ಎಂದರು.
ವಿಭಾಗಾವಾರು ವಿವರ: ಉಡುಪಿ ಉಪ ವಿಭಾಗದಲ್ಲಿ ರೂ.23.01 ಲಕ್ಷ ಮೌಲ್ಯದ ಚಿನ್ನಾಭರಣ, ರೂ.2.83 ಲಕ್ಷ ಮೌಲ್ಯದ ಬೆಳ್ಳಿ, ರೂ.1.65ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿ , ರೂ.42 ಸಾವಿರ ಮೌಲ್ಯದ 6 ಮೊಬೈಲ್, ರೂ. 4.37 ಲಕ್ಷದ 18 ಮೋಟಾರ್ ಬೈಕ್, ರೂ.9.80 ಲಕ್ಷ ಮೌಲ್ಯದ ಕಾರು/ಜೀಪು, 9.83 ಲಕ್ಷ ನಗದು, ರೂ.10 ಸಾವಿರ ಮೌಲ್ಯದ ಕೇಬಲ್, ರೂ.10 ಸಾವಿರ ಮೌಲ್ಯದ ಸೆಂಟ್ರಿಂಗ್ ಶೀಟ್ ಸೇರಿದಂತೆ ಒಟ್ಟು ರೂ.52.12 ಲಕ್ಷ ಮೊತ್ತದ ಸ್ವತ್ತುಗಳನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ.
ಕುಂದಾಪುರ ಉಪವಿಭಾಗದಲ್ಲಿ ರೂ.3.91 ಲಕ್ಷ ಮೌಲ್ಯದ ಚಿನ್ನಾಭರಣ, ರೂ.2 ಲಕ್ಷ ಮೌಲ್ಯದ ಬೆಳ್ಳಿ, ರೂ.26 ಲಕ್ಷ ಮೌಲ್ಯದ ಬೈಕ್, ರೂ.23 ಸಾವಿರ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿ, ರೂ.4 ಸಾವಿರ ಮೌಲ್ಯದ 2 ಸಿಲಿಂಡರ್, ರೂ.3 ಸಾವಿರ ಮೌಲ್ಯದ ಡೀಸೆಲ್ ಸೇರಿದಂತೆ ಒಟ್ಟು ರೂ.6.47ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಕಳ ಉಪವಿಭಾಗದಲ್ಲಿ ರೂ.11.48ಲಕ್ಷ ಮೌಲ್ಯದ ಚಿನ್ನಾಭರಣ, ರೂ.14 ಲಕ್ಷ ಮೌಲ್ಯದ ಬೆಳ್ಳಿ, ರೂ.40 ಸಾವಿರ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿ, ರೂ.700 ಮೌಲ್ಯದ ಮೊಬೈಲ್, ರೂ.20 ಸಾವಿರದ ಬೈಕ್, ರೂ.1 ಲಕ್ಷ ಮೌಲ್ಯದ ಕಾಳುಮೆಣಸು, ರೂ.36 ಸಾವಿರ ಮೌಲ್ಯದ ಗೇರುಬೀಜ, ರೂ.2 ಸಾವಿರ ನಗದು ಮತ್ತು ರೂ.8 ಸಾವಿರ ಮೌಲ್ಯದ ಕೇಬಲ್ ಸೇರಿದಂತೆ ರೂ.13.68 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಎಸ್ಪಿ ವೆಂಕಟೇಶಪ್ಪ, ಕುಂದಾಪುರದ ಎಎಸ್ಪಿ ರಾಮನಿವಾಸ ಸೆಪಟ್ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.