ಧಾರವಾಡ: ಇಲ್ಲಿಯ ಡಿಸಿ ಕಂಪೌಂಡ್ನಲ್ಲಿರುವ ‘ಅಕ್ಕನ ಬಳಗ’ದ ಅಮೃತ ಮಹೋತ್ಸವ ಇದೇ 4–5ರಂದು ನಗರದಲ್ಲಿ ನಡೆಯಲಿದೆ ಎಂದು ಬಳಗದ ಅಧ್ಯಕ್ಷೆ ಪ್ರಭಾವತಿ ಮೂರಶಿಳ್ಳಿ ಹೇಳಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರು ವಚನ ಸಾಹಿತ್ಯವನ್ನು ಅಭ್ಯಾಸ ಮಾಡಬೇಕು.
ಶರಣಧರ್ಮ ತತ್ವಗಳನ್ನು ಆಚರಿಸಬೇಕು ಎಂಬ ಉದ್ದೇಶದಿಂದ ಪ್ರೊ.ಸ.ಸ. ಮಾಳವಾಡ, ವಿ.ಬಿ. ಹಾಲಭಾವಿ ಅವರ ಬೆಂಬಲದೊಂದಿಗೆ 1938ರಲ್ಲಿ ಬಸವನಾಳರ ಮನೆಯಲ್ಲಿ ಧಾರವಾಡ ಮಾಳಮಡ್ಡಿ ಅಕ್ಕನ ಬಳಗ’ ಎಂಬ ಹೆಸರಿನಿಂದ ಸಂಸ್ಥೆ ಶುರುವಾಯಿತು. ಇದೀಗ ಸಂಸ್ಥೆಗೆ 75 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ 4ರಂದು ಸಂಜೆ ಜರುಗುವ ಅಕ್ಕಮಹಾದೇವಿಯ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಚಾಲನೆ ನೀಡುವರು.
ಜ 5ರಂದು ಬೆಳಿಗ್ಗೆ ಷಟ್ಸ್ಥಲ ಧ್ವಜಾರೋಹಣ, ಶಿಲಾಫಲಕದ ಅನಾವರಣ ನೆರವೇರುವುದು. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ–ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ವಹಿಸುವರು. ‘ಅಮೃತ ವಿರಾಗಿಣಿ’ ಸ್ಮರಣ ಸಂಚಿಕೆಯನ್ನು ಶಾಸಕ ವಿನಯ ಕುಲಕರ್ಣಿ, ಡಾ.ವೀರಣ್ಣ ರಾಜೂರ ಅವರು ಸಂಪಾದಿಸಿದ ‘ಕದಳಿಯ ಕಲ್ಪತರು’ ಸ್ಮರಣ ಸಂಪುಟವನ್ನು ಇನ್ನೋರ್ವ ಶಾಸಕ ಅರವಿಂದ ಬೆಲ್ಲದ ಬಿಡುಗಡೆ ಮಾಡಲಿದ್ದಾರೆ’ ಎಂದರು.
‘ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ ಜೋಶಿ ಮಹಾದೇವಿ ಅಕ್ಕನ ಜೀವನದ ಚಿತ್ರಗಳನ್ನು ಬಿಡುಗಡೆ ಮಾಡುವರು. ಮಧ್ಯಾಹ್ನ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಧಾರ್ಮಿಕ ನೆಲೆಯಲ್ಲಿ ಮಹಿಳೆ ಕುರಿತು ಬೀದರನ ಅನ್ನಪೂರ್ಣ, ಕೌಟುಂಬಿಕ ನೆಲೆಯಲ್ಲಿ ಮಹಿಳೆ ಕುರಿತು ಗಿರಿಜಾ ಕಾಡಯ್ಯನಮಠ, ಸಾಹಿತ್ಯಿಕ ನೆಲೆಯಲ್ಲಿ ಮಹಿಳೆ ಕುರಿತು ಶಾರದಾ ಕಿರೇಸೂರ ಉಪನ್ಯಾಸ ನೀಡಲಿದ್ದಾರೆ’ ಎಂದು ವಿವರಿಸಿದರು. ಕಸ್ತೂರಿ ಜಿಗಜಿನ್ನಿ, ಲೀಲಾವತಿ ಬೆಲ್ಲದ, ಶಾಂತಕ್ಕ ಬೆಣ್ಣಿ, ಉಮಾದೇವಿ ಬಳ್ಳಾರಿ, ಪ್ರೇಮಾ ಹಲಕಿ, ನಳಿನಾಕ್ಷಿ, ಶಾರದಾ ಕೌದಿ ಇತರರು ಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.