ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಮೇಲೆ ಕಣ್ಣಿಟ್ಟವರ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಿದ್ದು, 50ಕ್ಕೂ ಹೆಚ್ಚು ಆಕಾಂಕ್ಷಿಗಳು ಆಯ್ಕೆ ಬಯಸಿ ಉನ್ನತ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
ಕುಲಪತಿ ಹುದ್ದೆಗೆ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿರುವುದು ಇದೇ ಮೊದಲು. ಈ ಮೊದಲು ಸರ್ಕಾರ ನೇಮಕ ಮಾಡುವ ಶೋಧನಾ ಸಮಿತಿ ಕುಲಪತಿಗಳ ಹುದ್ದೆಗೆ ಆಯ್ಕೆ ಮಾಡುತ್ತಿತ್ತು. ಆದರೆ ಯುಜಿಸಿ ಹೊಸ ನಿಯಮಾವಳಿ ಪ್ರಕಾರ ಕುಲಪತಿ ಹುದ್ದೆ ಬಯಸುವರು ಅರ್ಜಿ ಸಲ್ಲಿಸಬೇಕು. ನಂತರ ಶೋಧನಾ ಸಮಿತಿ ಅರ್ಜಿ ಸಲ್ಲಿಸಿದವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತದೆ.
ಡಾ.ಎಸ್.ಸಿ. ಶರ್ಮಾ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ಕುಲಪತಿ ಸ್ಥಾನ ಖಾಲಿ ಇದ್ದು, ಸರ್ಕಾರ ಹೊಸಬರನ್ನು ನೇಮಕ ಮಾಡಬೇಕಾಗಿದೆ.
ತುಮಕೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಿ.ಶಿವಲಿಂಗಯ್ಯ, ರಾಜೀವ್ಗಾಂಧಿ ವಿ.ವಿ ಕುಲಸಚಿವ ಅಶೋಕ್ ಕುಮಾರ್, ಮೈಸೂರು ವಿ.ವಿ. ಅರ್ಥಶಾಸ್ತ್ರ ವಿಭಾಗದ ಒಡೆಯರ್ ಡಿ.ಹೆಗ್ಗಡೆ, ಜೈನಾಲಜಿ ವಿಭಾಗದ ಪದ್ಮಾ ಶೇಖರ್, ಗುಲ್ಬರ್ಗಾ ವಿ.ವಿ ಕನ್ನಡ ವಿಭಾಗದ ಮಲ್ಲಿಕಾ ಘಂಟಿ, ಪಿ.ಕೆ.ಖಂಡೋಬಾ, ಮಂಗಳೂರು ವಿ.ವಿ ಸಮಾಜಶಾಸ್ತ್ರ ವಿಭಾಗದ ಜೋಗನ್ ಶಂಕರ್, ಬೆಂಗಳೂರು ವಿ.ವಿ ವಿಜ್ಞಾನ ವಿಭಾಗ ರಂಗಸ್ವಾಮಿ, ರಾಮಚಂದ್ರ ಸ್ವಾಮಿ, ಎ.ಎಂ. ತಳವಾರ್ ಹಾಗೂ ಕರ್ನಾಟಕ ವಿ.ವಿ ರಸಾಯನಶಾಸ್ತ್ರ ವಿಭಾಗದ ಹಿಂಚಿಗೇರಿ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.