ದಾವಣಗೆರೆ: ಜಿಲ್ಲೆಯಲ್ಲಿ ಅಂಗಾಂಶ ಕೃಷಿ (ಟಿಶ್ಯು ಕಲ್ಚರ್) ಬಾಳೆ ಬೆಳೆಯುವ ಪ್ರದೇಶ ವಿಸ್ತರಣೆಯಾಗುತ್ತಿದ್ದು, ರಾಜ್ಯದಲ್ಲಿ ಅಗ್ರಸ್ಥಾನಕ್ಕೆ ಏರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 800 ಹೆಕ್ಟೇರ್ ಪ್ರದೇಶದಲ್ಲಿ (ಕಂದುಬಾಳೆ ಸೇರಿ) ಬಾಳೆ ಬೆಳೆಯಲಾಗುತ್ತಿದೆ. ಈ ಪೈಕಿ, 500ಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ಅಂಗಾಂಶ ಕೃಷಿ ಬಾಳೆ ಕಂಡುಬರುತ್ತಿದೆ. ಪ್ರಸ್ತುತ, ಜಿಲ್ಲೆಯು ರಾಜ್ಯದಲ್ಲಿ 4ನೇ ಸ್ಥಾನದಲ್ಲಿದ್ದು, ಇನ್ನೂ ಹೆಚ್ಚಿನ ಪ್ರದೇಶ ವಿಸ್ತರಣೆಯ ಉದ್ದೇಶ ಹೊಂದಲಾಗಿದೆ.
ಅಂಗಾಂಶ ಕೃಷಿ ಬಾಳೆ ಬೆಳೆಯುವುದನ್ನು ಪ್ರೋತ್ಸಾಹಿಸ ಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಎಕರೆಗೆ ್ಙ 45 ಸಾವಿರ ಸಹಾಯಧನ ಕಲ್ಪಿಸಲಾಗುತ್ತಿದೆ. ಕಡ್ಡಾಯವಾಗಿ ಅಂಗಾಂಶ ಕೃಷಿ ಬಾಳೆ ಬೆಳೆಯುವವರು, ಹನಿ ನೀರಾವರಿ ಪದ್ಧತಿ ಅನುಸರಿಸುವವರು, 6/6 ಅಂತರದಲ್ಲಿ ಗಿಡ ಬೆಳೆಸಬೇಕು ಎಂಬ ನಿಯಮವಿದೆ.
ಇದಲ್ಲದೇ, ಹನಿ ನೀರಾವರಿಗೆ ಶೇ. 75ರಷ್ಟು ಸಹಾಯಧನ ಸಿಗುತ್ತದೆ (ಎಕರೆಗೆ ರೂ 15 ಸಾವಿರವರೆಗೆ). ಎಕರೆಗೆ ತಲಾ ್ಙ 45 ಸಾವಿರದಂತೆ ಜಿಲ್ಲೆಯಲ್ಲಿ 160 ಎಕರೆಗೆ ಸಹಾಯಧನ ನೀಡಲು ಮಂಜೂರಾತಿ ನೀಡಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕದಿರೇಗೌಡ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.
ವರ್ಷದಿಂದ ವರ್ಷಕ್ಕೆ ಅಂಗಾಂಶ ಕೃಷಿ ಬಾಳೆ ಬೆಳೆಯುವ ಪ್ರದೇಶ ವಿಸ್ತರಣೆ ಆಗುತ್ತಿದೆ. ಇದರಿಂದ ಉತ್ತಮ ಇಳುವರಿ ಬರುತ್ತದೆ. ಎಲ್ಲ ಗಿಡಗಳಲ್ಲಿನ ಗೊನೆಗಳೂ ಸಹ ಸಾಮಾನ್ಯವಾಗಿ ಏಕಕಾಲಕ್ಕೆ ಹಣ್ಣಾಗುತ್ತವೆ. ಆಗ ರೈತರಿಗೆ ಕೊಯ್ಲಿಗೆ, ಮಾರುಕಟ್ಟೆಗೆ ಪೂರೈಕೆ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಒಂದೇ ಬಾರಿಗೆ ಇಳುವರಿ ಹಾಗೂ ಆದಾಯ ಕಾಣಬಹುದು.
