ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಅಲಿಕಲ್ಲು ಮಳೆ ಇಟ್ಟಿಗೆ ಉದ್ಯಮಕ್ಕೆ ಲಕ್ಷಾಂತರ ರೂ ನಷ್ಟ ಉಂಟುಮಾಡಿದೆ ಎಂದು ಭಟ್ಟಿಗಳ ಮಾಲೀಕರು ಶುಕ್ರವಾರ ಆತಂಕ ವ್ಯಕ್ತಪಡಿಸಿದರು.
ಇಟ್ಟಿಗೆ ಭಟ್ಟಿಗಳು ಕುಸಿದಿವೆ, ಇಟ್ಟಿಗೆ ತೊಯ್ದು ತೊಪ್ಪೆಯಾಗಿವೆ. ತಯಾರಿಸಿ ಒಣಗಲು ಸಂಗ್ರಹಿಸಿದ್ದ ಇಟ್ಟಿಗೆ ರಾಶಿ ಕೂಡ ಹಾಳಾಗಿದೆ. ಭಟ್ಟಿ ಇಟ್ಟಿಗೆ ಅರೆಬರೆ ಬೆಂದಿವೆ ನಾಟಿ ಇಟ್ಟಿಗೆ, ಟೇಬಲ್ ಇಟ್ಟಿಗೆ ಹಾಳಾಗಿವೆ ಎಂದು ರಾಶಿ ತೋರಿಸಿದರು.
ಜತೆಗೆ, ಕಳೆದ ಎರಡು ಮೂರು ದಿನಗಳಿಂದ ಎಳೆದಿದ್ದ ಇಟ್ಟಿಗೆ ಸಂಪೂರ್ಣ ನಾಶವಾಗಿದೆ. ಮಣ್ಣಿನ ರಾಶಿ, ಗೊಳಲು ಹಾಗೂ ಸೊಪ್ಪು-ಸದೆ ಕೊಚ್ಚಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷಕ್ಕಿಂತ ಈ ಬಾರಿ ಇಟ್ಟಿಗೆಗೆ ಬೇಡಿಕೆ ಇತ್ತು. ತೇರು ಜಾತ್ರೆ ನಂತರ ಜನರು ಮುಂಗಡ ನೀಡಿದ್ದರು. ಇಟ್ಟಿಗೆ ತಯಾರಿಸಲು ಬ್ಯಾಂಕ್ಗಳಿಂದ ಸಾಲ ಪಡೆದಿದ್ದೇವೆ.ಈಗ ಎಲ್ಲ ಕೊಚ್ಚಿಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮಾಲೀಕರು ತಿಳಿಸಿದರು.