ಕೋಲಾರ: ಮುನ್ಸೂಚನೆ ಇಲ್ಲದೆ ನಗರಸಭೆ ಸಿಬ್ಬಂದಿ ಪೆಟ್ಟಿಗೆ ಅಂಗಡಿ ತೆರವು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಬುಧವಾರ ವ್ಯಾಪಾರಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ನಂತರ ನಗರಸಭೆಗೆ ತೆರಳಿ ಅಲ್ಲಿಯೂ ಧರಣಿ ನಡೆಸಿದರು.
ಬೆಳಿಗ್ಗೆ 8.30ಕ್ಕೆ ನಗರಸಭೆ ಆಯುಕ್ತೆ ಶಾಲಿನಿ ತಮ್ಮ ಸಿಬ್ಬಂದಿಯೊಡನೆ ನಗರದ ಮಾರುಕಟ್ಟೆ ಹಿಂಭಾಗದ ರಸ್ತೆಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಎರಡು ಅಂಗಡಿ ತೆರವುಗೊಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸುಲಭ್ ಶೌಚಾಲಯದ ಮುಂದೆಯೇ ಇದ್ದ ಪೆಟ್ಟಿಗೆ ಅಂಗಡಿ, ಪಕ್ಕದ ಬಾಳೆ ಹಣ್ಣಿನ ಮಂಡಿ ತೆರವುಗೊಳಿಸಲಾಯಿತು.
ನಂತರ ಎಂ.ಬಿ.ರಸ್ತೆಯಲ್ಲಿರುವ ಪೆಟ್ಟಿಗೆ ಅಂಗಡಿ ತೆರವುಗೊಳಿಸುವ ಸಂದರ್ಭ ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿ ತಡೆಯೊಡ್ಡಿದರು. ಆದರೂ ಸಿಬ್ಬಂದಿ ಪೆಟ್ಟಿಗೆ ಅಂಗಡಿ ಎತ್ತಂಗಡಿ ಮಾಡಿದರು.
ನಂತರವೂ ಪ್ರತಿರೋಧ ಮುಂದುವರಿಸಿದ ಅಂಗಡಿ ಮಾಲೀಕರು, ನಗರಸಭೆ ಟ್ರ್ಯಾಕ್ಟರ್ ಅನ್ನು ಹಿಡಿದಿಟ್ಟುಕೊಂಡರು. ನ್ಯಾಯ ಸಿಗುವ ತನಕ ಟ್ರ್ಯಾಕ್ಟರ್ ಅನ್ನು ನಗರಸಭೆ ವಶಕ್ಕೆ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಧರಣಿ: ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ನಾಜಿಯಾ ಬಂದು ಸಮಾಧಾನ ಮಾಡಿ, ನಿಯಮ ವಿವರಿಸಿ ತೆರಳಿದ ಬಳಿಕವೂ ಧರಣಿ ನಿಲ್ಲಲಿಲ್ಲ. ಮಾರುಕಟ್ಟೆ ಬಳಿ ಅಂಗಡಿ ಮಾಲೀಕರೂ ಸೇರಿದಂತೆ ಹಲವರು ಎಂ.ಜಿ.ಚೌಕದಲ್ಲಿ ದಿಢೀರನೆ ರಸ್ತೆ ತಡೆ ಮಾಡಿ ಧರಣಿ ಕುಳಿತರು.
ಅಲ್ಲಿಂದ ನಗರಸಭೆಗೆ ತೆರಳಿ ಅಲ್ಲಿ ಧರಣಿ ಮುಂದುವರಿಸಿದರು. ನಗರಸಭೆ ಅಧ್ಯಕ್ಷೆ, ಆಯುಕ್ತೆ ವಿರುದ್ಧ ಧಿಕ್ಕಾರ ಕೂಗಿದರು.
ಭರವಸೆ: ತೆರವುಗೊಳಿಸುವ ಅಂಗಡಿಗಳನ್ನು ಮತ್ತೆ ಅದೇ ಸ್ಥಳದಲ್ಲಿಟ್ಟು ವ್ಯಾಪಾರ ನಡೆಸುವಂತೆ ನಗರಸಭೆ ಆಯುಕ್ತರು ಸೂಚಿಸಿದ್ದಾರೆ. ರಂಜಾನ್, ಗೌರಿ-ಗಣೇಶ ಹಬ್ಬದ ಬಳಿಕ ಪೆಟ್ಟಿಗೆ ಅಂಗಡಿ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಎಂದು ಅಂಗಡಿಯೊಂದರ ಮಾಲೀಕ ಕೌಸಿಫ್ ತಿಳಿಸಿದ್ದಾರೆ.