ಹುಬ್ಬಳ್ಳಿ: ಒಂದು ಬಟ್ಟಲು ಚಟ್ನಿ, ಒಂದು ಗ್ಲಾಸ್ ನೀರಿನೊಂದಿಗೆ ಕೇವಲ 20 ನಿಮಿಷದಲ್ಲಿ 40 ಇಡ್ಲಿ ತಿಂದು ತೇಗಿದ ಸಿದ್ದಪ್ಪ ಕಂಬಳಿ ಇಲ್ಲಿ ಬುಧವಾರ ನಡೆದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.
ನಗರದ ಅಳಗುಂಡಗಿ ಓಣಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಅವರು ಈ ಸಾಹಸ ಮೆರೆದರು. 36 ಇಡ್ಲಿ ತಿಂದ ಗುರುಸಿದ್ದಪ್ಪ ಗುಳೇದಗುಡ್ಡ ದ್ವಿತೀಯ, 32 ಇಡ್ಲಿ ತಿಂದ ರಾಜಾಸಾಬ ನದಾಫ್ ತೃತೀಯ ಸ್ಥಾನ ಪಡೆದರು.
ಸ್ಪರ್ಧೆಯಲ್ಲಿ ಒಟ್ಟು 25 ಜನ ಭಾಗವಹಿಸಿದ್ದರು. ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಅವರು ಡಾ.ವೀರೇಶ ಪಾಟೀಲ ಅವರಿಗೆ ಇಡ್ಲಿ ತಿನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
`ಈ ಮೊದಲು ನನ್ನ ಗೆಳೆಯರು ನೀನು ಬಾಳ ತಿನ್ನುತ್ತಿ ಅನ್ನುತ್ತಿದ್ದರು. ಆದರೆ ಇಂದು ಇಷ್ಟು ತಿಂದು ಪ್ರಥಮ ಸ್ಥಾನ ಪಡೆದ ನಂತರ ಅವರು ಅನ್ನುತ್ತಿರುವುದು ಸರಿ ಎಂದು ಅನಿಸುತ್ತಿದೆ~ ಎಂದು ಪ್ರಥಮ ಸ್ಥಾನ ಪಡೆದ ಸಿದ್ದಪ್ಪ ಕಂಬಳಿ ತಿಳಿಸಿದರು.
`ನಾನು ಈ ಸ್ಪರ್ಧೆಯಲ್ಲಿ ಬಹುಮಾನ ಪಡೆಯುತ್ತೇನೆ ಎಂದು ತಿಳಿದ ಗೆಳೆಯರು ಈ ಸ್ಪರ್ಧೆಯ ಪ್ರವೇಶ ಶುಲ್ಕವನ್ನು ತುಂಬಿ, ನೀನು ಇದರಲ್ಲಿ ಬಹುಮಾನ ಪಡೆಯುತ್ತಿ ಎಂದು ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆದ್ದರಿಂದ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗೆಳೆಯರ ಆಸೆ ಈಡೇರಿಸಿದ್ದೇನೆ~ ಎಂದರು.
`ಯಾವುದರಲ್ಲೇ ಆಗಲಿ ಸಾಧನೆ ಮಾಡಬೇಕು. ಇದೇ ರೀತಿ ಮುಂದಿನ ಬಾರಿ ಮುದ್ದೆ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗುವುದು~ ಎಂದು ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ನುಡಿದರು.
`ಈ ಮೊದಲು ಗೌರಿ ಹುಣ್ಣಿಮೆ ಅಂಗ ವಾಗಿ ಹೆಣ್ಣುಮಕ್ಕಳಿಗೆ ರಂಗೋಲಿ, ಮೆಹಂದಿ ಸ್ಪರ್ಧೆ ಸೇರಿ ದಂತೆ ವಿವಿಧ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಗಂಡು ಮಕ್ಕಳಿಗಾಗಿ ಈ ಬಾರಿ ಒಂದು ಸ್ಪರ್ಧೆ ಏರ್ಪಡಿಸಬೇಕು ಎಂದು ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು~ ಎಂದು ಎಚ್. ಡಿ. ಕುಮಾರಸ್ವಾಮಿ ಆಭಿಮಾನಿ ಬಳಗದ ಅಧ್ಯಕ್ಷ ವಿಜಯ ಅಳಗುಂಡಗಿ ಹೇಳಿದರು.
ರಾಕೇಶ ಬಸವರಾಜ, ಪ್ರಭು ಪಟ್ಟಣಶೆಟ್ಟಿ, ಡಾ.ಎಂ.ಸಿ.ಸಜ್ಜನವರ, ಲಿಂಗರಾಜ ಕಂಬಳಿ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಇದ್ದರು. ವಿಜಯ ಅಳಗುಂಡಗಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.