`ಜಿ-9~ ತಳಿಯ ಅಂಗಾಂಶ ಕೃಷಿ ಬಾಳೆ ಗಿಡವೊಂದರಿಂದ 60-70 ಕೆ.ಜಿ. ಇಳುವರಿ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕೆ.ಜಿ.ಗೆ ಸರಾಸರಿ ್ಙ 6ರಿಂದ 8 ಬೆಲೆ ಇರುತ್ತದೆ. ಒಮ್ಮಮ್ಮೆ ್ಙ 15ರವರೆಗೆ ಬೆಲೆ ಏರಿಕೆಯೂ ಆಗುತ್ತದೆ. ಜಿಲ್ಲೆಯಲ್ಲಿ ಬೆಳೆಯುವ ಬಾಳೆಯನ್ನು ಬೆಂಗಳೂರು, ಪುಣೆ, ಕೋಲ್ಕತ್ತಾ, ಮುಂಬೈ ಮತ್ತಿತರ ಕಡೆಗಳಿಗೂ ಸಹ ರಫ್ತು ಮಾಡಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ್ಙ 5.4 ಕೋಟಿ ವೆಚ್ಚದಲ್ಲಿ ಜೈವಿಕ ಕೇಂದ್ರ (ಬಯೋ ಸೆಂಟರ್) ನಿರ್ಮಿಸುವ ಮಹತ್ವದ ಯೋಜನೆಗೆ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ಕೆವಿವೈ) ಅಡಿಯಲ್ಲಿ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ತೋಟಗಾರಿಕಾ ಕ್ಷೇತ್ರದಲ್ಲಿ ಜೈವಿಕ ಕೇಂದ್ರ ಮೈದಳೆಯಲಿದೆ.
ಇಲ್ಲಿ ಅಂಗಾಂಶ ಕೃಷಿ (ಟಿಶ್ಯು ಕಲ್ಚರ್)ಯಲ್ಲಿ ಬಾಳೆ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗುವುದು. ಪ್ರಸ್ತುತ ಮಧ್ಯ ಕರ್ನಾಟಕದಲ್ಲಿ ಅಂಗಾಂಶ ಕೃಷಿಯಿಂದ ಸಿದ್ಧಪಡಿಸಿದ ಬಾಳೆ ಸಸಿಗಳಿಗಾಗಿ ರೈತರು ಹುಬ್ಬಳ್ಳಿ ಆಥವಾ ಬೆಂಗಳೂರಿಗೆ ಹೋಗಬೇಕಾದ ಸ್ಥಿತಿ ಇದೆ. ಜಿಲ್ಲೆಯಲ್ಲಿ ದಾವಣಗೆರೆ, ಹೊನ್ನಾಳಿ, ಹರಿಹರ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಬಾಳೆ ಕೃಷಿ ಕಂಡುಬರುತ್ತಿದೆ.
ವಾರ್ಷಿಕ 15 ರಿಂದ 20 ಲಕ್ಷ ಸಸಿಗಳ ಬೇಡಿಕೆ ಇದೆ. ಇಂಥ ಸಸಿಗಳನ್ನು ದಾವಣಗೆರೆಯಲ್ಲಿಯೇ ಜೈವಿಕ ಕೇಂದ್ರ ಸಿದ್ಧವಾದ ನಂತರ ಪಡೆಯಬಹುದು. ಇದರಿಂದ ಇತರೆಡೆಗೆ ಅಲೆಯುವುದು ತಪ್ಪುತ್ತದೆ. ಅಲ್ಲದೇ, ಅಂಗಾಂಶ ಕೃಷಿ ಚಟುವಟಿಕೆಗಾಗಿ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ತಿಳಿಸುತ್ತಾರೆ ಅವರು.
`ಮೂರು ವರ್ಷಗಳಿಂದ ಅಂಗಾಂಶ ಕೃಷಿ ಬಾಳೆ ಬೆಳೆಯುತ್ತಿದ್ದೇವೆ. ಮಾಮೂಲಿ ಬಾಳೆಯಾದರೆ, ಒಂದೇ ಬಾರಿ ಕಟಾವಿಗೆ ಬರುವುದಿಲ್ಲ. ಇದರಿಂದ ಮಾರುಕಟ್ಟೆಗೆ ಸಾಗಿಸುವುದಕ್ಕೆ ತೊಂದರೆ ಆಗುತ್ತದೆ. ಅಂಗಾಂಶ ಕೃಷಿ ಬಾಳೆಯಾದರೆ, ಕೇವಲ ತಿಂಗಳ ವ್ಯತ್ಯಾಸದಲ್ಲಿಯೇ ಕಟಾವಿಗೆ ಬರುತ್ತದೆ. ಆಗ, ಒಂದೇ ಬಾರಿಗೆ ಮಾರಾಟ ಮಾಡಲು ಅನುಕೂಲ ಆಗುತ್ತದೆ. ಅಂಗಾಂಶ ಕೃಷಿ ಬಾಳೆಯಲ್ಲಿ ರೋಗ ಕಡಿಮೆ ಹಾಗೂ ಇಳುವರಿ ಜಾಸ್ತಿ ಬರುತ್ತದೆ~ ಎಂದು ಚನ್ನಗಿರಿ ತಾಲ್ಲೂಕಿನ ಗೋಪೇನಹಳ್ಳಿಯ ರೈತ ಅನಿಲ್ಕುಮಾರ್ ತಿಳಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.